ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ವಿಧಾನಸಭೆಯಲ್ಲಿ ನಿಂತು ಘೋಷಣೆ ಮಾಡುತ್ತಿದ್ದಂತೆಯೇ ಭಾರೀ ಚರ್ಚೆಗೆ ಕಾರಣವಾಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ..

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮಹಿಳೆಯರಿಗಾಗಿ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, 'ಅನ್ನಪೂರ್ಣಿ ಸೂಪರ್ ಸಿಕ್ಸ್' ಯೋಜನೆಯಡಿ ಉಚಿತ ಸಿಲಿಂಡರ್ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಏನಿದು 'ಅನ್ನಪೂರ್ಣಿ ಸೂಪರ್ ಸಿಕ್ಸ್' ಯೋಜನೆ?

ಮಹಿಳಾ ಸಬಲೀಕರಣ ಮತ್ತು ಬಡ ಕುಟುಂಬಗಳ ನೆರವಿಗಾಗಿ ವಿಜಯ್ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ. ಇದರ ಪ್ರಮುಖ ಅಂಶಗಳು ಇಲ್ಲಿವೆ..

ಉಚಿತ ಎಲ್‌ಪಿಜಿ ಸಿಲಿಂಡರ್: ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ವರ್ಷಕ್ಕೆ ಮೂರು ಅಡುಗೆ ಅನಿಲ (LPG) ಸಿಲಿಂಡರ್‌ಗಳು ಉಚಿತ

ನೇರ ನಗದು ವರ್ಗಾವಣೆ (DBT): ಫಲಾನುಭವಿಗಳು ಮೊದಲು ಸಿಲಿಂಡರ್ ಬುಕ್ ಮಾಡಿ ಹಣ ಪಾವತಿಸಬೇಕು. ನಂತರ ಆ ಮೊತ್ತವನ್ನು ಸರ್ಕಾರವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲಿದೆ.

ಯಾರಿಗೆ ಅನ್ವಯ?: ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಕಡಿಮೆ ಇರುವ ಕುಟುಂಬಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು (EWS), ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳು ಹಾಗೂ ವಿಕಲಚೇತನರಿರುವ ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದೆ.

ಬಜೆಟ್ ಮತ್ತು ಜಾರಿ: ಈ ಯೋಜನೆಗಾಗಿ ಸರ್ಕಾರ ವಾರ್ಷಿಕ ಸುಮಾರು 4,000 ಕೋಟಿ ರೂ. ವ್ಯಯಿಸಲಿದೆ. ಸುಮಾರು 1.3 ಕೋಟಿ ಕುಟುಂಬಗಳಿಗೆ ಇದರ ಲಾಭ ಸಿಗಲಿದ್ದು, ಬರುವ ಸಂಕ್ರಾಂತಿ (ಪೊಂಗಲ್) ಹಬ್ಬದಿಂದ ಯೋಜನೆ ಜಾರಿಗೆ ಬರಲಿದೆ.

ಬಸ್ ಪ್ರಯಾಣ ಉಚಿತ - ಈಗ ಎಕ್ಸ್‌ಪ್ರೆಸ್‌ ಬಸ್‌ಗಳಲ್ಲೂ ಲಭ್ಯ!

ಈಗಾಗಲೇ ಜಾರಿಯಲ್ಲಿದ್ದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಸಿಎಂ ವಿಜಯ್ ಮತ್ತಷ್ಟು ವಿಸ್ತರಿಸಿದ್ದಾರೆ. ಈ ಹಿಂದೆ ಕೇವಲ ಸಾಮಾನ್ಯ ಬಸ್‌ಗಳಿಗೆ ಸೀಮಿತವಾಗಿದ್ದ ಈ ಸೌಲಭ್ಯ, ಇನ್ಮುಂದೆ ಸರ್ಕಾರಿ ಎಕ್ಸ್‌ಪ್ರೆಸ್‌ ಮತ್ತು ಡಿಲಕ್ಸ್ ಬಸ್‌ಗಳಿಗೂ ಅನ್ವಯವಾಗಲಿದೆ. ಇದಕ್ಕೆ ಯಾವುದೇ ಆದಾಯ ಮಿತಿ ಇರುವುದಿಲ್ಲ ಮತ್ತು ದಿನಕ್ಕೆ ಇಷ್ಟೇ ಬಾರಿ ಪ್ರಯಾಣಿಸಬೇಕು ಎಂಬ ನಿಯಮವೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪರಂದೂರು ವಿಮಾನ ನಿಲ್ದಾಣ ಯೋಜನೆ ಕೈಬಿಟ್ಟ ಸರ್ಕಾರ

ಇದೇ ವೇಳೆ ರೈತರಿಗೆ ಪೂರಕವಾದ ಮತ್ತೊಂದು ದೊಡ್ಡ ನಿರ್ಧಾರ ವಿಜಯ್ ಪ್ರಕಟಿಸಿದ್ದಾರೆ. ಚೆನ್ನೈನ ಎರಡನೇ ವಿಮಾನ ನಿಲ್ದಾಣವನ್ನು ಪರಂದೂರು ಎಂಬಲ್ಲಿ ನಿರ್ಮಿಸುವ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ಈ ಯೋಜನೆಯಿಂದ ಕೃಷಿ ಭೂಮಿಗೆ ಹಾನಿಯಾಗುತ್ತಿತ್ತು ಮತ್ತು ರೈತರ ಜೀವನೋಪಾಯಕ್ಕೆ ತೊಂದರೆಯಾಗುತ್ತಿತ್ತು. ಹಾಗಾಗಿ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ತಳೆಯಲಾಗಿದೆ ಎಂದು ಹೇಳಿದರು. ಆದರೆ, ನಗರದ ಅಭಿವೃದ್ಧಿಗೆ ಹೊಸ ವಿಮಾನ ನಿಲ್ದಾಣದ ಅಗತ್ಯವಿದ್ದು, ಕೃಷಿ ಭೂಮಿಗೆ ತೊಂದರೆಯಾಗದ ಪರ್ಯಾಯ ಜಾಗವನ್ನು ಹುಡುಕಲಾಗುವುದು ಎಂದು ತಿಳಿಸಿದರು. ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾದ ನಂತರ ವಿಜಯ್ ಅವರು ಘೋಷಿಸಿರುವ ಈ ಜನಪ್ರಿಯ ಯೋಜನೆಗಳು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ.