ಶೃಂಗೇರಿಯ 26 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಿರುವ 7ನೇ ಕರಡು ಅಧಿಸೂಚನೆಯು ರೈತರು ಮತ್ತು ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಅಧಿಸೂಚನೆಯು ಕೃಷಿ, ಅಭಿವೃದ್ಧಿ ಚಟುವಟಿಕೆಗಳಿಗೆ ಮಾರಕವಾಗಲಿದ್ದು, ಜನವಸತಿ ಮತ್ತು ಕೃಷಿ ಭೂಮಿಯನ್ನು ಹೊರಗಿಡುವಂತೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ನೆಮ್ಮಾರ್ ಅಬೂಬಕರ್, ಕನ್ನಡಪ್ರಭ
ಶೃಂಗೇರಿ: ಪರಿಸರ ಸೂಕ್ಷ್ಮ ವಲಯಗಳನ್ನು ಜು. 27 ರಂದು 7 ನೇ ಕರಡು ಅಧಿಸೂಚನೆಯಲ್ಲಿ ಘೋಷಿಸಿದ ಹಿನ್ನೆಯಲ್ಲಿ ಆಕ್ಷೇಪಣೆ ಸಲ್ಲಿಸಲು ನೀಡಿದ್ದ 60 ದಿನಗಳ ಗಡುವು ಸಪ್ಟೆಂಬರ್ 25 ಕ್ಕೆ ಅಂತ್ಯಗೊಳ್ಳಲಿದೆ.
ಜಿಲ್ಲೆಯ ಒಟ್ಟು 137 ಗ್ರಾಮಗಳಲ್ಲಿ ತಾಲೂಕಿನ 26 ಗ್ರಾಮಗಳ ಕೆರೆ ಪಂಚಾಯಿತಿಯ ಮುಡುಬ, ಭಲೆಕಡಿ, ಮಾತೋಳ್ಳಿ,ಶೀರ್ಲು,ಕೆರೆ,ಸುಂಕದ ಮಕ್ಕಿ,ಮರ್ಕಲ್ ಪಂಚಾಯಿತಿಯ ಋಷ್ಯಶೃಂಗಪುರ, ಯಡದಾಳು, ಯಡದಳ್ಳಿ,ನೆಮ್ಮಾರು ಪಂಚಾಯಿತಿಯ ನೆಮ್ಮಾರು,ಕಾಪಿ ಎಸ್ಟೇಟ್, ಮಲ್ನಾಡ್, ಹರೂರು ಗ್ರಾಮಗಳು, ಮೆಣಸೆ ಪಂಚಾಯಿತಿಯ ಗಿಣಕಲ್, ಮಸಿಗೆ, ಬೇಗಾರು ಪಂಚಾಯಿತಿ ನೀಲಂದೂರು, ಅಸನಬಾಳು, ಮೀಗಾ, ಕೂತಗೋಡು ಪಂಚಾಯಿತಿಯ ಕೂಚಗೋಡು, ಕುಂಬರಗೋಡು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಿದ್ದು ಇವುಗಳಲ್ಲಿ ಬಹುತೇಕ ಮೂಲಭೂತ ಸೌಕರ್ಯ ವಂಚಿತ ಹಳ್ಳಿಗಳು ಕುಗ್ರಾಮಗಳು ಹಾಗೂ ಅರಣ್ಯ ಕಾಯ್ದೆಗಳು,ಕೃಷಿ,ಆರ್ಥಿಕ ಸಮಸ್ಯೆಗಳಿಂದ ನಲುಗಿವೆ.
7 ನೇ ಕರಡು ಅಧಿಸೂಚನೆಯಲ್ಲಿ ಘೋಷಣೆಯಿಂದ ರೈತರಿಗೆ ಸಂಕಷ್ಟ
ಈ ಜನರ ಮುಖ್ಯ ವೃತ್ತಿಯಾದ ಕೃಷಿಯಲ್ಲಿ ಅಡಕೆ,ಕಾಫಿ, ಕಾಳು ಮೆಣಸು, ಭತ್ತ, ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಇವರಿಗೆ ಅಡಕೆಗೆ ಬರುತ್ತಿರುವ ರೋಗಗಳಿಂದ ಆಗುತ್ತಿರುವ ತೊಂದರೆ ಒಂದುಕಡೆ, ಕಾಯ್ದೆಗಳು, ಮಾರಕ ಯೋಜನೆಗಳಿಂದ ಆದ ಸಮಸ್ಯೆಗಳಿಂದ ಮುಕ್ತಿಕಾಣದೇ ತೊಳಲಾಟದಲ್ಲಿದ್ದವರಿಗೆ ಪರಿಸರ ಸೂಕ್ಷ್ಮ ವಲಯ ಈ ಅಧಿಸೂಚನೆ ಭದ್ರತೆಯನ್ನೇ ಕಸಿದಿದೆ. ಈ ಮುನ್ನಾ 6 ನೇ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ್ದರೂ ಮತ್ತೆ 7 ನೇ ಅಧಿಸೂಚನೆ ಹೊರಡಿಸಿದೆ.
ಈಗಾಗಲೇ ನಿವಾಸಿಗಳ ಗಮನಕ್ಕೆ ಬಾರದೇ ಸ್ಯಾಟಲೈಟ್ ಸರ್ವೆ ನಡೆದಿದೆ. ಅರಣ್ಯಗಳ ಜೊತೆ ಅಡಕೆ ತೋಟ, ಕೃಷಿ ಜಮೀನುಗಳು, ಜನವಸತಿ ಪ್ರದೇಶಗಳು ಸಹಿತ ಈ ವ್ಯಾಪ್ತಿಗೆ ಸೇರಲ್ಪಟ್ಟಿರುವುದೆ ಬದುಕು ಕಸಿಯುವ ಆತಂಕಕ್ಕೆ ಪ್ರಮುಖ ಕಾರಣ.
ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ, ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆ, ರೈತರ ತೋಟ, ಗದ್ದೆಗಳಿಗೆ ಗೊಬ್ಬರ, ಔಷಧಿ ಸಿಂಪಡಣೆಗೆ ಕಡಿವಾಣ, ರಸ್ತೆ, ಸೇತುವೆ, ವಿದ್ಯುತ್ ಸಹಿತ ಮೂಲಭೂತ ಅಭಿವೃದ್ಧಿಗಳಿಗೆ ಅಡ್ಡಿಯಾಗಲಿದೆ. ಯಾವುದೇ ಉಷ್ಣ ವಿದ್ಯುತ್ ಯೋಜನೆಗಳಿಗೆ ಅವಕಾಶವಿಲ್ಲ ಎಂಬುದೇ ಜನ ಜೀವನಕ್ಕೆ ಬೀಳುವ ಕೊಡಲಿ ಪೆಟ್ಟು ಎಂಬುದು ಗಮನಾರ್ಹ
ಕೆಂಪು ವರ್ಗದ ಎಲ್ಲಾ ಹೊಸ ಕೈಗಾರಿಕೆಗಳಿಗೆ ನಿಷೇಧ. ಈ ಪ್ರದೇಶಗಳ ಅಭಿವೃದ್ಧಿ ಯೋಜನೆ, ಟೌನ್ ಷಿಪ್, ನಿರ್ಮಾಣ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಬೇಕು. ಮನೆ ನಿರ್ಮಾಣ, ಅಭಿವೃದ್ಧಿಗಳಿಗೂ ಅಡ್ಡಿಯಾಗಲಿದೆ ಎಂಬ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಕೇಳಿಬಂದಿದ್ದು ಪ್ರತಿಭಟನೆಗಳು ನಡೆಯುತ್ತಿವೆ. ಇ-ಮೈಲ್ - ಅಂಚೆಪತ್ರಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಅವಧಿ ಮುಗಿದಿದ್ದು ಬೋರ್ಡ್ ಇಲ್ಲದ ಕಾರಣ ಪಂಚಾಯಿತಿಗಳಲ್ಲಿ ಯಾವುದೇ ವಿಶೇಷ ಗ್ರಾಮ ಸಭೆ ಗಳಾಗಲೀ, ನಿರ್ಣಯಗಳಾಗಲೀ ಕೈಗೊಂಡಿಲ್ಲ. ಎಲ್ಲೆಡೆ ಸಾರ್ವಜನಿಕ ವಿರೋಧಗಳು ವ್ಯಕ್ತವಾಗುತ್ತಿವೆ.
ಕೇರಳ ಮಾದರಿಯಲ್ಲಿ ಅಧಿಸೂಚನೆ ಪುನರ್ ಪರಿಶೀಲಿಸಬೇಕು. ಜನವಸತಿ ಪ್ರದೇಶ, ಕೃಷಿ ಜಮೀನು ಗಳನ್ನು ಅಧಿಸೂಚನೆಯಿಂದ ಹೊರತು ಪಡಿಸಬೇಕು.ಪಶ್ಚಿಮ ಘಟ್ಟಗಳ ಅತ್ಯಮೂಲ್ಯ ಸಸ್ಯ ಸಂಪತ್ತು, ಪ್ರಾಣಿಪಕ್ಷಿ ಸಂಕುಲಗಳು, ನೆಲ,ಜಲ ಸಂರಕ್ಷಿಸಬೇಕು. ಜೊತೆಗೆ ಮನುಷ್ಯ ಬದುಕು ಬೇಕು. ಪರಿಸರ ಸಂರಕ್ಷಣೆ ಹೆಸರಲ್ಲಿ ಜನರ ಬದುಕನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂಬ ಕೂಗು ಪ್ರಬಲವಾಗಿದೆ.


