ದೇಶದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹60 ದಾಟಿ ಏರಿಕೆಯಾಗುತ್ತಿದ್ದು, ಗ್ರಾಹಕರ ಬಜೆಟ್ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ಇದೇ ರೀತಿ ಬೆಲೆ ಏರಿಕೆ ಖಂಡಿಸಿದ್ದ ವಾಜಪೇಯಿಯವರ ಹಳೆಯ ಭಾಷಣ ವೈರಲ್ ಆಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

ದೇಶದಲ್ಲಿ ಸಕ್ಕರೆ ಬೆಲೆ ತೀವ್ರವಾಗಿ ಏರುತ್ತಿದ್ದು, ಗ್ರಾಹಕರ ಅಡುಗೆ ಬಜೆಟ್ ತಲೆಕೆಳಗಾಗಿದೆ. ಅನೇಕ ರಾಜ್ಯಗಳಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ₹60 ದಾಟಿದೆ. ಈ ಬೆಲೆ ಏರಿಕೆಯ ನಡುವೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಮಾಡಿದ್ದ ಹಳೆಯ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ಕಾಲದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹20 ತಲುಪಿದಾಗ, ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿ ಅವರು ಅಂದಿನ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದರು.

ಸಂಸತ್ತಿನಲ್ಲಿ ವಾಜಪೇಯಿ ಎತ್ತಿದ್ದ ಪ್ರಶ್ನೆಗಳು!

ಸಕ್ಕರೆ ಬೆಲೆ ಏರಿಕೆಯ ವಿಚಾರವಾಗಿ ಸರ್ಕಾರವನ್ನು ತೀವ್ರವಾಗಿ ತಳೆದಿದ್ದ ವಾಜಪೇಯಿ, ಕಬ್ಬಿನ ಉತ್ಪಾದನೆ ಕಡಿಮೆಯಾಗುವ ಮುನ್ಸೂಚನೆ ಇದ್ದರೂ ಸರ್ಕಾರ ಏಕೆ ಮುನ್ನೆಚ್ಚರಿಕೆ ವಹಿಸಲಿಲ್ಲ ಎಂದು ಪ್ರಶ್ನಿಸಿದ್ದರು.

ಪೂರ್ವ ಸಿದ್ಧತೆಯ ಕೊರತೆ; ದೇಶದಲ್ಲಿ ಸಕ್ಕರೆ ಅಭಾವ ಉಂಟಾಗುವ ಸಾಧ್ಯತೆ ಇದ್ದಾಗ, ವಿದೇಶದಿಂದ ಆಮದು ಮಾಡಿಕೊಳ್ಳಲು ಸರ್ಕಾರ ಮುಂಚಿತವಾಗಿ ಕ್ರಮ ಕೈಗೊಳ್ಳಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಸಚಿವಾಲಯಗಳ ನಡುವಿನ ಸಮನ್ವಯದ ಕೊರತೆ; ಸಕ್ಕರೆ ಆಮದಿನ ನಿರ್ಧಾರ ಯಾರು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದೆ, ಒಂದು ಸಚಿವಾಲಯ ಇನ್ನೊಂದರ ಮೇಲೆ ಗೂಬೆ ಕೂರಿಸುತ್ತಿತ್ತು.

ಪ್ರಧಾನಿ ಕಚೇರಿಯ ಮೌನ; ಸಚಿವರೊಬ್ಬರು ತಮ್ಮ ಕಾರ್ಯದರ್ಶಿಯನ್ನೇ ಸಾರ್ವಜನಿಕವಾಗಿ ನಿಂದಿಸುತ್ತಿರುವಾಗ, "ಪ್ರಧಾನಮಂತ್ರಿಗಳ ಸಚಿವಾಲಯ (PMO) ಏನು ಮಾಡುತ್ತಿದೆ? ಎಂದು ವಾಜಪೇಯಿ ನೇರವಾಗಿ ಚಾಟಿ ಬೀಸಿದ್ದರು.

ಲಾಭಕೋರತನ ಮತ್ತು ತನಿಖೆ; ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಸಿ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಕೋಟಿಗಟ್ಟಲೆ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಕ್ಕರೆ ಆಮದು ಪ್ರಕ್ರಿಯೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.

ಈ ಹಳೆಯ ವೀಡಿಯೊ ಈಗ ವೈರಲ್ ಆಗುತ್ತಿರುವುದೇಕೆ?

ಪ್ರಸ್ತುತ ದೇಶದಲ್ಲಿ ಸಕ್ಕರೆ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದೇ ಈ ವೀಡಿಯೊ ವೈರಲ್ ಆಗಲು ಕಾರಣ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಜುಲೈನಲ್ಲಿ ರಾಷ್ಟ್ರೀಯ ಸರಾಸರಿ ಬೆಲೆ ಕೆಜಿಗೆ ₹48.18 ರಷ್ಟಿತ್ತು, ಅದು ಆಗಸ್ಟ್ ವೇಳೆಗೆ ₹58.23 ಕ್ಕೆ ಏರಿಕೆಯಾಯಿತು.

ರಾಜ್ಯಗಳಲ್ಲಿ ಬೆಲೆ ಏರಿಕೆಯ ಬಿಸಿ; ಒಡಿಶಾದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹64.72 ಕ್ಕೆ ತಲುಪಿದ್ದು, ಒಂದೇ ವರ್ಷದಲ್ಲಿ ₹17.80 ರಷ್ಟು ಏರಿಕೆಯಾಗಿದೆ. ದೆಹಲಿ, ಪಂಜಾಬ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಗೋವಾ, ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸಕ್ಕರೆ ಬೆಲೆ ಕೆಜಿಗೆ ₹60 ರ ಗಡಿ ದಾಟಿದೆ.

ಸರಾಸರಿಗಿಂತ ಹೆಚ್ಚಿನ ಏರಿಕೆ; ಮಧ್ಯಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಲ್ಲಿ ₹15.70 ಹಾಗೂ ಪಂಜಾಬ್‌ನಲ್ಲಿ ₹14.67 ರಷ್ಟು ಬೆಲೆ ಹೆಚ್ಚಾಗಿದೆ.

ಬೆಲೆ ಏರಿಕೆಗೆ ಸರ್ಕಾರ ನೀಡುತ್ತಿರುವ ಕಾರಣಗಳು!

ಪ್ರಸ್ತುತ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಹಲವು ಕಾರಣಗಳನ್ನು ನೀಡಿದೆ:

1. ಉತ್ಪಾದನೆಯಲ್ಲಿ ಕುಸಿತ; ಈ ಋತುವಿನಲ್ಲಿ 343 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ 306 ಲಕ್ಷ ಮೆಟ್ರಿಕ್ ಟನ್‌ಗೆ ಕುಸಿದಿದೆ.

2. ಬೇಡಿಕೆ ಹೆಚ್ಚಳ; ಹಬ್ಬದ ಋತು ಆರಂಭವಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸಕ್ಕರೆಯ ಬೇಡಿಕೆ ದಿಢೀರ್ ಏರಿಕೆಯಾಗಿದೆ.

3. ಎಥೆನಾಲ್ ಉತ್ಪಾದನೆ; ಹೆಚ್ಚುವರಿ ಸಕ್ಕರೆಯನ್ನು ಎಥೆನಾಲ್ ತಯಾರಿಕೆಗೆ ಬಳಸುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದು ಸಹ ಕಾರಣವಾಗಿದೆ.

ಬೆಲೆ ನಿಯಂತ್ರಣಕ್ಕೆ ಸರ್ಕಾರದ ಹೊಸ ಕ್ರಮಗಳು!

ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು ಮತ್ತು ಬೆಲೆ ಸ್ಥಿರಗೊಳಿಸಲು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ:

ದಾಸ್ತಾನು ಮಿತಿ; ಸಕ್ಕರೆ ವಿತರಕರು ಗರಿಷ್ಠ 400 ಟನ್ ಸಕ್ಕರೆಯನ್ನು ಮಾತ್ರ ದಾಸ್ತಾನು ಇಟ್ಟುಕೊಳ್ಳಲು ಆಗಸ್ಟ್‌ನಿಂದ ನವೆಂಬರ್‌ವರೆಗೆ ಮಿತಿ ಹೇರಲಾಗಿದೆ.

ಸಗಟು ಗ್ರಾಹಕರಿಗೆ ಕಟ್ಟುಪಾಡು; ಸೆಪ್ಟೆಂಬರ್ 1 ರಿಂದ ಸಗಟು ಗ್ರಾಹಕರು 15 ದಿನಗಳಿಗೆ ಬೇಕಾಗುವಷ್ಟು ಸಕ್ಕರೆಯನ್ನು ಮಾತ್ರ ಸಂಗ್ರಹಿಸಿಡಬಹುದು.

ಸುಂಕ ರಹಿತ ಆಮದು; ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ (Duty-free) ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಅಂದು ವಾಜಪೇಯಿ ಅವರು ಎತ್ತಿದ್ದ ಸಾರ್ವಜನಿಕ ಕಾಳಜಿಯ ಪ್ರಶ್ನೆಗಳು, ಇಂದಿನ ಸಕ್ಕರೆ ಅಭಾವ ಮತ್ತು ಬೆಲೆ ಏರಿಕೆಯ ಪರಿಸ್ಥಿತಿಗೂ ಹತ್ತಿರವಾಗಿರುವುದರಿಂದ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.