Asianet Suvarna News Asianet Suvarna News

News Hour: ಪೇಸಿಎಂ ಅಸ್ತ್ರಕ್ಕೆ ಬಿಜೆಪಿ ನಾಯಕರ ಜಾತಿ ಪ್ರತ್ಯಸ್ತ್ರ!

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಪೇಸಿಎಂ ಅಸ್ತ್ರಕ್ಕೆ ಬಿಜೆಪಿ, ಟಾರ್ಗೆಟ್‌ ಲಿಂಗಾಯತ ಸಿಎಂ ಪ್ರತ್ಯಸ್ತ್ರ ಹೂಡಿದೆ. ಪೇಸಿಎಂ ಮೂಲಕ ರಾಜ್ಯದಲ್ಲಿ ದೊಡ್ಡ ಸಮುದಾಯದ ನಾಯಕರೊಬ್ಬರನ್ನು ಕಾಂಗ್ರೆಸ್‌ ಪಕ್ಷ ಟಾರ್ಗೆಟ್‌ ಮಾಡುವ ತನ್ನ ಇತಿಹಾಸವನ್ನು ಮುಂದುವರಿಸಿದೆ ಎಂದು ಆರೋಪಿಸಿದೆ.

ಬೆಂಗಳೂರು (ಸೆ. 26): ಕಾಂಗ್ರೆಸ್‌ನ ಪೇಸಿಎಂ ಏಟಿನಿಂದ ಜರ್ಜರಿತವಾಗಿರುವ ರಾಜ್ಯ ಬಿಜೆಪಿ, ಈಗ ಜಾತಿ ಅಸ್ತ್ರವನ್ನು ತಂದು ಎದುರೇಟು ನೀಡಿದೆ. ಲಿಂಗಾಯತ ಸಿಎಂಗಳನ್ನೇ ಕಾಂಗ್ರೆಸ್‌ ಪಕ್ಷ ಈವರೆಗೂ ಟಾರ್ಗೆಟ್‌ ಮಾಡುತ್ತಿತ್ತು. ಈ ಬಾರಿ ಮತ್ತೊಮ್ಮೆ ಅದೇ ಕೆಲಸವನ್ನು ಪುನರಾವರ್ತನೆ ಮಾಡಿದೆ ಎಂಟು ಟೀಕಿಸಿದೆ.

ಈ ಕುರಿತಾಗಿ ಮಾತನಾಡಿರುವ ಸಚಿವ ಡಾ.ಕೆ.ಸುಧಾಕರ್‌, ನಾನು ತುಂಬಾ ಇತಿಹಾಸಕ್ಕೆ ಹೋಗಲು ಬಯಸೋದಿಲ್ಲ. ವೀರೇಂದ್ರ ಪಾಟೀಲ್‌ ಅವರಿಗೆ, ಎಸ್‌ಎಂ ಕೃಷ್ಣ ಅವರಿಗೆ ಕೊನೆಗೆ ನಮ್ಮ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಏನು ಮಾಡಿತು ಅನ್ನೋದು ಎಲ್ಲರಿಗೂ ಗೊತ್ತು. ದೊಡ್ಡ ಸಮುದಾಯದ ಸಿಎಂ ಅನ್ನು ಕಾಂಗ್ರೆಸ್‌ ಮೊದಲಿನಿಂದಲೂ ಟಾರ್ಗೆಟ್‌ ಮಾಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಕೂಡ ದನಿಗೂಡಿಸಿದ್ದಾರೆ.

ಡರ್ಟಿ ಪಾಲಿಟಿಕ್ಸ್‌ ಮಾಡೋದು ಸಂಘ ಪರಿವಾರದವರು: ಸಿದ್ದರಾಮಯ್ಯ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ, ಯಡಿಯೂರಪ್ಪ ಅವರನ್ನು ಕೆಳಗಿಳಿಸಿದಾಗ ಈ ಕನಿಕರ ಎಲ್ಲಿಗೆ ಹೋಗಿತ್ತು. ಬಸವಣ್ಣನ ತತ್ವಗಳನ್ನು ನೀವು ಪಾಲಿಸ್ತಿದ್ದೀರಾ, 11 ತಿಂಗಳಿಗೆ ಸದಾನಂದ ಗೌಡ ಅವರನ್ನು ಅಧಿಕಾರದಿಂದ ಇಳಿಸಿದ್ರು, ಹಾಗಿದ್ದರೆ, ನೀವೆಲ್ಲಾ ಗೌಡರ ವಿರೋಧಿಗಳಾ ಎಂದು ಪ್ರಶ್ನೆ ಮಾಡಿದ್ದಾರೆ.