ವಿಜಯನಗರದ ಹೊಸಪೇಟೆಯಲ್ಲಿ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುವಾಗ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಟ್ರ್ಯಾಕ್ಟರ್ ಸಮೇತ ಗಣೇಶನ ಮೂರ್ತಿ ಕಾಲುವೆಗೆ ಬಿದ್ದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯನಗರ: ಗಣೇಶ ಹಬ್ಬವನ್ನು ತುಂಬಾ ಸಡಗರ, ಉತ್ಸಾಹದಿಂದ ಆಚರಿಸಲಾಗುತ್ತಿದೆ. ಆದರೆ ವಿಜಯನಗರದಿಂದ ಅತ್ಯಂತ ನೋವಿನ ಸುದ್ದಿಯೊಂದು ಹೊರಬಿದ್ದಿದೆ. ಗಣೇಶ ಮೂರ್ತಿ ಕೊಂಡೊಯ್ಯುವ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ.

ಏನಾಯ್ತು?

ಹೊಸಪೇಟೆ ತಾಲೂಕಿನ ಅನಂತಶಯನಗುಡಿಯ ಹೊರವಲಯದಲ್ಲಿ ದುರ್ಘಟನೆ ಸಂಭವಿಸಿದೆ. ಹಬ್ಬ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನ ಕೂರಿಸಲು ಗ್ರಾಮದತ್ತ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದರು. ಗಣೇಶ ವಿಗ್ರಹವನ್ನು ಟ್ರಾಕ್ಟರ್‍‌ನಲ್ಲಿ ಕೂರಿಸಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಹೀಗೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಗಣೇಶನ ಮೂರ್ತಿಗೆ ಕಟ್ಟಿದ್ದ ಬಿದಿರಿನ ಕೋಲು ವಿದ್ಯುತ್ ತಂತಿಗೆ ಟಚ್ ಆಗಿದೆ.

ತಂತಿಗೆ ಕೋಲು ತಾಗುತ್ತಿದ್ದಂತೆಯೇ ಟ್ರಾಕ್ಟರ್‍‌ನಲ್ಲಿದ್ದವರಿಗೆ ವಿದ್ಯುತ್ ಪ್ರವಹಿಸಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ದುರ್ಘಟನೆಯಲ್ಲಿ ಹುಲುಗಪ್ಪ ಮತ್ತು ದೀಪಕ್ ಅನ್ನೋರಿಗೆ ಗಾಯವಾಗಿದೆ.ಹುಲುಗಪ್ಪ ಮತ್ತು ದೀಪಕ್ ಇವರು ಕಮಲಾಪುರ ಮೂಲದವರು. ಶಾಕ್ ಹೊಡೆದ ಹೊಡೆತಕ್ಕೆ ಟ್ರಾಕ್ಟರ್ ಕಾಲುವೆಗೆ ಉರುಳಿ ಬಿದ್ದಿದೆ. ಮಾತ್ರವಲ್ಲ ಗಣೇಶನ ಮೂರ್ತಿ ಕೂಡ ಕಾಲುವಿಗೆ ಉರುಳಿಬಿದ್ದಿದೆ.

ಹಬ್ಬದ ಸಡಗರದಲ್ಲಿದ್ದವರಿಗೆ ದೊಡ್ಡ ಆಘಾತ ಆಗಿದೆ. ಸದ್ಯ ಗಾಯಗೊಂಡಿರುವ ದೀಪಕ್ ಮತ್ತು ಹುಲುಗಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಬಳ್ಳಾರಿಯ ಬಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಎಸ್ಪಿ ಜಾಹ್ನವಿ ಎಸ್, ಹೊಸಪೇಟೆ ಡಿವೈಎಸ್ಪಿ ಮುರಳಿಧರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು, ಗಣೇಶ ಉತ್ಸವ ಆಚರಣೆ ವೇಳೆ ಜಾಗ್ರಾತರಾಗಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

ಗಣೇಶ ಉತ್ಸವದ ವೇಳೆ ವಹಿಸಬೇಕಾದ ಜಾಗ್ರತೆಗಳು ಏನೇನು?

  • ಪರಿಸರ ಪೂರಕ ಆಚರಣೆ (ಮಣ್ಣಿನ ಗಣೇಶ)
  • ಮನೆಯಲ್ಲೇ ವಿಸರ್ಜನೆಗೆ ಆಧ್ಯತೆ ನೀಡಿ
  • ಪ್ಲಾಸ್ಟಿಕ್ ಮುಕ್ತ ಅಲಂಕಾರಕ್ಕೆ ಆದ್ಯತೆ ನೀಡಿ
  • ವಿದ್ಯುತ್ ಮತ್ತು ಪೆಂಡಾಲ್ ಬಗ್ಗೆ ಗಮನ ಇರಲಿ
  • ಆಗಾಗ ವೈರಿಂಗ್ ತಪಾಸಣೆ ಮಾಡಿಕೊಳ್ಳಿ
  • ಅಗ್ನಿಶಾಮಕ ವ್ಯವಸ್ಥೆಗೆ ಹೇಳಿಕೊಳ್ಳಿ (ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ)
  • ಆರತಿ, ದೀಪಗಳ ಬಗ್ಗೆ ಒತ್ತು ಇರಲಿ
  • ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಶಿಸ್ತು ಇರಲಿ
  • ಧ್ವನಿ ಮಾಲಿನ್ಯ ಆಗದಂತೆ ನೋಡಿಕೊಳ್ಳಿ
  • ಸಂಚಾರ ದಟ್ಟಣೆಯನ್ನು ನಿಯಂತ್ರಣ ಆಗುವಂತೆ ಆಚರಿಸಿ
  • ಅಪರಿಚಿತ ವಸ್ತುಗಳ ಬಗ್ಗೆ ಆಯೋಜಕರು ಎಚ್ಚರದಿಂದ ಇರಬೇಕು
  • ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಮಾಡುವಾಗ ಸ್ವಚ್ಛತೆ ಕಾಪಾಡಿಕೊಳ್ಳಿ