ನಟಿ ತಪಸ್ವಿನಿ ಪೂಣಚ್ಚ ಅವರು ಬಿಗ್ಬಾಸ್ ಕನ್ನಡದ ಹೊಸ ಸೀಸನ್ಗೆ ಪ್ರವೇಶಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಎಲ್ಲಾ ಊಹಾಪೋಹಗಳಿಗೆ ನಟಿ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದು, ತಮಗೆ ಬಿಗ್ಬಾಸ್ಗೆ ಹೋಗುವ ಯಾವುದೇ ಆಲೋಚನೆ ಇಲ್ಲ ಎಂದು ಖಚಿತಪಡಿಸಿದ್ದಾರೆ.
ಬೆಂಗಳೂರು (ಸೆ.3): ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಬಹುನಿರೀಕ್ಷಿತ ರಿಯಾಲಿಟಿ ಶೋ 'ಬಿಗ್ಬಾಸ್ ಕನ್ನಡ' (Bigg Boss Kannada). ಪ್ರತಿಸಲ ಬಿಗ್ಬಾಸ್ ಹೊಸ ಸೀಸನ್ ಆರಂಭವಾಗುವ ಸೂಚನೆ ಸಿಗುತ್ತಿದ್ದಂತೆಯೇ, ದೊಡ್ಮನೆಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಕಾಲಿಡಲಿದ್ದಾರೆ ಎಂಬ ಸಂಭವನೀಯ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಮಾಮೂಲಿ. ಅಂತೆಯೇ, 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಖ್ಯಾತಿಯ ಉದಯೋನ್ಮುಖ ನಟಿ ತಪಸ್ವಿನಿ ಪೂಣಚ್ಚ (Tapaswini Poonacha) ಬಿಗ್ಬಾಸ್ಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಗಾಸಿಪ್ ಗಲ್ಲಿಯಲ್ಲಿ ಭಾರಿ ಸದ್ದು ಮಾಡಿತ್ತು.
ಆದರೆ, ಈ ಎಲ್ಲಾ ರೂಮರ್ಸ್ಗಳಿಗೆ ನಟಿ ತಪಸ್ವಿನಿ ಪೂಣಚ್ಚ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದು, ವದಂತಿಗಳಿಗೆ ಸಂಪೂರ್ಣವಾಗಿ ತೆರೆ ಎಳೆದಿರೋದು ಮಾತ್ರವಲ್ಲ, ಹಾಗೇನಾದರೂ ಬಿಗ್ಬಾಸ್ನ ಅಧಿಕಾರಿಗಳು ಕರೆದರೂ ತಾವು ಆ ರಿಯಾಲಿಟಿ ಶೋಗೆ ಹೋಗೋದಿಲ್ಲ ಎಂದು ತಿಳಿಸಿದ್ದಾರೆ.
ನನಗೆ ಬಿಗ್ಬಾಸ್ಗೆ ಹೋಗುವ ಇಷ್ಟವೂ ಇಲ್ಲ, ಆಲೋಚನೆಯೂ ಇಲ್ಲ: ತಪಸ್ವಿನಿ
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿರುವ ತಪಸ್ವಿನಿ ಪೂಣಚ್ಚ, ಬಿಗ್ಬಾಸ್ ಪ್ರವೇಶದ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ನನ್ನ ಮತ್ತು ಬಿಗ್ಬಾಸ್ ಪ್ರವೇಶದ ಕುರಿತು ಹರಿದಾಡುತ್ತಿರುವ ಎಲ್ಲಾ ಸುದ್ದಿಗಳು ಸಂಪೂರ್ಣ ಸುಳ್ಳು (FALSE). ನಾನು ಎಂದಿಗೂ ಬಿಗ್ಬಾಸ್ ಭಾಗವಾಗಲು ಪ್ರಯತ್ನಿಸಿಲ್ಲ ಅಥವಾ ಭಾಗವಹಿಸುವ ಯಾವುದೇ ಉದ್ದೇಶವೂ ನನಗಿಲ್ಲ. ಕಲಾವಿದರ ಅನುಮತಿ ಇಲ್ಲದೆ ಇಂತಹ ಸುಳ್ಳು ಮಾಹಿತಿಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸುವಂತೆ ನಾನು ಎಲ್ಲಾ ಮಾಧ್ಯಮಗಳು ಹಾಗೂ ಇತರರಲ್ಲಿ ವಿನಂತಿಸುತ್ತೇನೆ. ನನಗೆ ಕರೆಗಳು ಬಂದರೂ ಸಹ ನಾನು ಬಿಗ್ಬಾಸ್ ಭಾಗವಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ತಪಸ್ವಿನಿ ಬರೆದುಕೊಂಡಿದ್ದಾರೆ.
ಯಾರೀ ತಪಸ್ವಿನಿ ಪೂಣಚ್ಚ?
ರಿಷಭ್ ಶೆಟ್ಟಿ ನಿರ್ಮಾಣದ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ (Sandalwood) ತಪಸ್ವಿನಿ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾದ ಜೂನಿಯರ್ ಮೊನಾಲೀಸಾ ಹಾಡಿನ ಮೂಲಕ ಅವರು ಜನಪ್ರಿಯರಾಗಿದ್ದರು. ಚಿತ್ರತಂಡವು ಹೊಸ ಪ್ರತಿಭೆಯ ಹುಡುಕಾಟದಲ್ಲಿದ್ದಾಗ, ಆಡಿಷನ್ (Audition) ಮೂಲಕ ತಪಸ್ವಿನಿ ನಾಯಕಿಯಾಗಿ ಆಯ್ಕೆಯಾಗಿದ್ದರು. ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ನಟನೆಯ ಮೂಲಕ ಗಮನ ಸೆಳೆದಿದ್ದರು.

ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತಿ ಹೆಚ್ಚು ಟಿಆರ್ಪಿ (TRP) ಗಳಿಸುವ ಕಾರ್ಯಕ್ರಮ ಬಿಗ್ಬಾಸ್ ಕನ್ನಡ. ಸೆ.6 ರಿಂದ ಈ ಶೋ ಆರಂಭವಾಗಲಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ವಿಶಿಷ್ಟ ಶೈಲಿಯ ನಿರೂಪಣೆಯಿಂದಲೇ ಬಿಗ್ಬಾಸ್ಗೆ ಶಕ್ತಿ ತುಂಬಿದ್ದಾರೆ. ಜನಪ್ರಿಯ ವ್ಯಕ್ತಿಗಳನ್ನು ಒಂದೇ ಸೂರಿನಡಿ 100ಕ್ಕೂ ಹೆಚ್ಚು ದಿನಗಳ ಕಾಲ ಹೊರಜಗತ್ತಿನ ಸಂಪರ್ಕವಿಲ್ಲದೆ ಇರಿಸಿ, ಅವರ ವ್ಯಕ್ತಿತ್ವ ಹಾಗೂ ಆಟದ ಆಧಾರದ ಮೇಲೆ ವಿನ್ನರ್ ಆಯ್ಕೆ ಮಾಡಲಾಗುತ್ತದೆ. ಪ್ರತಿ ಸೀಸನ್ ಆರಂಭಕ್ಕೂ ಮುನ್ನ ಹಲವು ನಟ-ನಟಿಯರ ಹೆಸರುಗಳು ಹರಿದಾಡುವುದು ಸಾಮಾನ್ಯ. ಆದರೆ, ತಪಸ್ವಿನಿ ಪೂಣಚ್ಚ ಸ್ಪಷ್ಟನೆ ನೀಡುವ ಮೂಲಕ ತಮ್ಮ ಅಭಿಮಾನಿಗಳಲ್ಲಿದ್ದ ಗೊಂದಲಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.


