
ಬೆಂಗಳೂರಿನಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ, 25 ಕ್ಕೂ ಹೆಚ್ಚು ಮರ ಧರೆಗೆ
ರಾಜಧಾನಿ ಬೆಂಗಳೂರಿನಲ್ಲಿ ಸತತ ಎರಡನೇ ದಿನ ಧಾರಾಕಾರ ಮಳೆ ಮುಂದುವರೆದಿದ್ದು, 25ಕ್ಕೂ ಹೆಚ್ಚು ಮರ ಧರೆಗುರುಳಿವೆ. ಜಂಕ್ಷನ್ ಮತ್ತು ಅಂಡರ್ ಪಾಸ್ಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು.
ಬೆಂಗಳೂರು (ಮೇ. 02): ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸತತ ಎರಡನೇ ದಿನ ಧಾರಾಕಾರ ಮಳೆ (Rain) ಮುಂದುವರೆದಿದ್ದು, 25ಕ್ಕೂ ಹೆಚ್ಚು ಮರ ಧರೆಗುರುಳಿವೆ. ಜಂಕ್ಷನ್ ಮತ್ತು ಅಂಡರ್ ಪಾಸ್ಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು.
ಗಾಳಿ ಪ್ರಮಾಣ ಹೆಚ್ಚಾಗಿದ್ದರಿಂದ ಬಿಟಿಎಂ ಲೇಔಟ್ನಲ್ಲಿ 10ಕ್ಕೂ ಹೆಚ್ಚು ಮರ ಹಾಗೂ ಮರ ರಂಬೆಗಳು ಧರೆಗುರುಳಿವೆ. ವೈಟ್ಫೀಲ್ಡ್, ಸದಾನಂದ ನಗರ, ಶ್ರೀರಾಮಪುರ, ಮೈಕೋ ಲೇಔಟ್, ಡೈರಿ ವೃತ್ತ, ಗೋವಿಂದರಾಜ ನಗರದಲ್ಲಿ ತಲಾ ಒಂದು ಮರ ಬಿದ್ದ ವರದಿಯಾಗಿದೆ. ಇನ್ನು ಕೆ.ಆರ್.ರಸ್ತೆಯಲ್ಲಿ ಬಿಎಂಸಿಟಿ ಬಸ್ ಮೇಲೆ ಮರ ಬಿದ್ದಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಇದೇ ವೇಳೆ ಆಟೋ, ಕಾರು ಜಖಂಗೊಂಡಿವೆ. ಉತ್ತರಹಳ್ಳಿಯ ಲಕ್ಷಯ್ಯ ಲೇಔಟ್ನಲ್ಲಿ ಕಳೆದ 20 ದಿನಗಳ ಹಿಂದೆ ಮಳೆ ಸುರಿದ ವೇಳೆ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಭಾನುವಾರ ಮಳೆಗೂ ರಾಜಕಾಲುವೆಯ ಅಕ್ಕಪಕ್ಕದಲ್ಲಿರುವ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಇಡೀ ಪ್ರದೇಶ ಜಲಾವೃತಗೊಂಡಿದ್ದು, ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.