ಖ್ಯಾತ ನಿರೂಪಕಿ ಮತ್ತು ನಟಿ ಅನುಪಮಾ ಗೌಡ, 8 ವರ್ಷಗಳ ಆ್ಯಂಕರಿಂಗ್ ಪಯಣಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಅವರು, ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣ ಹಾಗೂ ತಮ್ಮ ಮನದ ನೋವನ್ನು ಬಿಚ್ಚಿಟ್ಟಿದ್ದಾರೆ.
ಆ್ಯಂಕರ್ ಎಂದಾಕ್ಷಣ ಕೆಲವೇ ಕೆಲವು ಜನ ನೆನಪಾಗ್ತಾರೆ. ಅವರಲ್ಲಿ ಒಬ್ಬರು ಆ್ಯಂಕರ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು ನಟಿಯೂ ಆಗಿರುವ ಅನುಪಮಾ ಗೌಡ. ಇವರ ಆ್ಯಂಕರಿಂಗ್ ಪಯಣಕ್ಕೆ 8 ವರ್ಷಗಳಾಗಿವೆ. ಇದೀಗ ಅವರು ತಮ್ಮ ಆ್ಯಂಕರಿಂಗ್ ಕ್ಷೇತ್ರಕ್ಕೆ ಗುಡ್ಬೈ ಹೇಳಿದ್ದು, ಈ ಕುರಿತು ವಿಡಿಯೋ ಮಾಡಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ತಮ್ಮ ನಿರೂಪಣಾ ವೃತ್ತಿಗೆ ನಿವೃತ್ತಿ ಘೋಷಿಸಿರೋ ಅನುಪಮಾ ಗೌಡ ಅವರು, ಇದನ್ನು ತಮ್ಮ ಜಾಲತಾಣದಲ್ಲಿ ಶೇರ್ಮಾಡಿಕೊಂಡಿದ್ದಾರೆ.
ತಮ್ಮ ಆ್ಯಂಕರಿಂಗ್ ಪಯಣದ ಕುರಿತು ಮಾತನಾಡಿರುವ ನಟಿ, ನಾನು 2016ರಲ್ಲಿಯೇ ನಿರೂಪಕಿಯಾಗಬೇಕಿತ್ತು. ಆದರೆ 2 ವರ್ಷಗಳ ಸಮಯ ತೆಗೆದುಕೊಂಡು ಮೊದಲ ಬಾರಿಗೆ ವೇದಿಕೆ ಹತ್ತಿದ್ದು 2018 ಜೂ.22ರಂದು. ಅಲ್ಲಿಂದ ಪ್ರಾರಂಭವಾದ ಈ ಪ್ರಯಾಣ ಕೊನೆಗೊಂಡಿದ್ದು 2026ರ ಮೇ 05. ಅದು ಅನಿರೀಕ್ಷಿತವಾಗಿ ಒಲಿದು ಬಂದ ನಿವೃತ್ತಿ. ಏನೂ ಗೊತ್ತಿಲ್ಲದ್ದಿದ್ದ ನನಗೆ ಕನ್ನಡ ಕಲಿಸಿ, ವೇದಿಕೆ ಮೇಲೆ ನಿಲ್ಲೋದನ್ನು ಕಲಿಸಿಕೊಟ್ಟು.. ನನ್ನನ್ನು ನಿರೂಪಕಿಯಾಗಿ ಮಾಡಿ ಇಲ್ಲಿಯವರೆಗೂ ಬರಲು ನನ್ನ ಹಿಂದೆ ನಿಂತವರು ಹಲವರು. ನನ್ನ ನಿರೂಪಣೆಯ ಜರ್ನಿಯಲ್ಲಿ ಅತ್ಯುತ್ತಮ ವ್ಯಕ್ತಿಗಳು ಪರಿಚಯವಾದ್ರು, ಅವರೆಲ್ಲರೊಂದಿಗಿನ ಸಂಬಂಧವನ್ನು ನಾನು ನನ್ನ ಜೀವನದುದ್ದಕ್ಕೂ ಇಟ್ಟುಕೊಳ್ತೀನಿ ಎಂದು ಹೇಳಿದ್ದಾರೆ.
ತುಂಬಾ ಕಲಿತಿದ್ದೇನೆ
ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಅನ್ನೋದೇ ಈ ನಿರ್ಧಾರಕ್ಕೆ ಕಾರಣ.. ನಿಮ್ಮಿಂದ ತುಂಬಾ ಕಲಿತಿದ್ದೀನಿ, ತುಂಬಾ ಪ್ರೀತಿ ಕೊಟ್ಟಿದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ.. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ಅನುಪಮಾ ಹೇಳಿದ್ದಾರೆ.
ಅಷ್ಟಕ್ಕೂ ಏನಾಯ್ತು?
ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ’ ಎಂದು ನೊಂದು ನುಡಿದಂತಿದೆ ಅನುಪಮಾ. ‘ಸೀರಿಯಲ್ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದೂ ಹೇಳಿದ್ದಾರೆ. ಮಜಾ ಭಾರತ’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್ಸ್ಟಾರ್ಸ್’, ‘ಸುವರ್ಣ ಜ್ಯಾಕ್ಪಾಟ್’, ‘ಗರ್ಲ್ಸ್ vs ಬಾಯ್ಸ್’, ‘ಕ್ವಾಟ್ಲೆ ಕಿಚನ್’ ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ.


