ಈದ್ಗಾ ಮೈದಾನ ವಿವಾದ: ಯೂ ಟರ್ನ್ ಹೊಡೆದ ಬಿಬಿಎಂಪಿ ಆಯುಕ್ತ, ಹಿಂದೂ ಸಂಘಟನೆಗಳ ಆಕ್ರೋಶ
ವಿವಾದಾತೀತ ಚಾಮರಾಜಪೇಟೆಯ ಈದ್ಗಾ ಮೈದಾನವು ಬಿಬಿಎಂಪಿ ಸುಪರ್ದಿಯಲ್ಲಿ ಇತ್ತೇ ಹೊರತು ಬಿಬಿಎಂಪಿಯ ಆಸ್ತಿ ಅಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು (ಜೂ. 23): ವಿವಾದಾತೀತ ಚಾಮರಾಜಪೇಟೆಯ ಈದ್ಗಾ ಮೈದಾನವು ಬಿಬಿಎಂಪಿ ಸುಪರ್ದಿಯಲ್ಲಿ ಇತ್ತೇ ಹೊರತು ಬಿಬಿಎಂಪಿಯ ಆಸ್ತಿ ಅಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಚಾಮರಾಜಪೇಟೆಯ ಆಟದ ಮೈದಾನ ಬಿಬಿಎಂಪಿ ಆಸ್ತಿ ಅಲ್ಲ ಎಂಬ ಹೇಳಿಕೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಹಿಂದೂ ಪರ ಸಂಘಟನೆಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ಮೋಹನ್ಗೌಡ ಮಾತನಾಡಿ, ಚಾಮರಾಜಪೇಟೆ ಮೈದಾನವು 1976ರಲ್ಲಿ ಬಿಬಿಎಂಪಿ ಆಸ್ತಿಯೆಂಬುದು ಸ್ಪಷ್ಟದಾಖಲೆಯಿದೆ. ಆದರೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮೈದಾನವು ವಕ್ಫ್ ಆಸ್ತಿಯೆಂದು ಉಲ್ಟಾಹೊಡೆದಿದ್ದಾರೆ. ಕೂಡಲೇ, ವಕ್ಫ್ ಬೋರ್ಡ್ನಿಂದ ಪಾಲಿಕೆಗೆ ಸಲ್ಲಿಸಿದ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಒಳಸಂಚಿನಿಂದ ಕೋಟ್ಯಂತರ ರು. ಮೌಲ್ಯದ ಮೈದಾನವನ್ನು ಕಬಳಿಸುವ ಸಂಚು ರೂಪಿಸಿ ಒಂದು ಧರ್ಮದ ಹೆಸರಿಗೆ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.