ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ತಾಯಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಬೆಂಗಳೂರು ಹಾಗೂ ಬಾಗೇಪಲ್ಲಿಯಲ್ಲಿ ಆಧಾರ್, ಪಡಿತರ ಚೀಟಿ ಸೇರಿದಂತೆ ಹಲವು ದಾಖಲೆ ಅಕ್ರಮವಾಗಿ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.
ಬಾಗೇಪಲ್ಲಿ (ಜು.12): ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಆರೋಪದಡಿಯಲ್ಲಿ ಪಾಕಿಸ್ತಾನ ಮೂಲದ ತಾಯಿ ಮತ್ತು ಪುತ್ರನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ(Devaragudipalli) ಪಂಚಾಯಿತಿ ವ್ಯಾಪ್ತಿಯ ದಾಸಯ್ಯಗಾರಿಪಲ್ಲಿ ಗ್ರಾಮ(Dasayyagaripalli)ದಲ್ಲಿದ್ದ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದೀನ್ ಖಾನ್ ಅವರನ್ನು ಬಂಧಿಸಿದ್ದಾರೆ. ಅಯೂಬ್ ಖಾನ್, 1993ರಲ್ಲಿ ದುಬೈನಲ್ಲಿ ಫರ್ಹಾನಾಜ್ಳ ಪರಿಚಯವಾಗಿ 2003ರಲ್ಲಿ ಆಕೆಯನ್ನು ವಿವಾಹವಾಗಿದ್ದ. ಈ ದಂಪತಿಗೆ ಒಬ್ಬ ಮಗ ಪಾಕಿಸ್ತಾನದಲ್ಲಿ, ಉಳಿದ ಇಬ್ಬರು ಮಕ್ಕಳು ದುಬೈನಲ್ಲಿ ಹುಟ್ಟಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: 'ಮಿನಿ ಇರಾನ್' ಅಲಿಪುರದಿಂದ ಖಮೇನಿ ಅಂತ್ಯಕ್ರಿಯೆಗೆ ಹೊರಟ 100 ಜನರು!
ನಂತರ ತಾಯಿ, ಪುತ್ರ ಭಾರತಕ್ಕೆ ಬಂದಿದ್ದು, ಬೆಂಗಳೂರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪಡೆದು, ನಂತರ ಬಾಗೇಪಲ್ಲಿಗೆ ಅವುಗಳನ್ನು ವರ್ಗಾಯಿಸಿಕೊಂಡಿದ್ದರು. ನಂತರ ಅಲ್ಲಿ ಪಡಿತರ ಚೀಟಿ ಹಾಗೂ ಮತದಾರರ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


