ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರಲು ನಿಮ್ಮ ಶ್ರಮ ಬೇಕು: ಬಿಎಸ್ವೈಗೆ ಹೇಳಿದ ಮೋದಿ
ಕೇಂದ್ರ ಸಂಸದೀಯ ಮಂಡಳಿಯಲ್ಲಿ ತಮಗೆ ಸ್ಥಾನ ನೀಡಿರುವ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿ ಬಿ ಎಸ್ ಯಡಿಯೂರಪ್ಪ ಧನ್ಯವಾದ ತಿಳಿಸಿದ್ದಾರೆ
ಬೆಂಗಳೂರು (ಆ. 17): ಭಾರತೀಯ ಜನತಾ ಪಕ್ಷದ ಅತ್ಯಂತ ಮಹತ್ವದ ಮಂಡಳಿಯಾಗಿರುವ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಗೆ ಆಯ್ಕೆಯಾದ ಬೆನ್ನಲ್ಲಿಯೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ದಕ್ಷಿಣ ಭಾರತದ ಪ್ರಭಾವಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲಪಡಿಸಲು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ಶ್ರಮ ಬಹಳ ಅಗತ್ಯವಾಗಿದೆ ಎಂದು ಮೋದಿ ಈ ವೇಳೆ ಹೇಳಿದ್ದಾರೆ. ಅದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಪಕ್ಷ ನೀಡಲಿದೆ ಎಂದೂ ಹೇಳಿದ್ದಾರೆ.
ಬಿಜೆಪಿಯ ಸಂಸದೀಯ ಸಮಿತಿಗೆ ಇರುವ ಪವರ್ ಏನು? ಇಲ್ಲಿದೆ ಡೀಟೇಲ್ಸ್!
ಇದು ಬಿಎಸ್ವೈಗೆ ಸಿಕ್ಕ ಅತೀದೊಡ್ಡ ಜವಾಬ್ದಾರಿಯಾಗಿದೆ. ಸಂಸದೀಯ ಮಂಡಳಿಯೊಂದಿಗೆ ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪ ಸ್ಥಾನ ಪಡೆದಿದ್ದಾರೆ. ಎಲ್ಲಾ ನಿಟ್ಟಿನಲ್ಲೂ ಈ ವಿಚಾರದಲ್ಲಿ ಕೆಲಸ ಮಾಡಿ ಎಂದು ನರೇಂದ್ರ ಮೋದಿ ಅವರು ಬಿಎಸ್ವೈಗೆ ಹೇಳಿದ್ದಾರೆ ಎನ್ನಲಾಗಿದೆ.