ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಸಂತ್ರಸ್ತರ ಮಾಹಿತಿ ಸಂಗ್ರಹಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಕರೆತರಲು ತುರ್ತು ಸಹಾಯವಾಣಿ ಹಾಗೂ ವಿಶೇಷ ಗೂಗಲ್ ಫಾರ್ಮ್ ಲಿಂಕ್ ಅನ್ನು ಬಿಡುಗಡೆ ಮಾಡಿದೆ.
ಬೆಂಗಳೂರು (ಆ.27): ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ (Tibet Autonomous Region - TAR) ಉಂಟಾಗಿರುವ ಭೀಕರ ದಿಢೀರ್ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ನಾಗರಿಕರ ಮಾಹಿತಿ ಸಂಗ್ರಹಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರವು ತುರ್ತು ಸಹಾಯವಾಣಿ ಹಾಗೂ ವಿಶೇಷ ಗೂಗಲ್ ಫಾರ್ಮ್ (Google Form) ಲಿಂಕ್ ಅನ್ನು ಬಿಡುಗಡೆ ಮಾಡಿದೆ.
ನೇಪಾಳ ಅಥವಾ ಟಿಬೆಟ್ ಭಾಗದಲ್ಲಿ ಸಿಲುಕಿರುವ ರಾಜ್ಯದ ಪ್ರವಾಸಿಗರು, ಯಾತ್ರಾರ್ಥಿಗಳು, ಅವರ ಕುಟುಂಬಸ್ಥರು ಹಾಗೂ ಟೂರ್ ಆಪರೇಟರ್ಗಳು ತಕ್ಷಣವೇ ಈ ಕೆಳಗಿನ ಮಾರ್ಗಗಳ ಮೂಲಕ ಮಾಹಿತಿ ಹಂಚಿಕೊಳ್ಳುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೋರಿದೆ.
ತುರ್ತು ಸಹಾಯವಾಣಿ ಮತ್ತು ಸಂಪರ್ಕ ವಿವರಗಳು:
- ಯಾವುದೇ ತುರ್ತು ನೆರವು ಅಥವಾ ಮಾಹಿತಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು (SEOC) ಸಂಪರ್ಕಿಸಬಹುದು:
- ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ: 1070
- ಲ್ಯಾಂಡ್ಲೈನ್ ಸಂಖ್ಯೆ: 080-22253707
- ಇ-ಮೇಲ್ ವಿಳಾಸ: seockarnataka@gmail.com
ಮಾಹಿತಿ ದಾಖಲಿಸಲು ಗೂಗಲ್ ಫಾರ್ಮ್ ಲಿಂಕ್:
ನೇಪಾಳ ಮತ್ತು ಟಿಬೆಟ್ನಲ್ಲಿ ಸಿಲುಕಿರುವವರ ವಿವರಗಳನ್ನು ತ್ವರಿತವಾಗಿ ಸರ್ಕಾರದ ಗಮನಕ್ಕೆ ತರಲು ವಿಶೇಷ ಲಿಂಕ್ ಒದಗಿಸಲಾಗಿದೆ. ಬಾಧಿತರ ಹೆಸರು, ಸಂಪರ್ಕ ಸಂಖ್ಯೆ, ಪ್ರಸ್ತುತ ಇರುವ ಸ್ಥಳ ಹಾಗೂ ತುರ್ತು ಅಗತ್ಯಗಳ ವಿವರಗಳನ್ನು ಈ ಫಾರ್ಮ್ ಮೂಲಕ ಭರ್ತಿ ಮಾಡಬಹುದು:
🔗 ಗೂಗಲ್ ಫಾರ್ಮ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ ಮಾಹಿತಿ ದಾಖಲಿಸಿ
ಕೇಂದ್ರ ವಿದೇಶಾಂಗ ಇಲಾಖೆ, ರಾಯಭಾರ ಕಚೇರಿಗಳೊಂದಿಗೆ ಸಮನ್ವಯ
ರಾಜ್ಯ ಸರ್ಕಾರ ಸಂಗ್ರಹಿಸುವ ಈ ಮಾಹಿತಿಯನ್ನು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ (MEA), ನೇಪಾಳದ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಚೀನಾದ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರ ಮೂಲಕ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗರನ್ನು ರಕ್ಷಿಸಿ, ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು (Evacuation) ನಿರಂತರ ರಕ್ಷಣಾ ಕಾರ್ಯಾಚರಣೆ ಮತ್ತು ಅಗತ್ಯ ನೆರವನ್ನು ಸಂಯೋಜಿಸಲಾಗುತ್ತಿದೆ.
ಪ್ರವಾಹದಲ್ಲಿ ಸಿಲುಕಿರುವವರ ಕುಟುಂಬಸ್ಥರು ಆತಂಕಪಡದೆ, ಲಭ್ಯವಿರುವ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ಗೂಗಲ್ ಫಾರ್ಮ್ ಮೂಲಕ ನಿಖರ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.


