ಮಂಡ್ಯದಲ್ಲಿ ಯಮರೂಪಿ ರಸ್ತೆ ಗುಂಡಿಗಳು: ಪ್ರಾಣ ಹೋದರೂ 'ಆಡಳಿತ ವರ್ಗ' ಡೋಂಟ್ ಕೇರ್
ಮಂಡ್ಯ ನಗರದಲ್ಲಿ ಉಸಿರುಗಟ್ಟಿಸುವ ಧೂಳು ಹಾಗೂ ಎಲ್ಲಿ ನೋಡಿದರೂ ಗುಂಡಿಗಳಿರುವ ಅವ್ಯವಸ್ಥೆಯ ರಸ್ತೆಗಳು ಇವೆ.
ಮಂಡ್ಯ: ಮಂಡ್ಯ ನಗರದಲ್ಲಿ ನಾಲ್ಕೈದು ಪ್ರಮುಖ ರಸ್ತೆಗಳಿವೆ. ಆದರೆ ಇದೀಗ ಆ ರಸ್ತೆಗಳೆಲ್ಲಾ ಸಂಪೂರ್ಣ ಗುಂಡಿಮಯವಾಗಿವೆ. ಹೊಸಹಳ್ಳಿ-ಕಾರಸವಾಡಿ ರಸ್ತೆ, ವಿವಿ ರಸ್ತೆ, ನೂರಡಿ ರಸ್ತೆ ಹಾಗೂ ಗುತ್ತಲು ರೋಡ್'ಗಳಲ್ಲಿ ಬೃಹತ್ ಆಕಾರದ ಗುಂಡಿಗಳು ಬಿದ್ದಿವೆ. ರಕ್ಕಸ ಗುಂಡಿಗೆ ನಿವೃತ್ತ ಯೋಧನ ಪ್ರಾಣಿ ಪಕ್ಷಿ ಹಾರಿಹೋಗಿದ್ರೂ, ಸಂಬಂಧಪಟ್ಟವರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಹೊಸಹಳ್ಳಿ, ಕಾರಸವಾಡಿ ರಸ್ತೆಯಂತೂ ಜನರಿಗೆ ನರಕವೇ ಸರಿ. ಪ್ರತಿ ಹತ್ತು ಹೆಜ್ಜೆಗೂ 20ಕ್ಕೂ ಹೆಚ್ಚು ಗುಂಡಿಗಳು ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ಬಸ್ಗಳು, ಕೂಲಿ ಕಾರ್ಮಿಕರು, ಹಳ್ಳಿಯಿಂದ ಪಟ್ಟಣಕ್ಕೆ ಬರುವ ಜನರು ಪ್ರಯಾಣಿಸುತ್ತಾರೆ. ಭಾರೀ ವಾಹನಗಳು ಸಂಚರಿಸಿದ್ರಂತು ಇಲ್ಲಿ ಅಕ್ಷರಶಃ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿಬಿಡುತ್ತೆ. ಅಷ್ಟರಮಟ್ಟಿಗೆ ಧೂಳು ಆವರಿಸಿಬಿಡುತ್ತದೆ. ನಿತ್ಯ ರಸ್ತೆ ಗುಂಡಿಯಿಂದಾಗಿ ಸಾವು-ನೋವುಗಳು ಸಂಭವಿಸುತ್ತಿದ್ರೂ ಸ್ಥಳೀಯ ಶಾಸಕ, ನಗರಸಭೆ, PWD ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.