ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಮತ್ತು ಆತನ ಸ್ನೇಹಿತರ ಮೇಲೆ ಕಾಲೇಜು ಕ್ಯಾಂಪಸ್ ಗಲಾಟೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ, ಸಾಮ್ರಾಟ್ ಸ್ನೇಹಿತ ಸಮೃದ್ ಕೂಡ ಮನೀಷ್ ಗೌಡ ಮತ್ತು ಆತನ ಸ್ನೇಹಿತರ ವಿರುದ್ಧ ಪ್ರತಿ ದೂರು ದಾಖಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ಷುಲ್ಲಕ ಕಾರಣಕ್ಕೆ ಕಾಲೇಜಿನ ಕ್ಯಾಂಪಸ್ ಗಲಾಟೆ ಸಂಬಂಧ ನಟ ದುನಿಯಾ ವಿಜಯ್ ಪುತ್ರ ಹಾಗೂ ಆತನ ಸ್ನೇಹಿತನ ಮೇಲೆ ಎಫ್ಐಆರ್ ದಾಖಲಾದ ಬೆನ್ನಲ್ಲೇ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ.
ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮನೀಷ್ಗೌಡ ಹಾಗೂ ಆತನ ಸ್ನೇಹಿತರ ವಿರುದ್ಧ ಸಾಮ್ರಾಟ್ ವಿಜಯ್ ಗೆಳೆಯ ಸಮೃದ್ ದೂರು ನೀಡಿದ್ದಾನೆ. ಅದರನ್ವಯ ಮನೀಷ್ ಸಂಗಡಿಗರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಕಾಲೇಜಿನ ಆವರಣದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಾದ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಹಾಗೂ ಮನೀಷ್ ಗಲಾಟೆ ಮಾಡಿಕೊಂಡಿದ್ದರು. ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೆಂಗೇರಿ ಠಾಣೆಯಲ್ಲಿ ಮನೀಷ್ ನೀಡಿದ ದೂರಿನ ಮೇರೆಗೆ ಸಾಮ್ರಾಟ್ ಬಳಗದ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ಈಗ ಆರ್.ಆರ್.ನಗರ ಠಾಣೆಯಲ್ಲಿ ಮನೀಷ್ ಮೇಲೆ ಎಫ್ಐಆರ್ ದಾಖಲಾಗಿದೆ.
ಆರ್ವಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮನೀಷ್ ಗೌಡ ನೀಡಿದ ದೂರಿನನ್ವಯ ನಟ ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿಜಯ್ ಹಾಗೂ ಅವರ ಸ್ನೇಹಿತರಾದ ಸಮೃದ್ಧ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್ ಮತ್ತು ಎ.ಕೆ. ಸಮೀದ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಿಡ್ನ್ಯಾಪ್ ಮತ್ತು ಹಲ್ಲೆ ಆರೋಪ: ಸೋಮವಾರ ಸಾಮ್ರಾಟ್ ಹಾಗೂ ತಂಡದವರ ಕಾರನ್ನು ಮನೀಷ್ ಗೌಡ ಓವರ್ಟೇಕ್ ಮಾಡಿದ್ದರು. ಈ ಕಿರಿಕಿರಿ ಮನಸ್ಸಿನಲ್ಲಿಟ್ಟುಕೊಂಡು, ಮಂಗಳವಾರ ಕಾಲೇಜು ಪಾರ್ಕಿಂಗ್ನಲ್ಲಿ ಮನೀಷ್ ಒಬ್ಬರೇ ಇದ್ದಾಗ ಆರೋಪಿಗಳು ಅವರನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಮನೀಶ್ ದೂರಿನಲ್ಲಿ ಆರೋಪಿಸಿದ್ದಾರೆ.


