ಪಾಲಕ್ಕಾಡ್ ರೈಲ್ವೆ ವಲಯವನ್ನು ವಿಭಜಿಸಿ ಮಂಗಳೂರು ಭಾಗವನ್ನು ಮೈಸೂರು ವ್ಯಾಪ್ತಿಗೆ ಸೇರಿಸುವ ನಿರ್ಧಾರದ ಹಿಂದೆ ಬೇರೆಯದ್ದೇ ಕಾರಣವಿದೆ ಎಂದು ಕೇರಳದ ಯುಡಿಎಫ್ ಆರೋಪಿಸಿದೆ. ಈ ನಿರ್ಧಾರದಿಂದ ಪಾಲಕ್ಕಾಡ್ ವಲಯಕ್ಕೆ ಸಾವಿರಾರು ಕೋಟಿ ನಷ್ಟವಾಗಲಿದ್ದು, ಇದನ್ನು ವಿರೋಧಿಸಿ ಯುಡಿಎಫ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಪಾಲಕ್ಕಾಡ್: ಸ್ಥಳೀಯ ರೈಲ್ವೆ ವಲಯವನ್ನು ವಿಭಜಿಸಿ ಮಂಗಳೂರು ಮತ್ತು ಅದರ ಸುತ್ತಮುತ್ತಲ ರೈಲ್ವೆ ನಿಲ್ದಾಣಗಳನ್ನು ಮೈಸೂರು ವ್ಯಾಪ್ತಿಗೆ (Mysore Division) ಸೇರಿಸುವ ನಿರ್ಧಾರದ ಹಿಂದೆ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ರಣತಂತ್ರ ಅಡಗಿದೆ ಎಂದು ಕೇರಳದ ಆಡಳಿತಾರೂಢ ಯುಡಿಎಫ್ ಮೈತ್ರಿಕೂಟ ಆರೋಪಿಸಿದೆ.
ಪಾಲಕ್ಕಾಡ್ ರೈಲ್ವೆ ವಲಯ ವಿಭಜಿಸುವ ಕೇಂದ್ರ ರೈಲ್ವೆ ಮಂಡಳಿ ನಿರ್ಧಾರ ಖಂಡಿಸಿ ಬುಧವಾರ ಇಲ್ಲಿನ ವಲಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಮುಂದೆ ಪ್ರತಿಭಟನೆ ಮತ್ತು ಸತ್ಯಾಗ್ರಹ ನಡೆಸಿದ ಯುಡಿಎಫ್ ನಾಯಕರು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ರೈಲ್ವೆ ವಲಯ ವಿಭಜನೆಯ ತಂತ್ರ ರೂಪಿಸಿದೆ ಎಂಬ ಗಂಭೀರ ಆರೋಪ ಮಾಡಿದರು.
650 ಕೋಟಿ ರು.ಗಳಷ್ಟು ಆದಾಯ
ಮಂಗಳೂರು ಮತ್ತು ಸುತ್ತಮುತ್ತಲಿನ ರೈಲ್ವೆ ನಿಲ್ದಾಣಗಳು ಕೈತಪ್ಪಿದರೆ ಪಾಲಕ್ಕಾಡ್ ರೈಲ್ವೆ ವಲಯಕ್ಕೆ ವಾರ್ಷಿಕ 1000 ಕೋಟಿ ರು.ಗೂ ಹೆಚ್ಚಿನ ನಷ್ಟವಾಗಲಿದೆ. ವಲಯದ ಒಟ್ಟು ಸರಕು ಸಾಗಣೆ ಆದಾಯದಲ್ಲಿ 650 ಕೋಟಿ ರು.ಗಳಷ್ಟು ಕೇವಲ ಮಂಗಳೂರು ವಲಯವೊಂದರಿಂದಲೇ ಬರುತ್ತದೆ. ಜೊತೆಗೆ ವಲಯದ ಒಟ್ಟಾರೆ 1650 ಕೋಟಿ ರು. ಆದಾಯದಲ್ಲಿ ಶೇ.50ಕ್ಕಿಂತ ಹೆಚ್ಚಿನ ಪಾಲು ಮಂಗಳೂರು ವಲಯದಿಂದಲೇ ಬರುತ್ತದೆ. ಹೀಗಿರುವಾಗ ಈ ಪ್ರದೇಶವನ್ನೇ ಹೊರಗೆ ಹಾಕಿದರೆ ನಾಳೆ ಪಾಲಕ್ಕಾಡ್ ವಲಯ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಘೋಷಿಸಿದರೆ ಆಗ ಮಂಗಳೂರು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಕಾರ್ಮಿಕರು ಮತ್ತು ಕಿರಿಯ ಸಿಬ್ಬಂದಿ ವರ್ಗಾವಣೆ ಅನಿವಾರ್ಯತೆಗೆ ಸಿಕ್ಕಿಬೀಳುತ್ತದೆ. ಹೀಗಾಗಿ ಇದು ಅತ್ಯಂತ ಸ್ಪಷ್ಟವಾಗಿ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ರಾಜಕೀಯ ಅಜೆಂಡಾ ಎಂದು ಯುಡಿಎಫ್ ನಾಯಕರು ಕಿಡಿಕಾರಿದರು.
ದೆಹಲಿಯಲ್ಲೂ ಪ್ರತಿಭಟನೆ
ಅಲ್ಲದೆ ವಿಭಜನೆ ಕೈಬಿಡದೇ ಹೋದರೆ ನಾವು ಹೋರಾಟ ತೀವ್ರಗೊಳಿಸಲಿದ್ದೇವೆ. ದೆಹಲಿಗೂ ತೆರಳಿ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ. ದೆಹಲಿಯಲ್ಲೂ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸದೇ ಕೈಗೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಸದ ವಿ.ಕೆ.ಶ್ರೀಕಂಠನ್, ಶಫಿ ಪರಾಂಬಿ, ಎಂ.ಕೆ.ರಾಘವನ್, ರಾಜಮೋಹನ್ ಉನ್ನ್ನಿಥನ್, ಆ್ಯಂಟೊ ಆ್ಯಂಟೋನಿ, ಇ.ಟಿ.ಮೊಹ್ಮಮದ್ ಬಶೀರ್, ಡೀನ್ ಕುರಿಯಾಕೋಸ್, ಕೇರಳದ ಸಚಿವರಾದ ಕೆ.ಎ.ತುಳಸಿ, ಶಾಸಕ ರಮೇಶ್ ಮೊದಲಾದವರು ಭಾಗವಹಿಸಿದ್ದರು.


