ಡಿಸಿಎಂ ಪರಮೇಶ್ವರ್ ಅವರು 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಬಾರಿ ನ್ಯಾಯಾಲಯದ ಮೂಲಕ ಪರಿಹಾರ ಪಡೆದಿದ್ದನ್ನು ಸ್ಮರಿಸಿದ ಅವರು, ರಾಜ್ಯದ ಪರಿಹಾರವನ್ನು 10 ದಿನಗಳಲ್ಲಿ ವಿತರಿಸಲಾಗುವುದು ಹಾಗೂ ಕೇಂದ್ರದ ತಂಡದ ಪರಿಶೀಲನೆ ನಂತರ ಹೆಚ್ಚಿನ ನೆರವು ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರು: ರೈತರಿಗೆ ಬರ ಪರಿಹಾರ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಪರಮೇಶ್ವರ್ ಅವರು, 101 ತಾಲೂಕುಗಳನ್ನು ಬರ ತಾಲೂಕು ಎಂದು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಪರಿಹಾರದ ಕುರಿತು ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ನಿಯಮಗಳಂತೆ ಬರ ಅಧ್ಯಯನ ಆಗಿದೆ. ಅವರು ಕೂಡ ಒಂದು ಟೀಮ್ ಕಳುಹಿಸಿ ಪರಿಶೀಲನೆ ಮಾಡುತ್ತಾರೆ. ಆ ಬಳಿಕ ಪರಿಹಾರದ ಹಣ ಬಿಡುಗಡೆ ಮಾಡ್ತಾರೆ ಎಂದು ತಿಳಿಸಿದ್ದಾರೆ.

ಕೋರ್ಟ್‌ಗೆ ಹೋಗಿದ್ದಕ್ಕೆ ಪರಿಹಾರ ಕೊಟ್ಟಿದ್ದರು

ಮೈಸೂರಿನಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಡಾ ಪರಮೇಶ್ವರ್ ಅವರು, ಮೊದಲು ನಮ್ಮ ಮುಂದೆ ಇರೋದು ಕುಡಿಯುವ ನೀರಿಗೆ ಮೊದಲ ಆದ್ಯತೆ. ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು. ಕಳೆದ ಬಾರಿ 39 ಸಾವಿರ ಕೋಟಿ ನಷ್ಟ ಆಗಿದೆ, ನಮಗೆ 18 ಸಾವಿರ ಕೋಟಿ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದೇವು. ಕಳೆದ ಬಾರಿ ನ್ಯಾಯಾಲಯಕ್ಕೆ ಹೋಗಿ ಹೋರಾಟ ಮಾಡಿದಕ್ಕೆ ಕೇಂದ್ರ ಸರ್ಕಾರದಿಂದ 3,500 ಸಾವಿರ ಕೋಟಿ ಪರಿಹಾರ ಬಂತು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಎಂದು ಮನವಿ ಮಾಡ್ತೀವಿ ಎಂದು ಹೇಳಿದರು.

ಈಗ ಎಸ್‌ಡಿಆರ್‌ಎಫ್‌ನಲ್ಲಿ 1200 ಕೋಟಿ ಕೊಡಲು ತೀರ್ಮಾನ ಮಾಡಿದ್ದಾರೆ, ತಕ್ಷಣ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ. ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಪರಿಹಾರ ಕೊಡುತ್ತೇವೆ. ಕೇಂದ್ರ ಬೇಗ ಹಣ ಬಿಡುಗಡೆ ಮಾಡಿದರೆ ರೈತರಿಗೆ ಬೇಗ ಪರಿಹಾರ ನೀಡಲು ಅನುಕೂಲವಾಗುತ್ತದೆ. ನಷ್ಟದ ಅಂದಾಜು ಮಾಡುವ ಕೆಲಸ ಆಗ್ತಿದೆ, ಕೇಂದ್ರದ ನಿಯಮಗಳಂತೆಯೇ ನಷ್ಟದ ಪರಿಶೀಲನೆ ಮಾಡಿ ವರದಿ ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ನೋಡಿಕೊಳ್ಳುತ್ತಾರೆ!

ಮೈಸೂರಿನಲ್ಲಿ ಮದರಗಹಳ್ಳಿ ಕೃಷಿ ಭೂಮಿಗೆ ನೋಟಿಫಿಕೇಶನ್ ವಿಚಾರವಾಗಿ ಸ್ಪಷ್ಟನೆ ನೀಡಿದ ಡಿಸಿಎಂ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮೈಸೂರಿನಲ್ಲಿ ಹೆಚ್ಚಿನ ಕಾರ್ಖಾನೆಗಳು ಬರಬೇಕು ಅಂತ ಕೆ.ಐ.ಡಿ. ಬಿ ಭೂಮಿಗೆ ನೋಟಿಫಿಕೇಶನ್ ಕೊಟ್ಟಿರಬಹುದು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಮಂತ್ರಿಗಳು ನೋಡಿಕೊಳ್ಳುತ್ತಾರೆ. ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಕೈಗಾರಿಕಾ ಮಂತ್ರಿಗಳು ಜಿಲ್ಲಾ ಮಂತ್ರಿಗಳು ಈ ಬಗ್ಗೆ ನೋಡಿಕೊಳ್ಳುತ್ತಾರೆ.