1989ರಲ್ಲಿ ಉಡಾವಣೆಯಾದ 'ಅಗ್ನಿ' ಕ್ಷಿಪಣಿಯು ಭಾರತವನ್ನು ಮಿಲಿಟರಿ ಸೂಪರ್ ಪವರ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನೇತೃತ್ವದಲ್ಲಿ, ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಮೀರಿ ಸ್ವದೇಶಿ ತಂತ್ರಜ್ಞಾನದಿಂದ ಅಗ್ನಿ-1 ರಿಂದ ಅಗ್ನಿ-5 ರವರೆಗೆ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಯಿತು.
ಮೇ 22, 1989ರ ಆ ದಿನ ಒಡಿಶಾದ ಚಾಂಡಿಪುರ ಕರಾವಳಿಯಲ್ಲಿ 15 ಮೀಟರ್ ಎತ್ತರದ ಭಾರತದ ಮೊದಲ 'ಅಗ್ನಿ ತಂತ್ರಜ್ಞಾನ ಪ್ರದರ್ಶಕ' (Agni-TD) ಕ್ಷಿಪಣಿ ಆಕಾಶಕ್ಕೆ ಹಾರಿತು. ಅಂದು ಕೇವಲ ಕ್ಷಿಪಣಿ ಹಾರಲಿಲ್ಲ, ಬದಲಾಗಿ ಭಾರತವು ಮಿಲಿಟರಿ ಸೂಪರ್ ಪವರ್ ಆಗಿ ಹೊರಹೊಮ್ಮುವ ಮಹಾ ಪಯಣಕ್ಕೆ ಮುನ್ನುಡಿ ಬರೆಯಿತು. ಬೀಜಿಂಗ್, ಇಸ್ಲಾಮಾಬಾಡ್ನಿಂದ ಹಿಡಿದು ಅಮೆರಿಕದ ಪೆಂಟಗನ್ವರೆಗೆ ಜಗತ್ತಿನ ಪ್ರಮುಖ ದೇಶಗಳು ಈ ಯಶಸ್ಸಿನಿಂದ ಬೆಚ್ಚಿಬಿದ್ದವು.
ನಿರ್ಬಂಧ ತೊರೆದು ಗೆದ್ದು ನಿಂತ 'ಮಿಸೈಲ್ ಮ್ಯಾನ್' ಯೋಜನೆ!
1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕ್ಷಿಪಣಿ ಯೋಜನೆಯ ಜವಾಬ್ದಾರಿಯನ್ನು "ಮಿಸೈಲ್ ಮ್ಯಾನ್" ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ವಹಿಸಿದರು. ಪಾಶ್ಚಿಮಾತ್ಯ ದೇಶಗಳು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ ಮೂಲಕ ಭಾರತಕ್ಕೆ ಯಾವುದೇ ತಂತ್ರಜ್ಞಾನ ಸಿಗದಂತೆ ಸಂಪೂರ್ಣ ನಿಷೇಧ ಹೇರಿದವು. ಕಂಪ್ಯೂಟರ್ ಚಿಪ್ಗಳು ಹಾಗೂ ಕಾರ್ಬನ್ ಫೈಬರ್ ಪೂರೈಕೆಯನ್ನು ಅಮೆರಿಕ ನಿಲ್ಲಿಸಿತು. ಆದರೆ ಡಆರ್ಡಿಒ ವಿಜ್ಞಾನಿಗಳು, ಐಐಟಿಗಳು ಮತ್ತು ಖಾಸಗಿ ಕಂಪನಿಗಳ ಜೊತೆಗೂಡಿ ಭಾರತದಲ್ಲೇ ಸ್ವದೇಶಿ ತಂತ್ರಜ್ಞಾನ, ಮ್ಯಾರೇಜಿಂಗ್ ಸ್ಟೀಲ್ ಹಾಗೂ ಬಿಡಿಭಾಗಗಳನ್ನು ತಯಾರಿಸಿ ಜಗತ್ತಿನ ನಿರ್ಬಂಧಗಳನ್ನೆಲ್ಲ ಪುಡಿಪುಡಿ ಮಾಡಿದರು.
ಭಾರತದ ಭದ್ರತಾ ಕವಚ!
ಅಗ್ನಿ-1; 1999ರ ಕಾರ್ಗಿಲ್ ಯುದ್ಧದ ನಂತರ ತ್ವರಿತ ದಾಳಿಗಾಗಿ ಇದನ್ನು ಅಭಿವೃದ್ಧಿಪಡಿಸಲಾಯಿತು. 2002ರಲ್ಲಿ ಪರೀಕ್ಷಿಸಲ್ಪಟ್ಟ ಈ 12 ಟನ್ ತೂಕದ ಕ್ಷಿಪಣಿಯು 700 ರಿಂದ 1,200 ಕಿ.ಮೀ ವ್ಯಾಪ್ತಿಯಲ್ಲಿದ್ದು, ಪಾಕಿಸ್ತಾನವನ್ನು ಸಂಪೂರ್ಣವಾಗಿ ಭಾರತದ ನಿಯಂತ್ರಣಕ್ಕೆ ತಂದಿತು.
ಅಗ್ನಿ-2; ಚೀನಾದ ಬೆದರಿಕೆಗೆ ಉತ್ತರಿಸಲು 1999ರಲ್ಲಿ ಪರೀಕ್ಷಿಸಲಾಯಿತು. 2,500 ಕಿ.ಮೀ ವ್ಯಾಪ್ತಿ ಹೊಂದಿರುವ ಇದು, 3,000 ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯುವ ವಿಶೇಷ ಶೀಲ್ಡ್ ಹೊಂದಿದೆ.
ಅಗ್ನಿ-3; 2006ರಲ್ಲಿ ಪರೀಕ್ಷಿಸಲ್ಪಟ್ಟ ಈ 50 ಟನ್ ತೂಕದ ಕ್ಷಿಪಣಿಯು 3,500 ರಿಂದ 5,000 ಕಿ.ಮೀ ದೂರ ಸಾಗಬಲ್ಲದು. ಶತ್ರು ರೇಡಾರ್ಗಳನ್ನು ಮೋಸಗೊಳಿಸಲು ಇದರಲ್ಲಿ ಸುಧಾರಿತ 'ಡಿಕಾಯ್' ತಂತ್ರಜ್ಞಾನವಿದೆ.
ಅಗ್ನಿ-4; 2011ರಲ್ಲಿ ಪರೀಕ್ಷಿಸಿದ ಈ ಕ್ಷಿಪಣಿಯು ಕೇವಲ 17 ಟನ್ ತೂಕವಿದ್ದು, ಸಂಯೋಜಿತ (Composite) ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಇದು 4,000 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಹೊಡೆಯುತ್ತದೆ.
ಪವರ್ಫುಲ್ ಅಗ್ನಿ-5!
2012ರಲ್ಲಿ ಪರೀಕ್ಷಿಸಲಾದ ಅಗ್ನಿ-5 ಭಾರತದ ನಿಜವಾದ ತಾಕತ್ತು. 5,000 ಕಿ.ಮೀಗೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ಇದು ಅಷ್ಟೇ ಅಲ್ಲದೆ ಕೆಲವೇ ನಿಮಿಷಗಳಲ್ಲಿ 1.5 ಟನ್ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು. ಇದನ್ನು ಡಬ್ಬಿಯಲ್ಲಿ ಸಂಗ್ರಹಿಸಿ, ರೈಲು ಅಥವಾ ದೊಡ್ಡ ಟ್ರಕ್ಗಳ ಮೂಲಕ ದೇಶದ ಯಾವುದೇ ಮೂಲೆಯಿಂದ ರಹಸ್ಯವಾಗಿ ಉಡಾಯಿಸಬಹುದು. ಇದರ ಆಗಮನದಿಂದ ಚೀನಾ, ಅರ್ಧ ಯುರೋಪ್, ಆಫ್ರಿಕಾ ಮತ್ತು ಇಂಡೋ-ಪೆಸಿಫಿಕ್ ಪ್ರದೇಶ ಭಾರತದ ಬಲಿಗೆ ಸಿಲುಕಿವೆ.


