ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆಯಲ್ಲಿ, ಸುಪ್ರೀಂ ಕೋರ್ಟ್‌ ಆದೇಶವನ್ನು ಕಡೆಗಣಿಸಿ ಬಿಡಿಎ ರೈತರನ್ನು ಶೇ.40ರ ಪಾಲುದಾರರಂತೆ ಪರಿಗಣಿಸದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ತಮಗಿಷ್ಟದಂತೆ ನಿವೇಶನ ಹಂಚಿಕೆ ಹಾಗೂ ಆಡಳಿತಾತ್ಮಕ ವೆಚ್ಚ ವಿಧಿಸುತ್ತಿರುವುದನ್ನು ವಿರೋಧಿಸಿರುವ ಸಂತ್ರಸ್ತರ ಸಂಘ, ಈ ವೆಚ್ಚವನ್ನು ರದ್ದುಗೊಳಿಸಿ ವಾಣಿಜ್ಯ ನಿವೇಶನಗಳಲ್ಲಿ ಶೇ.50:50ರ ಅನುಪಾತದಲ್ಲಿ ಪಾಲು ನೀಡಬೇಕೆಂದು ಆಗ್ರಹಿಸಿದೆ.

ಬೆಂಗಳೂರು:  ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆಯು ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪ್ರಾರಂಭಗೊಂಡು, ಇದೀಗ ರಾಜ್ಯದ ಹೈಕೋರ್ಟ್‌ ನಿಗಾವಣೆಯಲ್ಲಿ ಅಂತಿಮ ಹಂತಕ್ಕೆ ಬಂದಿದೆ. ಯೋಜನೆಯ ಅನುಷ್ಠಾನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಭೂಮಿ ಕಳೆದುಕೊಂಡ ರೈತರನ್ನು 40% ಪಾಲುದಾರರೆಂದು ಪರಿಗಣಿಸದೆ, ರೈತರೊಂದಿಗೆ ಚರ್ಚಿಸದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಶೋಷಣೆ ಮಾಡಿದೆ ಎಂದು ಡಾ.ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಸಂಘದ ಪದಾಧಿಕಾರಿಗಳು ಆರೋಪಿಸಿದರು.

ಬಿಡಿಎಯಿಂದ ಸುಪ್ರೀಂ ಕೋರ್ಟ್‌ ಆದೇಶ ಕಡೆಗಣನೆ: ಆರೋಪ

ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಸಂತ್ರಸ್ತರ ಸಂಘದ ಅಧ್ಯಕ್ಷ, ಮಾಜಿ ಬಿಬಿಎಂಪಿ ಸದಸ್ಯ ಬಿ.ಆರ್‌. ನಂಜುಂಡಪ್ಪ ಮಾತನಾಡಿ ‘ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರು ಸಂತ್ರಸ್ತರಾಗಿದ್ದು, ತಮಗಿಷ್ಟವಾದ ನಿವೇಶಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹತೆ ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ.

ಆದೇಶವನ್ನು ಬಿಡಿಎ ಗಾಳಿಗೆ ತೂರಿ ತಮ್ಮ ಇಷ್ಟದಂತೆ ನಿವೇಶನ ಹಂಚಿಕೆ ಮಾಡಲು ಹೊರಟಿರುವುದು ಭೂಮಿ ಕಳೆದುಕೊಂಡ ರೈತರ ಪಾಲಿಗೆ ಮರಣ ಶಾಸನವಾಗಿದೆ. ಈ ಹಿಂದೆ ಭೂಮಿ ಕಳೆದುಕೊಳ್ಳುವ ರೈತರಿಗೆ ಅವರ ಸರ್ವೇ ನಂಬರ್‌ನಲ್ಲಿಯೇ ನಿವೇಶನ ನೀಡುವ ಭರವಸೆ ನೀಡಲಾಗಿತ್ತು. ಆದರೆ ಬಿಡಿಎ ತಮಗಿಷ್ಟದಂತೆ ನಿವೇಶನ ಹಂಚಿಕೆ ಮಾಡಲು ಹೊರಟಿದೆ’ ಎಂದು ಕಿಡಿಕಾರಿದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ-ದಾಬಸ್‌ಪೇಟೆ 5000 ಎಕ್ರೆ ಕ್ವಿನ್ ಸಿಟಿಯಲ್ಲಿ ಹೊಸ ಅಧ್ಯಾಯ : ಸಚಿವ MB Patil

ರೈತರಿಗೆ ಶೇ.40 ಪಾಲಿಸದ ಬಿಡಿಎ ವಿರುದ್ಧ ಅಸಮಾಧಾನ

ಪ್ರತಿ 30×40 ಸನಿವೇಶನಕ್ಕೆ ಅಡಿಗೆ 50 ರು.ನಂತೆ 54 ಸಾವಿರ ರು. ಆಡಳಿತಾತ್ಮಕ ವೆಚ್ಚ ನಿಗದಿ ಮಾಡಿದ್ದು, ನಿವೇಶನ ಹೊಂದುವ ರೈತರ ಕನಸು ಕನಸಾಗಿಯೇ ಉಳಿಸುವ ನಿರ್ಧಾರವಾಗಿದೆ. ಬಿಡಿಎ ಕೂಡಲೇ ಈ ಆಡಳಿತಾತ್ಮಕ ವೆಚ್ಚವನ್ನು ರದ್ದುಗೊಳಿಸಬೇಕು. ರೈತರಿಗೆ ಇನ್ನೂ ನಿವೇಶನ ಹಂಚದಿರುವುದರಿಂದ ರೈತರಿಗೆ ಅಭಿವೃದ್ಧಿಪಡಿಸಿದ 100×80 ನಿವೇಶನಗಳು ಮತ್ತು 60 ಅಡಿ ರಸ್ತೆಗಳಿಗೆ ಹೊಂದಿಕೊಂಡಂತಿರುವ ವಾಣಿಜ್ಯ ಮತ್ತು ಮೂಲೆ ನಿವೇಶನಗಳನ್ನು ಶೇ.50:50ರ ಅನುಪಾತದಲ್ಲಿ ಕೊಡಬೇಕೆಂದರು.

ಈ ವೇಳೆ ಸಂತ್ರಸ್ತರ ಸಂಘದ ಪದಾಧಿಕಾರಿ ಬಸವರಾಜ ಪಾದಯಾತ್ರಿ, ರಾಮಗೊಂಡನಹಳ್ಳಿ ರಮೇಶ್ ಮುನಿರಾಜು, ಟಿ.ಜಿ. ಚಂದ್ರು, ಕೃಷ್ಣಪ್ಪ ಸೇರಿದಂತೆ ರೈತರಿದ್ದರು.

ಇದನ್ನೂ ಓದಿ: ಬರೋಬ್ಬರಿ ಈ 75 ದಿನ KSR ಬೆಂಗಳೂರು ನಿಲ್ದಾಣಕ್ಕೆ ಬರಲ್ಲ ಮೇಮು ರೈಲು; ಭಾಗಶಃ ರದ್ದು