ಹಳೆಯ ಪಾತ್ರಗಳ ಕಥೆ ಏನಾಗಲಿದೆ? ಶಶಾಂಕ್ ಪ್ರಕಾರ, ಕೃಷ್ಣನ ಪಾತ್ರದ ಜೊತೆಗೆ ಆತನ ಸ್ನೇಹಿತರ ಪಾತ್ರಗಳೂ ಮುಂದುವರಿಯಲಿವೆ. ಆದರೆ ರಾಧಿಕಾ ಪಂಡಿತ್ ನಿರ್ವಹಿಸಿದ್ದ ಗೀತಾ ಪಾತ್ರ ಈಗಾಗಲೇ ಕಥೆಯಲ್ಲಿ ಮೃತಪಟ್ಟಿರುವುದರಿಂದ, ಆ ಪಾತ್ರ ನೇರವಾಗಿ ಮುಂದುವರಿಯುವುದಿಲ್ಲ. ಆದರೆ, ಕಥೆ ಹೇಗೆ ಸಾಗಲಿದೆಯೋ ಏನೋ ಎಂಬ ಕುತೂಹಲ ಮನೆಮಾಡಿದೆ!

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ‘ಕೃಷ್ಣನ್ ಲವ್ ಸ್ಟೋರಿ’ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 16 ವರ್ಷಗಳ ಬಳಿಕ ನಿರ್ದೇಶಕ ಶಶಾಂಕ್ ಈ ಕಥೆಯನ್ನು ಮುಂದುವರಿಸಲು ಸಜ್ಜಾಗಿದ್ದಾರೆ. ‘ಕೃಷ್ಣನ್ ಲವ್ ಸ್ಟೋರಿ-2’ ಎಂಬ ಟೈಟಲ್‌ನೊಂದಿಗೆ ಸಿನಿಮಾ ಘೋಷಣೆಯಾಗಿದ್ದು, ಅಜಯ್ ರಾವ್ ಮತ್ತೆ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆದರೆ ಅಭಿಮಾನಿಗಳ ಕುತೂಹಲ ಮಾತ್ರ ಒಂದೇ ವಿಚಾರದ ಮೇಲೆ—ರಾಧಿಕಾ ಪಂಡಿತ್ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ?

ಇದೇ ಪ್ರಶ್ನೆಗೆ ನಿರ್ದೇಶಕ ಶಶಾಂಕ್ ಪ್ರತಿಕ್ರಿಯೆ ನೀಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಮೂಲ ‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾ 2010ರಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಬಳಿಕ 2018ರಲ್ಲಿ ಬೆಂಗಾಲಿಯಲ್ಲಿ ‘ಪಿಯಾ ರೇ’ ಹೆಸರಿನಲ್ಲಿ ರಿಮೇಕ್ ಕೂಡ ಆಗಿತ್ತು.

ಇದೀಗ ಸೀಕ್ವೆಲ್ ಯಾಕೆ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿರುವ ಶಶಾಂಕ್, ಇದು ಕೇವಲ ಹಳೆಯ ಸಿನಿಮಾದ ಹೆಸರನ್ನು ಬಳಸಿಕೊಂಡು ಮಾಡುತ್ತಿರುವ ಚಿತ್ರವಲ್ಲ ಎಂದಿದ್ದಾರೆ. ಹಲವು ವರ್ಷಗಳ ಹಿಂದೆ ಹೊಳೆದಿದ್ದ ಒಂದು ಬಲವಾದ ಕಥೆಯನ್ನು ಈಗ ತೆರೆಗೆ ತರುತ್ತಿದ್ದು, ಇದು ಕೃಷ್ಣನ ಕಥೆಯ ಮುಂದುವರಿದ ಭಾಗವಾಗಿದೆ. ಅಚ್ಚರಿಯೆಂದರೆ, ಸಿನಿಮಾದ ಕಥೆಯಲ್ಲೂ 16 ವರ್ಷಗಳ ಬಳಿಕದ ಘಟನೆಗಳು ನಡೆಯಲಿವೆಯಂತೆ!

ಹಾಗಾದರೆ ಹಳೆಯ ಪಾತ್ರಗಳ ಕಥೆ ಏನಾಗಲಿದೆ? ಶಶಾಂಕ್ ಪ್ರಕಾರ, ಕೃಷ್ಣನ ಪಾತ್ರದ ಜೊತೆಗೆ ಆತನ ಸ್ನೇಹಿತರ ಪಾತ್ರಗಳೂ ಮುಂದುವರಿಯಲಿವೆ. ಆದರೆ ರಾಧಿಕಾ ಪಂಡಿತ್ ನಿರ್ವಹಿಸಿದ್ದ ಗೀತಾ ಪಾತ್ರ ಈಗಾಗಲೇ ಕಥೆಯಲ್ಲಿ ಮೃತಪಟ್ಟಿರುವುದರಿಂದ, ಆ ಪಾತ್ರ ನೇರವಾಗಿ ಮುಂದುವರಿಯುವುದಿಲ್ಲ.

ಹಾಗಿದ್ದರೆ ಫ್ಲ್ಯಾಶ್‌ಬ್ಯಾಕ್‌ನಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಳ್ಳುತ್ತಾರಾ? ಇದಕ್ಕೆ ಶಶಾಂಕ್ ನೇರ ಉತ್ತರ ನೀಡದೆ, “ಚಿತ್ರ ಬಂದಾಗ ನಿಮಗೇ ಉತ್ತರ ಸಿಗುತ್ತದೆ” ಎಂದು ಹೇಳಿ ಭಾರೀ ಕುತೂಹಲದ ಮೂಡಿಸಿದ್ದಾರೆ.

ಅಷ್ಟೇ ಅಲ್ಲ, ಈ ಬಾರಿ ಕೃಷ್ಣನಿಗೆ ಹೊಸ ನಾಯಕಿ ಇರಲಿದ್ದು, ಆಕೆ ಯಾರು ಎಂಬುದನ್ನೂ ಸದ್ಯಕ್ಕೆ ರಹಸ್ಯವಾಗಿಟ್ಟಿದ್ದಾರೆ. ಅಜಯ್ ರಾವ್ ಅವರ ಲುಕ್ ಕೂಡ ಬದಲಾಗಲಿದ್ದು, ಸದ್ಯ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ನವೆಂಬರ್‌ನಲ್ಲಿ ಶೂಟಿಂಗ್ ಆರಂಭಿಸುವ ಯೋಜನೆಯಿದ್ದು, 2027ರ ಸಮ್ಮರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಚಿತ್ರತಂಡಕ್ಕಿದೆ. ಸದ್ಯಕ್ಕೆ ಟೈಟಲ್ ಮಾತ್ರ ಬಹಿರಂಗವಾಗಿದ್ದು, ನಾಯಕಿ ಸೇರಿದಂತೆ ಉಳಿದ ಮಾಹಿತಿಗಾಗಿ ಅಭಿಮಾನಿಗಳು ಇನ್ನಷ್ಟು ದಿನ ಕಾಯಬೇಕಿದೆ. ಒಟ್ಟಿನಲ್ಲಿ, ನಿರ್ದೇಶಕ ಶಶಾಂಕ್, ನಟ ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು ಈ ಚಿತ್ರದ ಘೋಷಣೆಯಿಂದ ಸಖತ್ ಥ್ರಿಲ್ ಅನುಭವಿಸುತ್ತಿದ್ದಾರೆ.