Asianet Suvarna News Asianet Suvarna News

ಲೋಕಸಭೆ ಚುನಾವಣೆ: ಹಾಲಿ 10 ಬಿಜೆಪಿ ಸಂಸದರಿಗೆ ಟಿಕೆಟ್‌ ಡೌಟು, ಸದಾನಂದ ಗೌಡ ಗರಂ!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ 10 ಬಿಜೆಪಿ ಸಂಸದರಿಗೆ ಟಿಕೆಟ್‌ ಡೌಟು ಎನ್ನಲಾಗುತ್ತಿದೆ.  ಆದರೆ ಈ ವರದಿ ಬಗ್ಗೆ ಡಿವಿ ಸದಾನಂದ ಗೌಡ ಗರಂ ಆಗಿದ್ದಾರೆ. ಹಾಲಿ ಸಂಸದರ ತೇಜೋವಧೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. 

ಬೆಂಗಳೂರು (ಜೂ.07): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ 10 ಬಿಜೆಪಿ ಸಂಸದರಿಗೆ ಟಿಕೆಟ್‌ ಡೌಟು ಎನ್ನಲಾಗುತ್ತಿದೆ.  ಆದರೆ ಈ ವರದಿ ಬಗ್ಗೆ ಡಿವಿ ಸದಾನಂದ ಗೌಡ ಗರಂ ಆಗಿದ್ದಾರೆ. ಹಾಲಿ ಸಂಸದರ ತೇಜೋವಧೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಗೌರವದಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುವವರನ್ನು ಅವನು ಜನಪ್ರತಿನಿಧಿಯಾಗಿರುವುದಕ್ಕೆ ನಾಲಾಯಕ್ಕು, ಆತ ಆಯೋಗ್ಯ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದು ಬಹಳ ಬೇಸರದ ಸಂಗತಿ ಎಂದರು. ಯಾಕಾಗಿ ಈ ರೀತಿ ಮಾಡುತ್ತಾರೆ ಅಂತ ಗೊತ್ತಿಲ್ಲ. ಬಿಜೆಪಿಯನ್ನು ರಾಜ್ಯದಲ್ಲಿ ಪೂರ್ತಿ ಮುಗಿಸಬೇಕೆನ್ನುವ ಹುನ್ನಾರವೋ ಗೊತ್ತಿಲ್ಲ. ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ. 

ರಾಜ್ಯದ 13 ಜನ ಹಾಲಿ ಸಂಸದರಿಗೆ ಟಿಕೆಟ್‌ ಇಲ್ಲ, ಕೆಲವರು ಮುದುಕರಾಗಿದ್ದಾರೆ, ಕೆಲವರು ಅನಾರೋಗ್ಯಪೀಡಿತರು ಇತ್ಯಾದಿ ಹಣೆಪಟ್ಟಿಯನ್ನು ಕಟ್ಟಿಅವರ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಅಂತ ನಾನು ಭಾವಿಸುತ್ತೇನೆ. ಈ ಎಂಪಿಗಳು ಮನೆಯಿಂದ ಹೊರಡದಂತಾಗುತ್ತಿದೆ. ಇದೇ ಪ್ರಶ್ನೆಗಳು ಹಾಗೂ ಹಿಂದಿನಿಂದ ನೂರಾರು ಮಾತುಗಳು ಮುಂದಿನ ಒಂದು ವರ್ಷದ ಕಾಲ ಕರ್ತವ್ಯ ನಿರ್ವಹಣೆ ಮಾಡಲಾರದಷ್ಟು ಅಸಹಾಯಕತೆಗೆ ತಳ್ಳುತ್ತವೆ ಎಂದು ಹೇಳಿದರು. ಈ ಎಲ್ಲ ಸಂಸದರು ಗೌರವಾನ್ವಿತರು, ಸಜ್ಜನರು. ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಹಲವಾರು ಬಾರಿ ಗೆದ್ದವರು. ಘಟಾನುಘಟಿಗಳನ್ನು ಸೋಲಿಸಿದವರು. ಮುಂದೆಯೂ ರಾಜಕಾರಣದ ಎಲ್ಲಾ ಸವಾಲುಗಳನ್ನು ಎದುರಿಸಬಲ್ಲವರು. ಈ ಮಹನೀಯರ ತೇಜೋವಧೆ ಮಾಡುವಂತಹ ಪ್ರವೃತ್ತಿ ಸರ್ವಥಾ ಸಾಧುವಲ್ಲ ಎಂದರು.