Tweet Against Judge: ನಟ ಚೇತನ್ಗೆ 14 ದಿನ ನ್ಯಾಯಾಂಗ ಬಂಧನ, ಜಾಮೀನಿಗೆ ಅರ್ಜಿ
ಸಾಮಾಜಿಕ ಜಾಲತಾಣ ಟ್ವೀಟರ್ನಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಬಗ್ಗೆ ನಿಂದನೆ ಮಾಡಿದ ಆರೋಪದಡಿ ನಟ ಚೇತನ್ ಕುಮಾರ್ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ 23): ಸಾಮಾಜಿಕ ಜಾಲತಾಣ ಟ್ವೀಟರ್ನಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಬಗ್ಗೆ ನಿಂದನೆ ಮಾಡಿದ ಆರೋಪದಡಿ ನಟ ಚೇತನ್ ಕುಮಾರ್ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಂದನಾತ್ಮಕ ಟ್ವೀಟ್ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಚೇತನ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನಟ ಚೇತನ್ ತಮ್ಮ ಟ್ವೀಟರ್ ಖಾತೆಯಲ್ಲಿ ‘ಈ ವಾರ ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರದ ಆರೋಪಿ ರಾಕೇಶ್ಗೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ, ಅತ್ಯಾಚಾರದ ನಂತರ ಮಲಗುವುದು ಒಬ್ಬ ಭಾರತೀಯ ಮಹಿಳೆಗೆ ನಾಚಿಕೆಗೇಡಿನ ಸಂಗತಿ, ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿಕ್ರಿಯಿಸುವ ರೀತಿಯಲ್ಲ ಅದು ಎಂಬ ಹೇಳಿಕೆ ನೀಡಿದ್ದರು. 21ನೇ ಶತಮಾನದಲ್ಲೂ ಕೂಡ ನ್ಯಾಯಾಂಗದ ದೀಕ್ಷಿತ್ ಅವರ ಈ ಸ್ತ್ರೀದ್ವೇಷ ನಾಚಿಗೇಡಿನ ಸಂಗತಿ’ ಎಂಬ ತಮ್ಮದೇ ಹಳೆಯ ಟ್ವೀಟನ್ನು ಮತ್ತೆ ಪೋಸ್ಟ್ ಮಾಡಿದ್ದರು.
ಪೊಲೀಸರು ಚೇತನ್ ಅವರನ್ನು ಕರೆದೊಯ್ಯುವಾಗ ಯಾವುದೇ ನೋಟಿಸ್ ನೀಡಿಲ್ಲ. ಕುಟುಂಬದವರಿಗೆ ಯಾವುದೇ ಮಾಹಿತಿ ನೀಡಿಲ್ಲ. ನಾನು ಮನೆಯಲ್ಲೇ ಇದ್ದರೂ ನನಗೆ ವಿಷಯ ತಿಳಿಸದೆ ಕರೆದೊಯ್ಯಲಾಗಿದೆ ಎಂದು ಪತ್ನಿ ಮೇಘನಾ ಆರೋಪಿಸಿದ್ದಾರೆ.