6 ಮಂದಿಗೆ ಕಾಮನ್ವೆಲ್ತ್ ಪದಕ, ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಅಥ್ಲೀಟ್ಗಳಿಗೆ ಭರ್ಜರಿ ಸ್ವಾಗತ!
ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆದ 9 ಅಥ್ಲೀಟ್ಗಳ ಪೈಕಿ 6 ಮಂದಿ ಪದಕ ಜಯಿಸಿದ್ದಾರೆ. ಇವುಗಳ ಪೈಕಿ ಮೂವರು ಬೆಂಗಳೂರಿಗೆ ವಾಪಸಾಗಿದ್ದು ಸಾಯ್ ಕೇಂದ್ರದಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಂಗಳೂರು (ಆ.9): ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂನಲ್ಲಿ ಮುಕ್ತಾಯಗೊಂಡ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದೆ. ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆದ 9 ಅಥ್ಲೀಟ್ಗಳು ಕೂಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ 6 ಅಥ್ಲೀಟ್ಗಳು ಪಕದ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಮೂವರು ಈಗಾಗಲೇ ಬೆಂಗಳೂರಿಗೆ ವಾಪಸಾಗಿದ್ದಾರೆ.
ಅಥ್ಲೀಟ್ಗಳಾದ ಅವಿನಾಶ್ ಸಬ್ಲೆ, ಎಲ್ದೋಸ್ ಪೌಲ್ ಹಾಗೂ ಅಬ್ದುಲ್ಲಾ ಮಂಗಳವಾರ ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಆಗಮಿಸಿದರು. ಇವರಿಗೆ ಕೇಂದ್ರದಲ್ಲಿ ಅದ್ದೂರಿಯಾಗಿ ಸ್ವಾಗತ ನೀಡಲಾಗಿದೆ. ನಾಗರಭಾವಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹ ಅಥ್ಲೀಟ್ಗಳು ಡಾನ್ಸ್ ಮಾಡಿ ಅಥ್ಲೀಟ್ಗಳ ಯಶಸ್ಸನ್ನು ಸಂಭ್ರಮಿಸಿದರು.
ಕಾಮನ್ವೆಲ್ತ್ನಲ್ಲಿ ಭಾರತ ಕಮಾಲ್, ಶೂಟಿಂಗ್, ಆರ್ಚರಿ ಇಲ್ಲದಿದ್ದರೂ 61 ಪದಕ ಗೆದ್ದ ಸಾಧನೆ!
ಅವಿನಾಶ್ ಸಬ್ಲೆ ಪುರುಷರ 3 ಸಾವಿರ ಮೀಟರ್ ಓಟದಲ್ಲಿ ಬೆಳ್ಳಿ ಜಯಿಸಿದರೆ, ಪುರುಷರ ಟ್ರಿಪಲ್ ಜಂಪ್ನಲ್ಲಿ ಸ್ವರ್ಣ ಪದಕ ವಿಜೇತ ಎಲ್ದೋಸ್ ಪೌಲ್ ಮತ್ತು ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಅಬ್ದುಲ್ಲಾ ಅಬೂಬಕರ್ಗೆ ಸಾಯ್ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಈ ಮೂವರ ಜೊತೆ 10 ಸಾವಿರ ಮೀಟರ್ ನಡಿಗೆಯಲ್ಲಿ ಕಂಚಿನ ಪದಕ ಗೆದ್ದ ಸಂದೀಪ್, ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಗೆದ್ದ ಪ್ರಿಯಾಂಕ ಗೋಸ್ವಾಮಿ ಮತ್ತು ಪುರುಷರ ಲಾಂಗ್ ಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದ ಮುರಳಿ ಶ್ರೀಶಂಕರ್ ಸಹ ತವರಿಗೆ ವಾಪಾಸ್ ಆಗಿದ್ದಾರೆ.