ನ್ಯೂಯಾರ್ಕ್ನಲ್ಲಿರುವ ಬಾಣಸಿಗ ವಿಕಾಸ್ ಖನ್ನಾ ಅವರ 'ಬಂಗ್ಲೋ' ರೆಸ್ಟೋರೆಂಟ್ಗೆ ಮುಕೇಶ್ ಅಂಬಾನಿ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ರಾಧಿಕಾ ಮರ್ಚೆಂಟ್ ಅವರು ಖನ್ನಾ ಅವರ ಕೈಗೆ ಜಿಲೇಬಿ ಆಕಾರದ ರಾಖಿ ಕಟ್ಟಿದ್ದು, ಈ ಭಾವನಾತ್ಮಕ ಕ್ಷಣದಿಂದ ಖನ್ನಾ ಭಾವುಕರಾದರು. ಅಲ್ಲದೆ, ಅನಂತ್ ಅಂಬಾನಿಯವರ 'ವಂತಾರಾ' ಯೋಜನೆಯನ್ನು ಶ್ಲಾಘಿಸಿದರು.
ನ್ಯೂಯಾರ್ಕ್: ನ್ಯೂಯಾರ್ಕ್ನಲ್ಲಿರುವ ಪ್ರಸಿದ್ಧ ಭಾರತೀಯ ಮೂಲದ ಸೆಲೆಬ್ರಿಟಿ ಬಾಣಸಿಗ ವಿಕಾಸ್ ಖನ್ನಾ ಅವರ 'ಬಂಗ್ಲೋ' (Bungalow) ರೆಸ್ಟೋರೆಂಟ್ಗೆ ಇತ್ತೀಚೆಗೆ ಭಾರತದ ಆಗರ್ಭ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಸೊಸಡ ರಾಧಿಕಾ ಮರ್ಚೆಂಟ್ ಕೂಡ ಜೊತೆಗಿದ್ದರು. ಈ ಭೇಟಿಯ ವೇಳೆ ಅತ್ಯಂತ ಭಾವನಾತ್ಮಕ ಹಾಗೂ ವಿಶೇಷ ಕ್ಷಣವೊಂದು ಜರುಗಿದೆ.
ಹೂವುಗಳಿಂದ ಅಲಂಕೃತಗೊಂಡಿದ್ದ ರೆಸ್ಟೋರೆಂಟ್
ಅಂಬಾನಿ ಕುಟುಂಬದ ಭೇಟಿಗಾಗಿ ವಿಕಾಸ್ ಖನ್ನಾ ತಮ್ಮ ರೆಸ್ಟೋರೆಂಟ್ ಅನ್ನು ಅತ್ಯಂತ ವಿಜೃಂಭಣೆಯಿಂದ ಸಜ್ಜುಗೊಳಿಸಿದ್ದರು. ಅನಂತ್ ಅಂಬಾನಿ ಅವರ ಕನಸಿನ ಯೋಜನೆಯಾದ "ವಂತಾರಾ" (Vantara) ಹೆಸರನ್ನು ಹೂವಿನ ದಳಗಳಿಂದ ಚಿತ್ತಾರವಾಗಿ ಬಿಡಿಸಿ, ರೆಸ್ಟೋರೆಂಟ್ನ ಗಾಜಿನ ಮೇಲ್ಛಾವಣಿಯನ್ನು ತಾವೇ ಖುದ್ದಾಗಿ ಸ್ವಚ್ಛಗೊಳಿಸಿ ಆತ್ಮೀಯ ಸ್ವಾಗತ ಕೋರಿದ್ದರು. ಈ ಸುಂದರ ದೃಶ್ಯಗಳ ವೀಡಿಯೊವನ್ನು ಖನ್ನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಿಲೇಬಿ ರಾಖಿ - ಕಣ್ಣೀರಾದ ವಿಕಾಸ್ ಖನ್ನಾ
ಈ ಭೇಟಿಯ ವೇಳೆಯಲ್ಲಿ ರಾಧಿಕಾ ಮರ್ಚೆಂಟ್, ಪ್ರಸಿದ್ದ ಚೆಫ್ ವಿಕಾಸ್ ಖನ್ನಾ ಅವರ ಮಣಿಕಟ್ಟಿಗೆ ಸಣ್ಣ 'ಜಿಲೇಬಿ ಆಕಾರದ ರಾಖಿ'ಯನ್ನು ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದರು. ಈ ಅಚ್ಚರಿಯ ಹಾಗೂ ಭಾವನಾತ್ಮಕ ಕ್ಷಣದಿಂದ ಖನ್ನಾ ತೀವ್ರ ಭಾವುಕರಾದರು.
ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ವಿಕಾಸ್ ಖನ್ನಾ, ರಾಧಿಕಾ ಎಂಬ ಹೆಸರಿನ ಅರ್ಥ ನನಗೆ , ಇಡೀ ಜಗತ್ತಿಗೆ ತಿಳಿದಿದೆ. ಆದರೆ ಇಂದು ಆಕೆ ನನ್ನ ಮಣಿಕಟ್ಟಿಗೆ ಸಣ್ಣ ಜಿಲೇಬಿ ರಾಖಿ ಕಟ್ಟಿದಾಗ ನನ್ನೊಳಗಿನ ಭಾವನೆಗಳು ಸಂಪೂರ್ಣವಾಗಿ ಬದಲಾದವು. ನನ್ನ ಮನಸ್ಸಿನಲ್ಲಿದ್ದ ಯಾವುದೋ ಒಂದು ಆಳವಾದ ಗಾಯಕ್ಕೆ ಆ ಕ್ಷಣದಲ್ಲೇ ಮದ್ದು ಸಿಕ್ಕಂತೆ, ನನ್ನ ಆತ್ಮ ಗುಣಮುಖವಾದಂತೆ ಭಾಸವಾಯಿತು. ಈ ಕ್ಷಣವನ್ನು ನಾನು ಆಜೀವನ ಪರ್ಯಂತ ಹೃದಯದಲ್ಲಿ ಭದ್ರವಾಗಿ ಕಾಯ್ದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅನಂತ್ ಅಂಬಾನಿ 'ವಂತಾರಾ' ಯೋಜನೆಗೆ ಮೆಚ್ಚುಗೆ
ಅನಂತ್ ಅಂಬಾನಿ ಅವರ ಪ್ರಾಣಿ ಪ್ರೀತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಖನ್ನಾ, ವಂತಾರಾ ಯೋಜನೆಯ ಮೂಲಕ ಅನಂತ್ ಮಾಡುತ್ತಿರುವ ಕಾರ್ಯ ಅಸಾಧಾರಣವಾದದ್ದು. ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣದ ಬಗ್ಗೆ ಅವರಲ್ಲಿರುವ ನಿಜವಾದ ಕಾಳಜಿ, ಬದ್ಧತೆ ಹಾಗೂ ಸಹಾನುಭೂತಿಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಅಂತಹ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ ನನ್ನ ರೆಸ್ಟೋರೆಂಟ್ನಲ್ಲಿ ಆತಿಥ್ಯ ವಹಿಸಿದ್ದು ನನಗೆ ಸಂದ ಗೌರವ ಎಂದಿದ್ದಾರೆ.
ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸುತ್ತಾ, ನಾವು ಕಳೆದುಕೊಂಡ ಪ್ರೀತಿಯ ಜೀವಗಳು ಮತ್ತು ಅವರ ನೆನಪುಗಳು ನಮ್ಮಲ್ಲಿ ಹೇಗೆ ಜೀವಂತವಾಗಿರುತ್ತವೆ ಎಂಬುದನ್ನು ಈ ರಾಖಿ ಹಬ್ಬ ನನಗೆ ನೆನಪಿಸಿದೆ. ರಾಧಿಕಾ, ನನಗೆ ಇಷ್ಟೊಂದು ಅಪಾರ ಅರ್ಥ ನೀಡುವ ಸಣ್ಣ ದಾರವನ್ನು ಕಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು. ಇದು ಕೃತಜ್ಞತೆ, ನೆನಪು, ಕುಟುಂಬ ಮತ್ತು ಧನ್ಯತಾ ದಿನ," ಎಂದು ವಿಕಾಸ್ ಖನ್ನಾ ಹಂಚಿಕೊಂಡಿದ್ದಾರೆ.


