ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಶೌಚಾಲಯದ ಕಮೋಡ್‌ನಲ್ಲಿ ಮೃತ ಶಿಶುವೊಂದು ಪತ್ತೆಯಾಗಿದೆ. ಸ್ವಚ್ಛತಾ ಸಿಬ್ಬಂದಿ ಇದನ್ನು ಗಮನಿಸಿ ವೈದ್ಯರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಚಾಮರಾಜನಗರ: ಮಕ್ಕಳು ಬೇಕೆಂದು ಜನರು ದೇವರ ಮೊರೆ, ವೈದ್ಯರ ಬಳಿ ಅಲೆಯುವುದನ್ನು ನೋಡಿದ್ದೇವೆ. ಆದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವೊಂದು ಶೌಚಾಲಯದ ಕಮೋಡ್‌ ಒಳಗೆ ತುರುಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗುವನ್ನು ತಾಯಿಯೇ ಹಾಕಿದರೋ ಅಥವಾ ಬೇರೆಯಾರಾದರೂ ತುರುಕಿದ್ದಾರೋ ಎಂಬುದು ತಿಳಿಯಬೇಕಿದೆ.

ಮೃತಪಟ್ಟ ಸ್ಥಿತಿಯಲ್ಲಿ ಮಗು ಪತ್ತೆ

ಬುಧವಾರ ಬೆಳಗ್ಗೆ ಶೌಚಾಲಯದ ಸ್ವಚ್ಛತೆಗೆ ತೆರಳಿದ್ದ ಸಿಬ್ಬಂದಿಗೆ ಕಮೋಡ್‌ ಒಳಗೆ ಮೃತಪಟ್ಟ ಸ್ಥಿತಿಯಲ್ಲಿ ಮಗು ಸಿಕ್ಕಿದೆ. ಕೂಡಲೇ ಅದನ್ನು ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್‌ ಅವರ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ವೈದ್ಯರು, ಕೂಡಲೇ ಗುಂಡ್ಲುಪೇಟೆ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: ವೀಸಾ ಮುಗಿದ್ರೂ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ವಾಸವಿದ್ದ ಪಾಕ್ ತಾಯಿ-ಮಗ ಬಂಧನ! ಆಧಾರ್, ವೋಟರ್ ಐಡಿ ಪಡೆದಿದ್ದು ಹೇಗೆ?

ಪೊಲೀಸರಿಂದ ತನಿಖೆ ಆರಂಭ

ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಗುವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿದ್ದಾರೆ. ಮಗುವನ್ನು ಕೊಂದು ಬಿಸಾಡಿದರೋ ಅಥವಾ ತುರುಕಿದ ಬಳಿಕ ಮೃತಪಟ್ಟಿದೆಯೋ ಎಂಬುದು ಬಯಲಿಗೆ ಬರಬೇಕಿದೆ.

ಇದನ್ನೂ ಓದಿ: Hanur Encounter Case: ಕಳ್ಳಬೇಟೆ ತಡೆ ಶಿಬಿರಕ್ಕೆ ಜಿಲೆಟಿನ್‌ ಇಟ್ಟು ಸ್ಫೋಟಿಸಿದ್ದು ಹಳ್ಳಿಯ ಮುಗ್ಧ ಜನರೇ, ವಿಧ್ವಂಸಕ ಶಕ್ತಿಗಳೇ?