ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪರಿಸರ ಸ್ನೇಹಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಗರದಾದ್ಯಂತ 122 ಏಕಗವಾಕ್ಷಿ ಕೇಂದ್ರಗಳು, 659 ಮೊಬೈಲ್ ಟ್ಯಾಂಕ್ಗಳು ಮತ್ತು 42 ಕಲ್ಯಾಣಿಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗಳ ಸುಸೂತ್ರ ಮತ್ತು ಪರಿಸರ ಸ್ನೇಹಿ ವಿಸರ್ಜನೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಾರ್ವಜನಿಕರಿಗೆ ಹಾಗೂ ಗಣೇಶ ಮಂಡಳಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಗರದಾದ್ಯಂತ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
122 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಂಘಟಕರು ವಿವಿಧ ಇಲಾಖೆಗಳಿಂದ ಸುಲಭವಾಗಿ ಅನುಮತಿ ಪಡೆಯಲು ಅನುಕೂಲವಾಗುವಂತೆ ನಗರದಾದ್ಯಂತ ಒಟ್ಟು 122 ಏಕಗವಾಕ್ಷಿ (Single Window) ಕೇಂದ್ರಗಳನ್ನು ತೆರೆಯಲಾಗಿದೆ.
ನಗರ ಪಾಲಿಕೆವಾರು ಏಕಗವಾಕ್ಷಿ ಕೇಂದ್ರಗಳ ವಿವರ:
ಉತ್ತರ ಪಾಲಿಕೆ: 30
ದಕ್ಷಿಣ ಪಾಲಿಕೆ: 29
ಕೇಂದ್ರ ಪಾಲಿಕೆ: 24
ಪಶ್ಚಿಮ ಪಾಲಿಕೆ: 22
ಪೂರ್ವ ಪಾಲಿಕೆ: 17
ಒಟ್ಟು: 122 ಕೇಂದ್ರಗಳು
ವಿಸರ್ಜನೆಗೆ 42 ಕಲ್ಯಾಣಿ ಹಾಗೂ 659 ಮೊಬೈಲ್ ಟ್ಯಾಂಕ್ಗಳು
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಗರದಾದ್ಯಂತ ಗಣೇಶ ಮೂರ್ತಿಗಳ ಸುಸೂತ್ರ ವಿಸರ್ಜನೆಗಾಗಿ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 659 ಮೊಬೈಲ್ ಟ್ಯಾಂಕರ್ಗಳು ಹಾಗೂ 42 ತಾತ್ಕಾಲಿಕ ಕಲ್ಯಾಣಿಗಳನ್ನು ವ್ಯವಸ್ಥೆಗೊಳಿಸಿದೆ.
ಮೊಬೈಲ್ ಟ್ಯಾಂಕರ್ಗಳು: ಪಶ್ಚಿಮ ಪಾಲಿಕೆಯಲ್ಲಿ ಗರಿಷ್ಠ 161 ಹಾಗೂ ದಕ್ಷಿಣ ಪಾಲಿಕೆಯಲ್ಲಿ 159 ಟ್ಯಾಂಕರ್ಗಳನ್ನು ನಿಯೋಜಿಸಲಾಗಿದ್ದು, ಕೇಂದ್ರ 146 ಟ್ಯಾಂಕರ್, ಉತ್ತರ 113 ಟ್ಯಾಂಕರ್ ಮತ್ತು ಪೂರ್ವ 80 ಟ್ಯಾಂಕರ್ ಹೀಗೆ ಪಾಲಿಕೆಗಳಲ್ಲೂ ವಿಸರ್ಜನೆಗೆ ಸೌಲಭ್ಯ ಕಲ್ಪಿಸಲಾಗಿದೆ.
ಕಲ್ಯಾಣಿಗಳು: ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಗರಿಷ್ಠ 14 ಹಾಗೂ ಉತ್ತರ ಪಾಲಿಕೆಯಲ್ಲಿ 12 ಕಲ್ಯಾಣಿಗಳಿದ್ದು, ಪಶ್ಚಿಮ 9 ಕಲ್ಯಾಣಿ, ದಕ್ಷಿಣ 6 ಕಲ್ಯಾಣಿ ಮತ್ತು ಕೇಂದ್ರ 1 ಕಲ್ಯಾಣಿ ಪಾಲಿಕೆಗಳಲ್ಲೂ ವಿಸರ್ಜನಾ ಕಲ್ಯಾಣಿ ವ್ಯವಸ್ಥೆ ಮಾಡಲಾಗಿದೆ.
ಕ್ಯೂಆರ್ ಕೋಡ್ ಮತ್ತು ವೆಬ್ಸೈಟ್ ಮೂಲಕ ಮಾಹಿತಿ
ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳು, ಮೊಬೈಲ್ ಟ್ಯಾಂಕರ್ಗಳ ಚಲನವಲನ ಹಾಗೂ ಏಕಗವಾಕ್ಷಿ ಕೇಂದ್ರಗಳ ಸಂಪೂರ್ಣ ವಿವರಗಳನ್ನು ನಾಗರಿಕರು ಸುಲಭವಾಗಿ ತಿಳಿದುಕೊಳ್ಳಲು ಜಿಬಿಎ ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಜೊತೆಗೆ, ಸಾರ್ವಜನಿಕರು ಅಧಿಕೃತ ವೆಬ್ಸೈಟ್ https://apps.bbmp.gov.in/ganesha2026 ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.


