ದುಲೀಪ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡವು ಮೊದಲ ದಿನದಾಟದಲ್ಲೇ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ದಕ್ಷಿಣ ವಲಯದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದೆ. ಅಜೇಯ ಶತಕ ಸಿಡಿಸಿ ಮಿಂಚಿದ ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್. ವೈಭವ್ ಸೂರ್ಯವಂಶಿ ಕೂಡಾ ಸ್ಪೋಟಕ ಬ್ಯಾಟಿಂಗ್ ನಡೆಸಿದರು.

ಚೆನ್ನೈ: ದಕ್ಷಿಣ ವಲಯ ವಿರುದ್ಧದ ದುಲೀಪ್‌ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಪೂರ್ವ ವಲಯ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಇಶಾನ್‌ ಕಿಶನ್‌ ಸೇರಿ ತಂಡದ ಬಹುತೇಕ ಎಲ್ಲಾ ಬ್ಯಾಟರ್‌ಗಳೂ ಸ್ಫೋಟಕ ಆಟವಾಡಿದ್ದು, ದಿನದಂತ್ಯಕ್ಕೆ 4 ವಿಕೆಟ್‌ ನಷ್ಟದಲ್ಲಿ 385 ರನ್‌ ಕಲೆಹಾಕಿದೆ.

ಟಾಸ್‌ ಗೆದ್ದಿದ್ದು ಹೊರತುಪಡಿಸಿ ಬೇರೆ ಯಾವುದರಲ್ಲೂ ದಕ್ಷಿಣಕ್ಕೆ ಮೇಲುಗೈ ಸಾಧಿಸಲಾಗಲಿಲ್ಲ. ನಿಧಾನಗತಿ ಆಡವಾಡುತ್ತಾ ತಂಡಕ್ಕೆ ನೆರವಾಗುವುದಕ್ಕೆ ಹೆಸರುವಾಸಿಯಾಗಿದ್ದ ಅಭಿಮನ್ಯು ಈಶ್ವರನ್‌ ಕೂಡಾ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ್ದು ಗಮರ್ನಾಹ. ವೈಭವ್‌ ಸೂರ್ಯವಂಶಿ ಜೊತೆಗೂಡಿ ಇನ್ನಿಂಗ್ಸ್‌ ಆರಂಭಿಸಿದ ಈಶ್ವರನ್‌, 14.4 ಓವರ್‌ಗಳಲ್ಲಿ 100 ರನ್‌ ಜೊತೆಯಾಟವಾಡಿದರು. ವೈಭವ್‌ ಕೇವಲ 37 ಎಸೆತಗಳಲ್ಲೇ 44 ರನ್‌ ಸಿಡಿಸಿದರೆ, ಈಶ್ವರನ್‌ 87 ಎಸೆತಗಳಲ್ಲಿ 72 ರನ್‌ ಬಾರಿಸಿ ನಿರ್ಗಮಿಸಿದರು. ಸುದೀಪ್‌ ಘರಮಿ ಕೇವಲ 6 ರನ್‌ಗೆ ಔಟಾಗಿದ್ದು, ತಂಡದ ಪರ ಮೊದಲ ದಿನ ಎರಡಂಕಿ ಗಳಿಸದ ಏಕೈಕ ಆಟಗಾರ ಎನಿಸಿಕೊಂಡರು.

ಅ ಬಳಿಕ ನಡೆದಿದ್ದು ಜಾರ್ಖಂಡ್‌ನ ಶಿಖರ್‌ ಮೋಹನ್‌ ಮನಮೋಹಕ ಆಟ. 4ನೇ ವಿಕೆಟ್‌ಗೆ ಮೋಹನ್‌ ಹಾಗೂ ನಾಯಕ ಇಶಾನ್‌ 94 ರನ್‌ ಜೊತೆಯಾಟ ನಡೆಸಿದರು. ಆದರೆ ಶತಕದ ಅಂಚಿನಲ್ಲಿ ಎಡವಿದ ಮೋಹನ್‌, 85 ರನ್‌ಗೆ ಔಟಾದರು. ಬಳಿಕ ಮುರಿಯದ 5ನೇ ವಿಕೆಟ್‌ಗೆ ಜೊತೆಯಾಗಿರುವ ಇಶಾನ್‌ ಹಾಗೂ ಕುಮಾರ್‌ ಕುಶಾಗ್ರ 144 ರನ್‌ ಸೇರಿಸಿದ್ದು, 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇಶಾನ್‌ 135 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 111 ರನ್‌ ಗಳಿಸಿದ್ದರೆ, ಕುಶಾಗ್ರ 75 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಔಟಾಗದೆ 63 ರನ್‌ ಸಿಡಿಸಿದ್ದಾರೆ.

ಸಿರಾಜ್‌ ದುಬಾರಿ:

ಈ ಪಂದ್ಯಕ್ಕಾಗಿ ದಕ್ಷಿಣ ವಲಯ ತಂಡ ಸೇರಿಸಿಕೊಂಡಿದ್ದ ವೇಗಿ ಮೊಹಮ್ಮದ್‌ ಸಿರಾಜ್‌ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅವರು 14 ಓವರ್‌ ಎಸೆದು 6.90ರ ಎಕಾನಮಿಯಲ್ಲಿ 96 ರನ್‌ ಬಿಟ್ಟುಕೊಟ್ಟರು. ಒಂದೂ ವಿಕೆಟ್‌ ಪಡೆಯಲಿಲ್ಲ. ಕನ್ನಡಿಗ ಶ್ರೇಯಸ್‌ ಗೋಪಾಲ್‌ 19 ಓವರ್‌ಗಳಲ್ಲಿ 77 ರನ್‌ ನೀಡಿದರು.

ಸ್ಕೋರ್‌: ಪೂರ್ವ ವಲಯ 385/4 (ಮೊದಲ ದಿನದಂತ್ಯಕ್ಕೆ) (ಇಶಾನ್‌ ಔಟಾಗದೆ 111, ಶಿಖರ್‌ 85, ಅಭಿಮನ್ಯು 72, ಕುಶಾಗ್ರ ಔಟಾಗದೆ 63, ವೈಭವ್‌ 44, ಮಿಲಿಂದ್‌ 2-56)

ಪ್ರಥಮ ದರ್ಜೆಯಲ್ಲಿ ಇಶಾನ್‌ 4000 ರನ್‌

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಾರ್ಖಂಡ್‌ನ ಇಶಾನ್‌ ಕಿಶನ್‌ 4000 ರನ್‌ ಪೂರೈಸಿದರು. ಅವರು ಈ ಮಾದರಿಯಲ್ಲಿ 67 ಪಂದ್ಯಗಳನ್ನಾಡಿದ್ದು, 10 ಶತಕ, 19 ಅರ್ಧಶತಕ ಸಿಡಿಸಿದ್ದಾರೆ. 273 ಅವರ ಗರಿಷ್ಠ ಸ್ಕೋರ್‌.

ವೈಭವ್‌-ತಿಲಕ್‌ ನಡುವೆ ಮೈದಾನದಲ್ಲಿ ವಾಗ್ವಾದ

ಪಂದ್ಯದಲ್ಲಿ ದಕ್ಷಿಣ ವಲಯ ನಾಯಕ ತಿಲಕ್‌ ಹಾಗೂ ಪೂರ್ವ ವಲಯ ಬ್ಯಾಟರ್‌ ವೈಭವ್‌ ನಡುವೆ ವಾಗ್ವಾದ ನಡೆಯಿತು. ಪಂದ್ಯದಲ್ಲಿ ಸಿರಾಜ್‌ ಹಾಗೂ ಇತರ ಬೌಲರ್‌ಗಳನ್ನು ವೈಭವ್‌ ಮನಬಂದಂತೆ ದಂಡಿಸಿದರು. ಈ ಮಧ್ಯೆ ತಿಲಕ್‌ ಹಾಗೂ ವೈಭವ್‌ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದರ ಫೋಟೋ, ವಿಡಿಯೋ ವೈರಲ್‌ ಆಗಿವೆ.