ನಿಶ್ಚಿತಾರ್ಥಕ್ಕೆ ಚೌಲ್ಟ್ರಿ ಬುಕ್ ಮಾಡಿ ವಾಪಸ್ಸಾಗುವಾಗ ಟ್ರಾನ್ಸ್ಫಾರ್ಮರ್ ಸ್ಫೋಟಕ್ಕೆ ತಂದೆ ಮಗಳು ಬಲಿ!
ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ (Transformer) ಸ್ಫೋಟಗೊಂಡು ಸ್ಕೂಟರ್ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ, ಮಗಳು ಮೃತಪಟ್ಟಿರುವ ದಾರುಣ ಘಟನೆ ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್ ಸಮೀಪ ನಡೆದಿದೆ.
ಬೆಂಗಳೂರು (ಮಾ. 24): ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ (Transformer) ಸ್ಫೋಟಗೊಂಡು ಸ್ಕೂಟರ್ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ, ಮಗಳು ಮೃತಪಟ್ಟಿರುವ ದಾರುಣ ಘಟನೆ ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್ ಸಮೀಪ ನಡೆದಿದೆ.
ಮಂಗನಹಳ್ಳಿ ನಿವಾಸಿ ಶಿವರಾಜ್(55) ಅವರ ಪುತ್ರಿ ಚೈತನ್ಯ(19) ಮೃತಪಟ್ಟಿದ್ದಾರೆ. ನಿಶ್ಚಿತಾರ್ಥಕ್ಕೆ ಕಲ್ಯಾಣ ಮಂಟಪ ಬುಕ್ ಮಾಡಿ ಮಗಳ ಜತೆ ಶಿವರಾಜ್ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಶಿವರಾಜ್ ಅವರು, ತಮ್ಮ ಪತ್ನಿ ಮತ್ತು ಮಗಳ ಜತೆ ಮಂಗನಹಳ್ಳಿಯಲ್ಲಿ ನೆಲೆಸಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ಚೈತನ್ಯಳಿಗೆ ಇತ್ತೀಚಿಗೆ ಮದುವೆ ನಿಶ್ಚಯವಾಗಿತ್ತು. ಶಿವರಾಜ್ ದಂಪತಿಗೆ ಚೈತನ್ಯ ಒಬ್ಬಳೇ ಮಗಳು.
ಟ್ರಾನ್ಸ್ಫಾರ್ಮರ್ನಲ್ಲಿ ಬೆಂಕಿ ಕಿಡಿ ಕಾಣಿಸಿದ ಕೂಡಲೇ ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಆ ಭಾಗದ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಬೆಸ್ಕಾಂ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ತಂದೆ-ಮಗಳು ಜೀವ ಅಪಾಯಕ್ಕೆ ಸಿಲುಕಿದೆ ಎಂದು ಪೊಲೀಸರು ಹೇಳಿದ್ದಾರೆ.