ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆಂಬ ಕಾರಣಕ್ಕೆ ಅತಿಥಿ ಶಿಕ್ಷಕಿಯೊಬ್ಬರು ನಾಲ್ವರು ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ್ದಾರೆ. ಈ ಹಲ್ಲೆಯಿಂದ ಮಕ್ಕಳ ಬೆನ್ನ ಮೇಲೆ ಬಾಸುಂಡೆಗಳು ಮೂಡಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ(ಸೆ.4): ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆಂಬ ಕ್ಷುಲ್ಲಕ ಕಾರಣಕ್ಕೆ ಅತಿಥಿ ಶಿಕ್ಷಕಿಯೊಬ್ಬರು ಪ್ರಾಥಮಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಪಂ ವ್ಯಾಪ್ತಿಯ ಕಿರುವಾಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಅತಿಥಿ ಶಿಕ್ಷಕಿಯ ಹೊಡೆತಕ್ಕೆ ವಿದ್ಯಾರ್ಥಿಗಳ ಬೆನ್ನಮೇಲೆ ಬಾಸುಂಡೆ!
ಥಳಿತಕ್ಕೊಳಗಾದ ವಿದ್ಯಾರ್ಥಿಗಳು ಶಿಕ್ಷಕಿಯ ನಿರೀಕ್ಷೆಯಂತೆ ಪರೀಕ್ಷೆಯಲ್ಲಿ ಅಂಕ ಗಳಿಸಿಲ್ಲ ಎನ್ನಲಾಗಿದೆ. ಇದರಿಂದ ಕೋಪಗೊಂಡ ರಕ್ಷಿತಾ ಎಂಬ ಅತಿಥಿ ಶಿಕ್ಷಕಿ ಕೋಲಿನಿಂದ ಮಕ್ಕಳ ಬೆನ್ನಮೇಲೆ ಬಾಸುಂಡೆ ಬರುವಂತೆ ಹೊಡೆದ್ದಿದ್ದಾರೆ ಪೋಷಕರು ಆರೋಪಿಸಿದ್ದಾರೆ. ಎರಡು, ಮೂರು, ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳ ಬೆನ್ನಮೇಲೆ ರಕ್ತ ಬರುತ್ತಿದೆ, ಬೆನ್ನಮೇಲೆಲ್ಲ ಬಾಸುಂಡೆಗಳು ಮೂಡಿವೆ.
ಶಾಲೆಯಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ
ಶಾಲೆಯಲ್ಲಿ ಶಿಕ್ಷಕಿಯ ಹೊಡೆತದಿಂದ ನರಳಿರುವ ವಿದ್ಯಾರ್ಥಿಗಳು ಸಂಜೆ ಶಾಲೆ ಮುಗಿಸಿ ಮನೆಗೆ ಬಂದಾಗ ಯುನಿಫಾರ್ಮ್ ಬದಲಿಸುವ ವೇಳೆ ಮಕ್ಕಳ ಬೆನ್ನಮೇಲೆ ಬಾಸುಂಡೆ ಕಂಡು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಮಕ್ಕಳನ್ನ ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಘಟನೆ ತಿಳಿಸಿದ್ದಾರೆ.
ಗ್ರಾಮಸ್ಥರು ಆಕ್ರೋಶ
ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ ಘಟನೆ ಗ್ರಾಮಸ್ಥರಿಗೆ ತಿಳಿದ ಬಳಿಕ ಶಾಲೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಶಿಕ್ಷಕಿ ಈ ರೀತಿ ಮಕ್ಕಳ ಮೇಲೆ ಅಮಾನವೀಯವಾಗಿ ಹೊಡೆಯುವುದು ಎಷ್ಟು ಸರಿ? ಮಕ್ಕಳು ಕಡಿಮೆ ಅಂಕ ತೆಗೆದುಕೊಂಡಿದ್ದರೆ ಅದಕ್ಕೆ ಯಾರು ಕಾರಣ? ಹಲ್ಲೆ ಮಾಡಿದ ಶಿಕ್ಷಕಿಯನ್ನ ಅಮಾನತು ಮಾಡಿ ಸೂಕ್ತ ಕ್ರಮ ಜರುಗಿಸುವಂತೆ ಪೋಷಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.


