Asianet Suvarna News Asianet Suvarna News

ಜಾಹೀರಾತುಗಳ ಮೇಲೆ ನಡೆಯುತ್ತಿರುವ, ಟೈಂ ಪಾಸ್‌ ಸರ್ಕಾರ: ಎಚ್‌ಡಿಕೆ

ಸರ್ಕಾರದ ಬಗ್ಗೆ ಮಂತ್ರಿಗಳೇ ಹೇಳಿರೋದು ಸಾರ್ವಜನಿಕರ ಭಾವನೆಯೂ ಹೌದು. ಈ ಸರ್ಕಾರ ಸಮಯ ತಳ್ಳುತ್ತಿರುವ,  ಜಾಹಿರಾತುಗಳ ಮೇಲೆ ನಡೆಯುತ್ತಿರುವ ಸರ್ಕಾರ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಆ. 16): ಸರ್ಕಾರದ ಬಗ್ಗೆ ಸಚಿವ ಜೆಸಿ ಮಾಧುಸ್ವಾಮಿ ನೀಡಿರುವ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧುಸ್ವಾಮಿ ಒಬ್ಬ ಜವಾಬ್ದಾರಿಯುತ ಸಚಿವ, ಸರ್ಕಾರದ ನಡೆ ಬಗ್ಗೆ ಮಂತ್ರಿಗಳಿಂದಲೇ ಈ ಮಾತು ಬಂದಿದೆ. ಇದು ಸಾರ್ವಜನಿಕರಲ್ಲಿ ಇರುವ ಭಾವನೆಯೂ ಹೌದು ಎಂದು ಹೇಳಿದ್ದಾರೆ.

ಚೆನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರದ ಬಗ್ಗೆ ಮಾಧುಸ್ವಾಮಿ ಅವರಲ್ಲಿಯೇ ವಿಶ್ವಾಸವಿಲ್ಲದೆ ಇರೋದನ್ನ ನಾನು ಗಮನಿಸಿದ್ದೇನೆ. ಬೇರೆ ಮಂತ್ರಿಗಳು ಕೊಟ್ಟ ಹೇಳಿಕೆಯನ್ನೂ ಗಮನಿಸಿದ್ದೇನೆ. ಇದು ಜಾಹೀರಾತುಗಳ ಮೇಲೆ ನಡೆಯುತ್ತಿರುವ ಸರ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ನಡಿಸ್ತಾ ಇಲ್ಲ, ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಮಾಧುಸ್ವಾಮಿ ರಾಜೀನಾಮೆಗೆ ಮುನಿರತ್ನ ಆಗ್ರಹ

ಮಾಧುಸ್ವಾಮಿ ಸರ್ಕಾರದಲ್ಲಿ ಪ್ರಮುಖ ಸಚಿವ, ಅದರಲ್ಲೂ ಕಾನೂನು ಇಲಾಖೆಯನ್ನು ಅವರು ನಿಭಾಯಿಸುತ್ತಿದ್ದಾರೆ. ಸರ್ಕಾರದ ನಡೆ ಯಾವ ರೀತಿ ಇದೆ ಅನ್ನೋದು ಅಭಿಪ್ರಾಯ ಮಂತ್ರಿಗಳಿಂದಲೇ ಬಂದಿದೆ. ಈ ಸರ್ಕಾರ ಸಮಯ ತಳ್ಳುತ್ತಿರುವ ಸರ್ಕಾರ, ಜಾಹೀರಾತಿನ ಮೇಲೆ ನಡೆಯುತ್ತಿರೋ ಸರ್ಕಾರ ಎಂದು ಟೀಕಿಸಿದ್ದಾರೆ.