ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, 800 ಟನ್ ಈರುಳ್ಳಿಯನ್ನು ಹೊತ್ತ ಮೊದಲ 'ಕಾಂದಾ ಎಕ್ಸ್ಪ್ರೆಸ್' ನಾಸಿಕ್ನಿಂದ ದೆಹಲಿಗೆ ತಲುಪಲಿದ್ದು, ಕೆ.ಜಿ.ಗೆ ₹35ರ ದರದಲ್ಲಿ ಮಾರಾಟ ಮಾಡುವ ಗುರಿ ಹೊಂದಿದೆ.
ನವದೆಹಲಿ: ಸಕ್ಕರೆಯ ಜತೆ ಪೈಪೋಟಿಗೆ ಬಿದ್ದಂತೆ ಗ್ರಾಹಕರ ಜೇಬಿಗೆ ಈರುಳ್ಳಿ ಬಿಸಿ ಮುಟ್ಟಿಸಿದ ಬೆನ್ನಲ್ಲೇ, ಅದರ ಬೆಲೆಯನ್ನು ನಿಯಂತ್ರಿಸುವ ಉದ್ದೇಶದಿಂದ 800 ಟನ್ ಈರುಳ್ಳಿ ಹೊತ್ತ ಮೊದಲ ‘ಕಾಂದಾ ಎಕ್ಸ್ಪ್ರೆಸ್’ ಬುಧವಾರ ದೆಹಲಿ ತಲುಪಲಿದೆ. ಪ್ರತಿ ಕೆ.ಜಿ.ಗೆ 35 ರು. ದರದಲ್ಲಿ ಗ್ರಾಹಕರಿಗೆ ಈರುಳ್ಳಿ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಈ ಬಗ್ಗೆ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಮಾಹಿತಿ ನೀಡಿದ್ದು, ‘ಈರುಳ್ಳಿಯನ್ನು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ನಿಯಮಿತ, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ನಿಯಮಿತ ಮತ್ತು ಕೇಂದ್ರೀಯ ಭಂಡಾರ್ ಮಳಿಗೆಗಳ ಮೂಲಕ ಚಿಲ್ಲರೆ ದರದಲ್ಲಿ ಮಾರಾಟ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. ಬೆಲೆ ನಿಯಂತ್ರಣಕ್ಕೆಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ಕೇಂದ್ರ ಸರ್ಕಾರ ದಾಸ್ತಾನು ಮಾಡಿಟ್ಟಿದ್ದ ಈರುಳ್ಳಿಯನ್ನು ಕಾಂದಾ ಎಕ್ಸ್ಪ್ರೆಸ್ಗಳ ಮೂಲಕ ಚೆನ್ನೈ, ಎರ್ನಾಕುಲಂ, ಮದುರೈ ಮತ್ತು ಗುವಾಹಟಿಗೂ ತಲುಪಿಸಲಾಗುವುದು.
ಪ್ರತಿ ವರ್ಷ ಶೇ.59ರಷ್ಟು ಏರಿಕೆ
2026ಕ್ಕಾಗಿ ಸುಮಾರು 1.21 ಲಕ್ಷ ಟನ್ಗಳನ್ನು ಈರುಳ್ಳಿ ದಾಸ್ತಾನು ಮಾಡಲಾಗಿದೆ ಹಾಗೂ ದೇಶೀಯ ಬೇಡಿಕೆಯನ್ನು ಪೂರೈಸಲು ಶಕ್ತವಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈರುಳ್ಳಿಯ ಚಿಲ್ಲರೆ ಬೆಲೆಯು ಪ್ರತಿ ವರ್ಷ ಶೇ.59ರಷ್ಟು ಏರಿಕೆ ಕಾಣುತ್ತಿದೆ. 2025ರಲ್ಲಿ ಕೆ.ಜಿಗೆ 27.37 ರು. ಇದ್ದ ಬೆಲೆ ಈ ವರ್ಷದ ಆ.24ರಂದು 43.53 ರು. ಆಗಿದೆ. ಸಗಟು ದರವು 21.23 ರು.ನಿಂದ 35.58 ರು. ಆಗುವ ಮೂಲಕ ಶೇ.68ರಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ ವರ್ಷದ ಹಿಂದೆ 33 ರು. ಇದ್ದ ಈರುಳ್ಳಿ ಬೆಲೆ ಈಗ 60 ರು. ಆಗಿದೆ. ದೆಹಲಿಯಲ್ಲಿ 35 ರು. ಇದ್ದದ್ದು 55 ರು. ಹಾಗೂ ಕೋಲ್ಕತಾದಲ್ಲಿ 53 ರು. ಆಗಿದೆ.
ಏನಿದು ಕಾಂದಾ ಎಕ್ಸ್ಪ್ರೆಸ್?
ದೇಶದ ಕೆಲ ನಗರಗಳಲ್ಲಿ ಈರುಳ್ಳಿ ಬೆಲೆ ವಿಪರೀತ ಹೆಚ್ಚಾದಾಗ ಆ ಪ್ರದೇಶಗಳಿಗೆ ಈರುಳ್ಳಿ ಪೂರೈಸುವ ಉದ್ದೇಶದಿಂದ 2024ರಲ್ಲಿ ಕಾಂದಾ ಎಕ್ಸ್ಪ್ರೆಸ್ ಎಂಬ ವಿಶೇಷ ರೈಲನ್ನು ಪರಿಚಯಿಸಲಾಗಿತ್ತು. 2024-25ರಲ್ಲಿ ಈ ರೈಲು 12 ಸಾವಿರ ಟನ್ ಈರುಳ್ಳಿಯನ್ನು 5 ನಗರಗಳಿಗೆ ತಲುಪಿಸಿತ್ತು.
ಇದನ್ನೂ ಓದಿ: FSSAI new guidelines: ಫುಡ್ ಬ್ಯುಸಿನೆಸ್ಗೆ ಲೈಸೆನ್ಸ್ ಕಡ್ಡಾಯ, 15 ದಿನದಲ್ಲಿ ಎಲ್ಲವೂ ಸರಿ ಮಾಡ್ಕೊಳ್ಳಿ!


