ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ ಬೆನ್ನಲ್ಲೇ, ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ತಮ್ಮ ಬೆಂಗಳೂರಿನ ಮನೆ ಖಾಲಿ ಮಾಡಿ ನಾಪತ್ತೆ. ಇ.ಡಿ. ದಾಳಿಯ ನಂತರ ಐಎಎಸ್‌ ಅಧಿಕಾರಿ ಜ್ಞಾನೇಶ್‌ ಕುಮಾರ್‌ ಕೂಡ ನಾಪತ್ತೆಯಾಗಿದ್ದಾರೆ.

ಬೆಂಗಳೂರು (ಆ..26): ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ವು ತನಿಖಾ ಅಖಾಡಕ್ಕೆ ಧುಮುಕಿದ ಬೆನ್ನಲ್ಲೇ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಬೆಂಗಳೂರಿನ ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

ಈಗಾಗಲೇ ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್‌ ಅಧಿಕಾರಿ ಜ್ಞಾನೇಶ್‌ ಕುಮಾರ್‌ ಗಂಗ್ವಾರ್‌ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ತುರ್ತು ರಜೆ ಪಡೆದು ನಾಪತ್ತೆಯಾಗಿದ್ದಾರೆ. ಇ.ಡಿ. ದಾಳಿ ಬಳಿಕ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಸಹ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

ಇ.ಡಿ. ಅಧಿಕಾರಿಗಳು ನಾಗರಬಾವಿಯ ಬ್ಯಾಂಕ್‌ ಕಾಲೋನಿಯಲ್ಲಿರುವ ಶಾಂತಾ ಹೊಸಮನಿ ಅವರ ಮನೆ ಪತ್ತೆ ಹಚ್ಚಿ ದಾಳಿ ನಡೆಸಿದ್ದರು. ಆದರೆ, ಮನೆಯ ಎಲ್ಲಾ ವಸ್ತುಗಳನ್ನು ಖಾಲಿ ಮಾಡಿಕೊಂಡು ಆಕೆ ಪರಾರಿಯಾಗಿದ್ದಾರೆ. ಶೋಧ ಕಾರ್ಯದ ವೇಳೆ ಆಕೆಯ ಮನೆಯಲ್ಲಿ ಯಾವುದೇ ಮಹತ್ವದ ದಾಖಲೆಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿರುವುದರಿಂದ ಶಾಂತಾ ಹೊಸಮನಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಇದೀಗ ಇ.ಡಿ. ಅಧಿಕಾರಿಗಳು ಶಾಂತಾ ಹೊಸಮನಿ ಅವರ ಹೊಸ ಮನೆ ಪತ್ತೆಗಾಗಿ ತಲಾಶ್‌ ನಡೆಸುತ್ತಿದೆ. ಶಾಂತಾ ಹೊಸಮನಿ ನಾಪತ್ತೆ ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ವಿಚಾರಣೆಗೆ ಗೈರು:

ಐಎಎಸ್‌ ಅಧಿಕಾರಿ ಜ್ಞಾನೇಶ್‌ ಕುಮಾರ್‌ ಅವರ ಬೆಂಗಳೂರಿನ ನಿವಾಸದ ಮೇಲೆ ಭಾನುವಾರ ಇ.ಡಿ. ಅಧಿಕಾರಿಗಳು ದಾಳಿ ಮಾಡಿದ್ದರು. ಶೋಧ ಕಾರ್ಯದ ವೇಳೆ ಮನೆಯಲ್ಲಿ ಯಾವುದೇ ಮಹತ್ವದ ದಾಖಲೆಗಳು ಪತ್ತೆಯಾಗಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಗೋಡೆ ಮೇಲೆ ನೋಟಿಸ್‌ ಅಂಟಿಸಿದ್ದರು. ಆ.20ರಿಂದ ಯಾರ ಸಂಪರ್ಕಕ್ಕೂ ಸಿಗದ ಜ್ಞಾನೇಶ್‌ ಕುಮಾರ್‌ ಇ.ಡಿ. ವಿಚಾರಣೆಗೆ ಗೈರಾಗಿದ್ದರು.---