Asianet Suvarna News Asianet Suvarna News

ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ರೇಣುಕಾಚಾರ್ಯ ವಿರುದ್ಧ ಸಿಡಿದೆದ್ದ ಮುಸ್ಲಿಮರು

ಪೌರತ್ವ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮುಸ್ಲಿಂರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಂಘಟನೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ಶಿವಮೊಗ್ಗ, (ಜ.22): ಬಳ್ಳಾರಿಯಲ್ಲಿ ಬಿಜೆಪಿ ಶಾಸಕ  ಜಿ.ಸೋಮಶೇಖರ ರೆಡ್ಡಿ, ಮುಸ್ಲಿಂ ಸಮುದಾಯದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾಯ್ತು. ಈಗ  ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸರದಿ. ಒಂದಲ್ಲ ಒಂದು ವಿವಾದಲ್ಲಿರುವ ರೇಣುಕಾಚಾರ್ಯ ಈಗ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

'ಮುಸ್ಲಿಮರ ಕೇರಿಗೆ ಬಂದ ಹಣ ಹಿಂದುಗಳ ಕೇರಿಗೆ ನೀಡುವೆ' 

ಮೊನ್ನೆ ಹೊನ್ನಾಳಿಯಲ್ಲಿ ನಡೆದ  ಸಿಎಎ ಜಾಗೃತಿ ಸಮಾವೇಶದಲ್ಲಿ ರೇಣುಕಾಚಾರ್ಯ ಅವರು ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡುತ್ತಾರೆ. ನಿಮ್ಮನ್ನು ಎಲ್ಲಿ ಇಡಬೇಕೋ ಅಲ್ಲೇ ಇಡುತ್ತೇವೆ, ಮುಸ್ಲಿಂ ಕೇರಿಗೆ ಬಂದ ಅನುದಾನವನ್ನು ಹಿಂದೂಗಳ ಕೇರಿಗೆ ಹಾಕಿ ಅವರನ್ನು ಅಭಿವೃದ್ಧಿ ಮಾಡುತ್ತೇನೆ. ಇನ್ಮುಂದೆ ರಾಜಕಾರಣ ಏನು ಎನ್ನುವುದನ್ನು ಮಾಡಿ ತೋರಿಸುತ್ತೇನೆ ಎಂದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಪ್ರಚೋನಕಾರಿ ಭಾಷಣ ಮಾಡಿದ್ದರು. ಇದರಿಂದ ಶಿವಮೊಗ್ಗದಲ್ಲಿ ಇಂದು (ಬುಧವಾರ) ಮುಸ್ಲಿಂ ಸಮುದಾಯ ಸಿಡಿದೆದ್ದಿದ್ದು, ರೇಣುಕಾಚಾರ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.