
News Hour: ರಾಜ್ಯದ ಇತರ ಜಿಲ್ಲೆಗಳಲ್ಲೂ ಅಕ್ರಮದ ಜಾಡು! ಪಿಎಸ್ಐ ನೇಮಕಾತಿ ಹಗರಣದ ಕಿಂಗ್ಪಿನ್ ಯಾರು?
ಪಿಎಸ್ಐ ನೇಮಕಾತಿ ಹಗರಣದ ತನಿಖೆ ಮುಂದುವರಿಯುತ್ತಿದ್ದಂತೆ, ಅಕ್ರಮದ ಜಾಡು ಬೇರೆ ಜಿಲ್ಲೆಗಳಿಗೂ ವಿಸ್ತರಿಸಿರುವ ಸುಳಿವು ಸಿಕ್ಕಿದೆ. ಕ್ಷಣಕ್ಕೊಂದು ಹೊಸವಿಚಾರ, ದಿನಕ್ಕೊಂದು ಹೊಸ ಸುಳಿವು ಬಯಲಾಗುತ್ತಿದೆ.
ಬೆಂಗಳೂರು (ಮೇ.6): ಪಿಎಸ್ಐ ನೇಮಕಾತಿ ಹಗಣರದಲ್ಲಿ (PSI Recruitment Scam) ಸಿಐಡಿ ತನಿಖೆ ಇನ್ನಷ್ಟು ಚುರುಕು ಮಾಡುತ್ತಿದ್ದಂತೆ, ಅಕ್ರಮದ ಬೇರುಗಳು ಇನ್ನಷ್ಟು ವಿಸ್ತಾರವಾಗಿವವೆ. ಈವರೆಗೂ ಬೆಂಗಳೂರು (Bengaluru) ಹಾಗೂ ಕಲಬುರಗಿಯಲ್ಲಿ (Kalaburagi) ಮಾತ್ರವೇ ವ್ಯಾಪಿಸಿದೆ ಎನ್ನಲಾಗಿದ್ದ ಪರೀಕ್ಷಾ ಅಕ್ರಮ (Exam Scam) ಈಗ ರಾಜ್ಯದ ಇತರ ಜಿಲ್ಲೆಗಳಿಗೂ ವ್ಯಾಪಿಸಿದೆ.
ಸಿಐಡಿ (CID) ಹೇಳಿರುವ ಪ್ರಕಾರ, ತುಮಕೂರು ಹಾಗೂ ಮಂಗಳೂರಿನ ಕೆಲ ಪರೀಕ್ಷಾ ಕೇಂದ್ರಗಳ ಮೇಲೂ ಅನುಮಾನ ವ್ಯಕ್ತಪಡಿಸಿದೆ. ಪರೀಕ್ಷೆ ನಡೆದ 92 ಕೇಂದ್ರಗಳ ಪೈಕಿ ಕನಿಷ್ಠ 40ರಲ್ಲಿ ಅಕ್ರಮ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದೆ.
ಸರ್ಕಾರಕ್ಕೂ ದೊಡ್ಡ ಮಟ್ಟದಲ್ಲಿ ಮುಜುಗರ ತಂದಿರುವ ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಬಗೆದಷ್ಟು ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿದೆ. ಪೊಲೀಸರಿಂದಲೇ ಕಿಂಗ್ ಪಿನ್ ಗಳಿಗೆ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲಾಗಿತ್ತು. ಡಿವೈಎಸ್ ಪಿ ಮಲ್ಲಿಕಾರ್ಜುನ್ ಸಾಲಿ (DYSP Mallikarjun Sali), ಕಿಂಗ್ ಪಿನ್ ಗಳಿಂದ ದುಡ್ಡು ಕಿತ್ತಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ.
ಪಿಎಸ್ಐ ನೇಮಕಾತಿ ಹಗರಣ: ತುಮಕೂರು, ಮಂಗಳೂರಿನ ಕೇಂದ್ರಗಳಲ್ಲೂ ಅಕ್ರಮ?
ಇನ್ನೊಂದೆಡೆ ಸಚಿವ ಅಶ್ವತ್ಥ್ ನಾರಾಯಣ್ ಅವರ ಸಂಬಂಧಿಗಳು ಎನ್ನಲಾಗಿರುವ ನಾಗೇಶ್ ಗೌಡ ಹಾಗೂ ದರ್ಶನ್ ಗೌಡ ಅಕ್ರಮ ನಡೆಸಿ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿರುವ ಬೆನ್ನಲ್ಲೇ, ದರ್ಶನ್ ಗೌಡ ಅವರ ತಂದೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅಶ್ವತ್ಥ್ ನಾರಾಯಣ್ ನಮಗೆ ದೂರದ ಸಂಬಂಧಿ, ನಾವು ಧೈರ್ಯವಾಗಿದ್ದೇವೆ ಎಲ್ಲೂ ಊರು ಬಿಟ್ಟು ಹೋಗಿಲ್ಲ. ನಾವು ಮದುವೆಗಾಗಿ ಜಮೀನು ಮಾರಿದ್ದೆವು ಎಂದು ವೆಂಕಟೇಶ್ ಗೌಡ ಹೇಳಿದ್ದಾರೆ.