ಮಗಳು ಎರಡೆರಡು ಬಾರಿ ಓಡಿ ಹೋಗಿದ್ದರೂ ಅಂತರ್ಜಾತಿ ಪ್ರೀತಿಗೆ ವಿರೋಧ; ಯುವಕನ ಮೇಲೆ ಹಲ್ಲೆ!

ಯಾದಗಿರಿ ಜಿಲ್ಲೆಯಲ್ಲಿ ಅಂತರ್ಜಾತಿ ಪ್ರೇಮಿಗಳಿಗೆ ಕುಟುಂಬದಿಂದಲೇ ವಿರೋಧ ವ್ಯಕ್ತವಾಗಿದೆ. ಯುವತಿಯ ಕುಟುಂಬಸ್ಥರು ಯುವಕನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಬಂದಳ್ಳಿ ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sathish Kumar KH  | Published: Dec 17, 2024, 5:27 PM IST

ಯಾದಗಿರಿ (ಡಿ.17): ಭಾರತದ ಪ್ರತಿಯೊಬ್ಬ ಪ್ರಜೆಯೂ ಸಮಾನರು ಎಂಬಂತೆ ಸಮಾತನೆಗಾಗಿ ರಚಿಸಲಾದ ಸಂವಿಧಾನ ಜಾರಿಗೊಂಡು 75 ವರ್ಷಗಳು ಕಳೆದರೂ ಇನ್ನೂ ಸಮಾನತೆ ಎಂಬ ಭಾವನೆಯೇ ಬಂದಿಲ್ಲ. ಇಲ್ಲಿ ಅಂತರ್ಜಾತಿಯ ಯುವಕ-ಯುವತಿ ಪರಸ್ಪರ ಪ್ರೀತಿ ಮಾಡಿದ್ದಕ್ಕೆ ಅವರ ಕುಟುಂಬದಿಂದ ವಿರೋಧ ವ್ಯಕ್ತವಾಗಿದ್ದು, ಜಾತಿನಿಂದನೆ ಮಾಡಿ ಹಲ್ಲೆ ಮಾಡಿರುವ ಘಟನೆ ಹೈದರಾಬಾದ್ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿಯ ಬಂದಳ್ಳಿ ಗ್ರಾಮದಲ್ಲಿ  ನಡೆದಿದೆ. ಅಂತರ್​ಜಾತಿ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿ ಯುವಕನ ಮೇಲೆ ಯುವತಿ ಪೋಷಕರಿಂದ ಹಲ್ಲೆ ಮಾಡಲಾಗಿದೆ. ದೊಣ್ಣೆ ಹಾಗೂ ಕಬ್ಬಿಣದ ರಾಡ್‌ಗಳನ್ನು ಹಿಡಿದು ಯುವಕನನ್ನು ಥಳಿಸಿ ಕೊಲೆ ಮಾಡುವುದಕ್ಕೆ ಯತ್ನಿಸಲಾಗಿದೆ. ಇನ್ನು ಜನರು ಗುಂಪು ಸೇರಿದ್ದರಿಂದ ಯುವಕನನ್ನು ಬಿಟ್ಟು ಪರಾರಿ ಆಗಿದ್ದಾರೆ. ಗಂಭೀರ ಗಾಯಗೊಂಡು ಬಳಲುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಇದೀಗ ಚೇತರಿಸಿಕೊಂಡಿದ್ದಾನೆ.

ಯಾದಗಿರಿ ಜಿಲ್ಲೆಯ ಬಂದಳ್ಳಿ ಗ್ರಾಮದವರಾದ ಸಂಗೀತಾ ಹಾಗೂ ನಿಂಗಪ್ಪ ಎನ್ನುವವರು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಆದರೆ, ಕಳೆದ ಒಂದು ತಿಂಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ಗುಜರಾತ್‌ನಲ್ಲಿ ನೆಲೆಗೊಂಡಿದ್ದರು. ಆದರೆ, ಎರಡೂ ಕುಟುಂಬದವರು ನ್ಯಾಯ ಪಂಚಾಯಿತಿ ಮಾಡಿ ಓಡಿ ಹೋಗಿದ್ದ ಯುವಕ-ಯುವತಿಯನ್ನು ವಾಪಸ್ ಕರೆಸಿಕೊಂಡಿದ್ದರು. ಇದಾದ ನಂತರ ಪ್ರೀತಿ ಮಾಡಿದ ಯುವತಿ ಸಂಗೀತಾ ಪುನಃ ಮತ್ತೊಮ್ಮೆ ನಿಂಗಪ್ಪನೊಂದಿಗೆ ಓಡಿ ಹೋಗಿದ್ದಾಳೆ.

ಇದರಿಂದ ಸಂಗೀತಾ ಕುಟುಂಬ ಸದಸ್ಯರಿಂದ ಯುವಕ ನಿಂಗಪ್ಪನ ಮೇಲೆ ಹಲ್ಲೆ ಮಾಡಲಾಗಿದೆ. ನಿಂಗಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ನಿಂಗಪ್ಪನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿದೆ.

Read More...