ಈ ದೇವಸ್ಥಾನದ ಹಲವು ವಿಶೇಷತೆಗಳ ಆಗರ. ಇಲ್ಲಿ ನೀವು ಬೇಡಿಕೊಂಡ, ಪ್ರಾರ್ಥಿಸಿದ ಕಾರ್ಯ ನಡೆದಿಲ್ಲ ಎಂದರೆ ದೇವರ ವಿರುದ್ಧವೇ ದೂರು ಸಲ್ಲಿಕೆ ಮಾಡಬಹುದು. ಇಷ್ಟೇ ಅಲ್ಲ ದೂರಿನ ವಿಚಾರಣೆಯೂ ನಡೆಯಲಿದೆ.

ಭಾರತದ ಪ್ರತಿ ದೇವಸ್ಥಾನಗಳಲ್ಲಿ ವಿಶೇಷ ಆಚರಣೆ, ಸಂಪ್ರದಾಯ, ಪೂಜೆಗಳಿವೆ. ಸ್ಥಳೀಯ ನಂಬಿಕೆ, ಭಕ್ತಿ, ಶ್ರದ್ಧೆಗಳಿಗೆ ಅನುಗುಣವಾಗಿ ಆಚರಣೆಗಳು ಇರುತ್ತವೆ. ಕಷ್ಟ, ಸಮಸ್ಯೆಗಳ ಪರಿಹಾರಕ್ಕಾಗಿ ದೇವರ ಮೊರೆ ಹೋಗುವುದು ಸಾಮಾನ್ಯ. ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು, ಸಮಸ್ಯೆಗಳನ್ನು, ಬೇಡಿಕೆಗಳನ್ನು ಮುಂದಿಡುತ್ತಾರೆ. ಇಲ್ಲೊಂದು ದೇವಸ್ಥಾನವಿದೆ. ಇಲ್ಲಿ ನೀವು ಬೇಡಿಕೆ, ಸಮಸ್ಯೆಗಳನ್ನು ದೇವರ ಮುಂದೆ ಹೇಳಿಕೊಳ್ಳುವುದು ಮಾತ್ರವಲ್ಲ. ನಿಮ್ಮ ಬೇಡಿಕೆ ಈಡೇರದಿದ್ದರೆ ಅದರ ವಿರುದ್ಧ ದೂರು ಸಲ್ಲಿಕೆ ಮಾಡಬಹುದು. ದೇವರ ವಿರುದ್ಧವೇ ದೂರು ನೀಡಲು ಸಾಧ್ಯವಿದೆ. ಬಳಿಕ ದೇವರ ಮುಂದೆ ದೂರಿನ ವಿಚಾರಣೆ ನಡೆಯಲಿದೆ.

ಅತ್ಯಂತ ಪವಿತ್ರ ಬಂಗಾರಾಮ್ ದೇವಿ ದೇವಸ್ಥಾನ

ಭಕ್ತರು ದೇವರ ವಿರುದ್ಧ ದೂರು ಸಲ್ಲಿಕೆ ಮಾಡುವ, ದೇವರ ವಿರುದ್ಧವೇ ವಿಚಾರಣೆ ನಡೆಸುವ ವಿಶೇಷ ಹಾಗೂ ಅಪರೂಪದ ದೇವಸ್ಥಾನ ಬಂಗಾರಾಮ್ ದೇವಿ ದೇವಸ್ಥಾನ. ಈ ದೇವಸ್ಥಾನ ಚತ್ತೀಸಘಡದ ಬಸ್ತರ್ ಪ್ರದೇಶದಲ್ಲಿದೆ. ವರ್ಷಕ್ಕೊಮ್ಮೆ ಇಲ್ಲಿ ಜನರ ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲಾಗುತ್ತದೆ. ಭಕ್ತರ ಪ್ರಾರ್ಥನೆಗಳಿಗೆ ಉತ್ತರ ನೀಡದ, ಸ್ಪಂದಿಸದ ದೇವರನ್ನೇ ಇಲ್ಲಿ ಪ್ರಶ್ನೆ ಮಾಡಲಾಗುತ್ತದೆ.

ಬೇಡಿಕೆ ಈಡೇರಿಸದ ದೇವರಿಗೆ ಕಠಿಣ ಶಿಕ್ಷೆ

ಪ್ರತಿ ವರ್ಷ ಈ ಬಂಗಾರಾಮ್ ದೇವಿ ದೇವಸ್ಥಾನದಲ್ಲಿ ಭಾದೋ ಜಾತ್ರೆ ನಡೆಯಲಿದೆ. ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಈ ಜಾತ್ರೆ ನಡೆಯಲಿದೆ. ಮೂರು ದಿನಗಳ ಜಾತ್ರೆಯಲ್ಲೇ ಭಕ್ತರ ದೂರುಗಳನ್ನು ಆಲಿಸಲಾಗುತ್ತದೆ. ದೇವರ ವಿಚಾರಣೆ ನಡೆಯಸಲಾಗುತ್ತದೆ. ಭಕ್ತರ ಬೇಡಿಕೆ ಈಡೇರಿಸಿದ ದೇವರಿಗೆ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಆರೋಪಿ ಸ್ಥಾನದಲ್ಲಿ ದೇವರು

ದೇವಸ್ಥಾನದ ಅಧಿದೇವತೆ ಬಂಗಾರಾಮ್ ದೇವಿ ಈ ನ್ಯಾಯಾಲಯದ ಅಧ್ಯಕ್ಷತೆ ವಹಿಸುತ್ತಾರೆ. ಯಾವ ದೇವರ ವಿರುದ್ದ ಭಕ್ತರು ದೂರು ನೀಡಲಾಗಿದೆಯೋ ಈ ದೇವರನ್ನು ಆರೋಪಿಯಾಗಿ ಮಾಡಲಾಗುತ್ತದೆ. ಸ್ಥಳೀಯರು, ಆಡಳಿತ ಮಂಡಳಿ, ವಾದಿಗಳಾಗಿ, ಸಾಕ್ಷಿಗಳಾಗುತ್ತಾರೆ. ಮಳೆ, ಬೆಳೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳ ದೂರುಗಳನ್ನು ನೀಡಲಾಗುತ್ತದೆ. ಜಾತ್ರೆಯಲ್ಲಿ ಭಕ್ತರು ಸಲ್ಲಿಸಿದ ದೂರುಗಳನ್ನು ದಾಖಲಿಸಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಯಲ್ಲಿ ಭಕ್ತರ ಬೇಡಿಕೆ, ಆಹವಾಲುಗಳಿಗೆ ದೇವರು ಸ್ಪಂದಿಸಲಿಲ್ಲ ಅನ್ನೋದು ಸಾಬೀತಾದರೆ ಶಿಕ್ಷೆ ವಿಧಿಸಲಾಗುತ್ತದೆ.

ದೇವರನ್ನೇ ಗಡಿಪಾರು

ದೇವರು ಸ್ಪಂದಿಸಿಲ್ಲ, ಬೇಡಿಕೆ ಈಡೇರಿಸಿಲ್ಲ ಅನ್ನೋದು ಸಾಬೀತಾದರೆ ದೇವರಿಗೆ ಶಿಕ್ಷೆ ನೀಡಲಾಗುತ್ತದೆ. ದೇವರನ್ನೇ ಗಡೀಪಾರು ಮಾಡಲಾಗುತ್ತದೆ. ದೇವಸ್ಥಾನದಲ್ಲಿದ್ದ ದೇವರನ್ನು ಊರಿನಾಚೆ ಇಡಲಾಗುತ್ತದೆ.ಇನ್ನು ಮುಂಭಾಗದಲ್ಲಿದ್ದ ದೇವರನ್ನು ದೇವಸ್ಥಾನದ ಆವರಣದ ಹಿಂಬಾಗದಲ್ಲಿ ಇಡಲಾಗುತ್ತದೆ. ಒಂದು ವರ್ಷ ಕಾಲ ಪೂಜೆಗಳಿಂದ ದೂರವಿಡಲಾಗುತ್ತದೆ. ನೈವೇದ್ಯ,ಪ್ರಸಾದಗಳಿಂದ ದೂರವಿಡಲಾಗುತ್ತದೆ. ಹಲವು ರೀತಿಯ ಶಿಕ್ಷೆಗಳನ್ನು ವಿಧಿಸಲಾಗುತ್ತದೆ.

ದೇವರ ವಿರುದ್ಧ ನೂರು ಬಾರಿ ಯೋಚಿಸಿ ದೂರು

ಹಾಗಂತ ಸಿಕ್ಕ ಸಿಕ್ಕ ಬೇಡಿಕೆ ಮುಂದಿಟ್ಟ ಈಡೇರಿಲ್ಲ ಎಂದು ದೂರು ನೀಡಲು ಇಲ್ಲಿನ ಸ್ಥಳೀಯರು ಹಿಂಜರಿಯುತ್ತಾರೆ. ಸುಳ್ಳು ಸುಳ್ಳು ದೂರು ದಾಖಲಿಸುವುದಿಲ್ಲ. ಗಂಭೀರ ದೂರುಗಳಿಗೂ ದೇವರು ಸ್ಪಂದಿಸದಿದ್ದರೆ, ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗುತ್ತದೆ. 240ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಈ ದೇವಸ್ಥಾನ ಸುತ್ತ ವಾಸಿಸುತ್ತಿದ್ದಾರೆ. ಈ ಆದಿವಾಸಗಳ ವಿಶೇಷ ಆಚರಣೆ ಈಗಲೂ ನಡೆಯುತ್ತಿದೆ.