ಸ್ವಯಂಘೋಷಿತ ಜ್ಯೋತಿಷಿ ಅಶೋಕ್ ಖರಾತ್, ಮಾಟ-ಮಂತ್ರದ ನೆಪದಲ್ಲಿ ಮಹಿಳೆಯರನ್ನು ಶೋಷಣೆ ಮಾಡಿದ ಪ್ರಕರಣ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದೆ. ತನಿಖೆಯ ವೇಳೆ 35ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಪತ್ತೆಯಾಗಿದ್ದು, ಈ ಪ್ರಕರಣವು ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿರುವ ಸ್ವಯಂಘೋಷಿತ ಜ್ಯೋತಿಷಿ ಹಾಗೂ ಧೋಂಡಿ ಅಶೋಕ್ ಖರಾತ್ ಪ್ರಕರಣದಲ್ಲಿ ಪ್ರತಿದಿನವೂ ಹೊಸ ಹೊಸ ಆಘಾತಕಾರಿ ವಿಚಾರಗಳು ಹೊರಬರುತ್ತಿವೆ. ಮಾಟ-ಮಂತ್ರ, ತಂತ್ರ-ವಿದ್ಯೆ ಹಾಗೂ ಭವಿಷ್ಯ ಹೇಳುವ ನೆಪದಲ್ಲಿ ಹಲವು ಮಹಿಳೆಯರನ್ನು ಬಲೆಗೆ ಬೀಳಿಸಿ ಶೋಷಣೆ ನಡೆಸಿದ್ದ ಖರಾತ್ ಬಂಧನದ ನಂತರ, ಆತನ ಅಕ್ರಮ ಜಾಲದ ವಿಸ್ತಾರ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಇದೀಗ ಕನಿಷ್ಠ 8 ಮಹಿಳೆಯರಿಗೆ ಸಂಬಂಧಿಸಿದ 35 ಅಶ್ಲೀಲ ವೀಡಿಯೊಗಳನ್ನು ವಶಪಡಿಸಿಕೊಂಡಿದೆ.
ಮಾಟ-ಮಂತ್ರದ ಹೆಸರಿನಲ್ಲಿ ಬಲೆ:
ಆರೋಪಿ ಅಶೋಕ್ ಖರಾತ್ ಸಮಾಜದ ಸಂಕಷ್ಟದಲ್ಲಿರುವ ಮತ್ತು ಮೂಢನಂಬಿಕೆಗಳನ್ನು ನಂಬುವ ಮಹಿಳೆಯರನ್ನೇ ಪ್ರಮುಖ ಟಾರ್ಗೆಟ್ ಮಾಡುತ್ತಿದ್ದ. ತಾನು ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದ. ಸಮಸ್ಯೆಗೆ ಪರಿಹಾರ ನೀಡುವ ಹೆಸರಿನಲ್ಲಿ ಅಥವಾ ಪೂಜೆ-ಪುನಸ್ಕಾರಗಳ ನೆಪವೊಡ್ಡಿ ಮಹಿಳೆಯರ ಮೇಲೆಯೇ ಲೈಂಗಿಕ ಶೋಷಣೆ ಎಸಗುತ್ತಿದ್ದ ಎಂಬ ಗಂಭೀರ ಆರೋಪಗಳಿವೆ.
35 ವೀಡಿಯೊಗಳ ಸೀಝ್, ಬ್ಲ್ಯಾಕ್ಮೇಲ್ ಶಂಕೆ:
ಪೊಲೀಸ್ ತನಿಖೆಯ ವೇಳೆ ಲಭ್ಯವಾಗಿರುವ ಡಿಜಿಟಲ್ ಸಾಕ್ಷ್ಯಾಧಾರಗಳಲ್ಲಿ 35 ಅಶ್ಲೀಲ ವೀಡಿಯೊ ಕ್ಲಿಪ್ಗಳು ಪತ್ತೆಯಾಗಿವೆ. ಮಹಿಳೆಯರನ್ನು ಬೆದರಿಸಿ, ಬ್ಲ್ಯಾಕ್ಮೇಲ್ ಮಾಡಿ ಅಥವಾ ಅವರಿಗೆ ತಿಳಿಯದಂತೆ ಈ ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದೆಯೇ ಎಂಬುದರ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.
5ಕ್ಕೂ ಹೆಚ್ಚು ಪ್ರತ್ಯೇಕ ಪ್ರಕರಣಗಳ ದಾಖಲು:
ಅಶೋಕ್ ಖರಾತ್ ವಿರುದ್ಧ ಮಹಾರಾಷ್ಟ್ರದ 'ಅಮಾನುಷ ಆಚರಣೆಗಳು ಮತ್ತು ಮಾಟ-ಮಂತ್ರ ನಿಷೇಧ ಕಾಯ್ದೆ' (Black Magic Act) ಹಾಗೂ ಅತ್ಯಾ*ಚಾರ, ಬೆದರಿಕೆ ಕಾಯ್ದೆಗಳ ಅಡಿಯಲ್ಲಿ ಈಗಾಗಲೇ 5ಕ್ಕೂ ಹೆಚ್ಚು ಪ್ರತ್ಯೇಕ ಎಫ್ಐಆರ್ಗಳು (FIR) ದಾಖಲಾಗಿವೆ. ಪ್ರಕರಣದ ತನಿಖೆ ಮುಂದುವರಿದಂತೆ ದೂರು ನೀಡುವ ಮಹಿಳೆಯರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ರಾಜಕೀಯ ಕಾಡ್ಗಿಚ್ಚು – ರೂಪಾಲಿ ಚಾಕಣಕರ್ ರಾಜೀನಾಮೆ:
ಈ ಪ್ರಕರಣವು ಬರಿ ಲೈಂಗಿಕ ಶೋಷಣೆಗೆ ಸೀಮಿತವಾಗಿರದೆ, ಮಹಾರಾಷ್ಟ್ರ ರಾಜಕೀಯದಲ್ಲೂ ದೊಡ್ಡ ಸಂಚಲನ ಮೂಡಿಸಿದೆ. ಆರೋಪಿ ಖರಾತ್ ಜೊತೆಗಿನ ನಿಕಟ ಒಡನಾಟ ಹಾಗೂ ಬ್ಯಾಂಕ್ ವಹಿವಾಟುಗಳ ಆರೋಪ ಕೇಳಿಬಂದ ಬೆನ್ನಲ್ಲೇ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಎಸ್ಐಟಿ ಅಧಿಕಾರಿಗಳು ಹಿರಿಯ ರಾಜಕಾರಣಿಗಳು ಹಾಗೂ ಪ್ರಭಾವಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.


