
Dog Run Over By Audi: ಅಮಾಯಕ ನಾಯಿ ಮೇಲೆ ಆದಿ ದರ್ಪಕ್ಕೆ ನಟಿ ರಮ್ಯಾ ಖಂಡನೆ!
*ಆದಿಕೇಶವುಲು ಮೊಮ್ಮಗ ಆದಿ ಕಾರು ಹತ್ತಿಸಿದ್ದರಿಂದ ಸಾವನ್ನಪ್ಪಿದ ಲಾರಾ
*ನಟಿ ರಮ್ಯಾ, ಪ್ರಾಣಿಪ್ರಿಯರಿಂದ ನಮನ: ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
*ಅರ್ಧ ಕಿಮೀ ದೂರದಲ್ಲಿ ದೇಹ ಪತ್ತೆ: ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
ಬೆಂಗಳೂರು(ಫೆ. 02): ಉದ್ಯಮಿ ದಿವಂಗತ ಆದಿಕೇಶವುಲು ಮೊಮ್ಮಗ ಆದಿ ಕಾರು ಹತ್ತಿಸಿದ್ದರಿಂದ ಮೃತಪಟ್ಟಿದ್ದ ಬೀದಿ ನಾಯಿ ‘ಲಾರಾ’ ಮೃತದೇಹವನ್ನು ಮಂಗಳವಾರ ನಗರದ ಸುಮ್ಮನಹಳ್ಳಿಯ ಬಿಬಿಎಂಪಿ ಪ್ರಾಣಿ ಚಿತಾಗಾರದಲ್ಲಿ ಹಲವರ ಕಣ್ಣೀರ ನಡುವೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಸಂಸದೆ ಹಾಗೂ ಸ್ಯಾಂಡವುಲ್ ನಟಿ ರಮ್ಯಾ ಸೇರಿದಂತೆ ಹಲವು ಪ್ರಾಣಿಪ್ರಿಯರು ‘ಲಾರಾ’ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು.
ಇದನ್ನೂ ಓದಿ: Animal Cruelty : ಶ್ವಾನದ ಮೇಲೆ ಕಾರು ಹತ್ತಿಸಿದ ಆದಿ ಬಂಧನ, ಕೆಲ ಹೊತ್ತಲ್ಲೆ ಬಿಡುಗಡೆ
ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ರಮ್ಯಾ, ಮನುಷ್ಯ ತಪ್ಪು ಮಾಡುವುದು ಸಹಜ. ಆಕಸ್ಮಿಕವಾಗಿ ಆಗುವ ತಪ್ಪು ಕ್ಷಮಿಸಬಹುದು. ಆದರೆ, ಈ ನಾಯಿ ಲಾರಾ ವಿಚಾರದಲ್ಲಿ ಆದಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದ್ದಾನೆ. ಇದು ನನಗೆ ತುಂಬಾ ನೋವಾಯಿತು. ರಾಜಕಾರಣಿ ಆದಿಕೇಶವಲು ಕುಟುಂಬ ನಮಗೆ ಪರಿಚಯ. ಆದಿಯನ್ನು ನಾನು ತುಂಬಾ ಚಿಕ್ಕವನಿದ್ದಾಗ ನೋಡಿದ್ದೆ. ಆತನನ್ನು ನಾನು ಯಾವಾಗಲೂ ಭೇಟಿಯಾಗಿಲ್ಲ. ಯಾರೇ ತಪ್ಪು ಮಾಡಿದರೂ ತಪ್ಪೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಪಶು ಕಾನೂನು ಕಠಿಣವಾಗಿಲ್ಲ. 50 ರು. ಕೊಟ್ಟು ಠಾಣಾ ಬೇಲ್ ತೆಗೆದುಕೊಂಡು ಹೊರಬರುತ್ತಾರೆ. ಈಗಾಗಲೇ ಸರ್ಕಾರ ಪಶು ಕಾನೂನು ಕಠಿಣಗೊಳಿಸಲು ಕರಡು ಸಿದ್ಧಪಡಿದಿದೆ. .75 ಸಾವಿರ ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ರೂಪಿಸುತ್ತಿದೆ. ಆದಷ್ಟುಬೇಗ ಈ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಜತೆಗೆ ಟ್ವಿಟರ್ನಲ್ಲಿ ಈ ಘಟನೆ ಬಗ್ಗೆ ತಮಗೆ ತಿಳಿಯಿತು. ಈ ಸಂಬಂಧ ಹಲವು ಸಚಿವರು, ಸಂಸದರ ಗಮನಕ್ಕೆ ತರಲಾಗಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸೇರಿದಂತೆ ಬಿಜೆಪಿಯ ಕೆಲ ಸಚಿವರು ಸ್ಪಂದಿಸಿದ್ದಾರೆ. ಹೀಗಾಗಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಕಾನೂನು ಬಿಗಿಯಾಗಬೇಕು. ಎಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದು ರಮ್ಯಾ ಹೇಳಿದರು.