Chitradurga: ಪ್ರಧಾನಿ ಮೋದಿ ಟ್ವೀಟ್‌ ಎಫೆಕ್ಟ್, ಓಬವ್ವ ಸಮಾಧಿ ಕಾಮಗಾರಿ ಶುರು

 ಕೋಟೆನಾಡು ಅಂದ್ರೆ ಎಲ್ರಿಗೂ ನೆನಪಾಗೋದು ಏಳುಸುತ್ತಿನ ಕಲ್ಲಿನಕೋಟೆ (Chitradurga) ಆ ಕೋಟೆ ರಕ್ಷಿಸಿದ ವೀರವನಿತೆ ಒನಕೆ ಓಬವ್ವ (Onake Obavva) ಆದ್ರೆ ಆ ಮಹಾತಾಯಿಯ ಸಮಾಧಿ ಸ್ಥಳದಲ್ಲಿ ಸ್ಮಾರಕ (Monument) ನಿರ್ಮಾಣ ಕನಸು ನನಸಾಗುವ‌ ದಿನ ಸನಿಹವಾಗಿದೆ. 
 

Share this Video
  • FB
  • Linkdin
  • Whatsapp

ಚಿತ್ರದುರ್ಗ (ಜ. 04): ಕೋಟೆನಾಡು ಅಂದ್ರೆ ಎಲ್ರಿಗೂ ನೆನಪಾಗೋದು ಏಳುಸುತ್ತಿನ ಕಲ್ಲಿನಕೋಟೆ (Chitradurga) ಆ ಕೋಟೆ ರಕ್ಷಿಸಿದ ವೀರವನಿತೆ ಒನಕೆ ಓಬವ್ವ (Onake Obavva) ಆದ್ರೆ ಆ ಮಹಾತಾಯಿಯ ಸಮಾಧಿ ಸ್ಥಳದಲ್ಲಿ ಸ್ಮಾರಕ (Monument) ನಿರ್ಮಾಣ ಮಾಡಬೇಕೆನ್ನುವ ಕನಸು ನನಸಾಗುವ‌ ದಿನ ಸನಿಹವಾಗಿದೆ. 

Add Asianetnews Kannada as a Preferred SourcegooglePreferred

ಚಿತ್ರದುರ್ಗದ ಕಲ್ಲಿನ ಕೋಟೆ., ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..! ಮದಿಸಿದ ಆನೆಯ ಮದವನ್ನಡಗಿಸಿ ಕೆಚ್ಚೆದೆಯ ಪಾಳೆಗಾರ ಎನಿಸಿದ್ದ ಮದಕರಿ ನಾಯಕನ ಅಧಿಕಾರದ ಅವಧಿಯಲ್ಲಿ ಹೈದರಾಲಿಯ ಸೈನಿಕರೊಂದಿಗೆ ಏಕಾಂಗಿಯಾಗಿ ಸೆಣಸಾಡಿ ಕೋಟೆಯನ್ನು ಸಂರಕ್ಷಿಸಿ, ಶತ್ರುಗಳ ಕುತಂತ್ರಕ್ಕೆ ಬಲಿಯಾದ ವೀರವನಿತೆ ಒನಕೆ ಓಬವ್ವಳ ಸಾಹಸ ಇಡೀ ನಾಡಿಗೆ ಸ್ಪೂರ್ತಿದಾಯಕ. ಹೀಗಾಗಿ ಆ ವೀರನಾರಿಯ ವಂಶಸ್ಥರು ಹಾಗೂ ಅಭಿಮಾನಿಗಳು ಹಲವು ದಶಕಗಳಿಂದ ಗೌರವಪೂರ್ವಕವಾಗಿ ಕೋಟೆಯಲ್ಲಿರುವ ಸಮಾಧಿಯ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸಿದ್ರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ಒನಕೆ ಓಬವ್ವನ ಜಯಂತಿಯಂದು ಶುಭ ಹಾರೈಸಿದ್ದೇ ತಡ, ಹಲವು ದಶಕಗಳ ಹೋರಾಟಕ್ಕೆ ದಿಢೀರ್ ಅಂತ ಫಲ ಸಿಕ್ಕಿದೆ. 

ಆ ಮೂಲಕ ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಸಮಾಧಿಯ ಸ್ಮಾರಕ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಕಳೆದ 15ದಿನಗಳಿಂದ ಸ್ಮಾರಕದ ಕಾಮಗಾರಿ ಭರದಿಂದ ಸಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ಹಾಗೂ ರಾಜ್ಯ ಸರ್ಕಾರ ವಿನಾಶದ ಅಂಚಿಗೆ ತಲುಪಿದ್ದ ಸಮಾಧಿಯನ್ನು ಬೃಹತ್ ಸ್ಮಾರಕವಾಗಿ ಅಭಿವೃದ್ಧಿ ಪಡಿಸುತ್ತಿದೆ. ಹೀಗಾಗಿ ಇಷ್ಟು ದಿನ ಹಾಳಾಗಿ ವಿನಾಶದ ಅಂಚಿಗೆ ತಲುಪಿದ್ದ ಓಬವ್ವನ ಸ್ಮಾರಕ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಲಿದೆ.

ಇನ್ನು ಒನಕೆ ಓಬವ್ವಳ ವಂಶಸ್ಥರು ಹಾಗೂ ಸ್ಥಳೀಯ ಹೋರಾಟಗಾರರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿದ ಪ್ರತಿಫಲವಾಗಿ ಚಿತ್ರದುರ್ಗದಲ್ಲಿ ಸ್ಮಾರಕ ಅಭಿವೃದ್ಧಿಗೆ ಮುಂದಾಗಿರುವುದಕ್ಕೆ ಕೋಟೆನಾಡಿನಾದ್ಯಂತ ಸಂತಸ ವ್ಯಕ್ತವಾಗಿದೆ. ಜೊತೆಗೆ ನಾಡಿನ ಯುವತಿಯರಿಗೆ‌ ಹಾಗು ಮಹಿಳೆಯರಿಗೆ ಸ್ಪೂರ್ತಿದಾಯಕ ಎನಿಸಿದ್ದೂ ಧೈರ್ಯದ ಪ್ರತೀಕವಾಗಿದ್ದ ಒನಕೆ ಓಬವ್ವಳ ಸ್ಮಾರಕವನ್ನು ಜೀವಂತವಾಗಿಡಲು ಪ್ರಯತ್ನ ನಡೆದಿರುವುದು ಎಲ್ಲರಲ್ಲೂ ಬಾರಿ ಸಂತಸ ಮೂಡಿಸಿದೆ.

Related Video