ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿ: ಲೋಕಸಭೆ ಕಲಾಪದಲ್ಲಿ ಕನ್ನಿಮೋಳಿ ಆಗ್ರಹ
ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದೆ ಕನ್ನಿಮೋಳಿ ಅವರು ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿ ಎಂದು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.
ದೆಹಲಿ: ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದೆ ಕನ್ನಿಮೋಳಿ ಅವರು ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿ ಎಂದು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ. ದ್ರಾವಿಡ ಮುನ್ನೇತ್ರ ಕಾಳಗಂ ಪಕ್ಷದ ನಾಯಕಿ ಸಂಸದೆ ಕನ್ನಿಮೋಳಿ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ಮಾತನಾಡುತ್ತಾ, ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಬೇಕೆಂದು ಪ್ರಧಾನಿಯನ್ನು ಒತ್ತಾಯಿಸಿದರು. ಅಲ್ಲದೇ ತಮಿಳುನಾಡು ಇತಿಹಾಸ ಗೊತ್ತಿಲ್ಲದ ಪ್ರಧಾನಿ ಪಾರ್ಲಿಮೆಂಟ್ನಲ್ಲಿ ಸೆಂಗೋಲ್ ರಾಜದಂಡವನ್ನು ಪ್ರತಿಷ್ಠಾಪಿಸಿದ್ದನ್ನು ಪ್ರಶ್ನಿಸಿದರು.
ನೀವು ಹೊಸ ಸಂಸತಿಗೆ ಭಾರೀ ಆಡಂಬರ ಹಾಗೂ ಪ್ರದರ್ಶನದೊಂದಿಗೆ ರಾಜದಂಡ ಸೆಂಗೋಲ್ ಅನ್ನು ತಂದಿದ್ದೀರಿ, ಅದು ಚೋಳ ಸಂಪ್ರದಾಯಕ್ಕೆ ಸೇರಿದೆ ಎಂದು ಹೇಳಿದ್ದೀರಿ. ಆದರೆ ನಿಮಗೆ ತಮಿಳುನಾಡಿನ ಇತಿಹಾಸವೇ ಸರಿಯಾಗಿ ಗೊತ್ತಿಲ್ಲ. ಪಾಂಡಿಯನ್ ಸೆಂಗೋಲ್ ಬಗ್ಗೆ ನೀವು ಕೇಳಿದ್ದೀರಾ? ರಾಜನು ಜನರನ್ನು ಬಾಳಿಸಲು ವಿಫಲವಾದಾಗ ಪಾಂಡಿಯನ್ ಸೆಂಗೋಲ್ ಸುಟ್ಟು ಒಡೆದುಹೋಯಿತು. ದಯವಿಟ್ಟು ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿ ಮತ್ತು ಸಿಲಪ್ಪಟಿಕಾರಂ (ತಮಿಳು ಮಹಾಕಾವ್ಯ) ಅನ್ನು ಓದಿ, ಅದು ನಿಮಗೆಲ್ಲರಿಗೂ ಕಲಿಸಲು ಬಹಳಷ್ಟು ಪಾಠಗಳನ್ನು ಹೊಂದಿದೆ ಎಂದು ಕನ್ನಿಮೋಳಿ ಸಂಸತ್ನಲ್ಲಿ ಹೇಳಿದ್ದಾರೆ.
ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಮತ್ತೆ ಸಿಡಿದೆದ್ದ ತಮಿಳ್ನಾಡು ಸಿಎಂ
ಇನ್ನು ತಮ್ಮ ವಿರೋಧ ಪಕ್ಷದ ಒಕ್ಕೂಟ ಇಂಡಿಯಾ ಮಣಿಪುರ ಭೇಟಿಗೆ ಸಂಬಂಧಿಸಿದಂತೆ ಮಾತನಾಡಿದ ಕನ್ನಿಮೋಳಿ, ಮಣಿಪುರದಲ್ಲಿ 100ರಿಂದ ಮೇಲೆ ಪುನರ್ವಸತಿ ಕೇಂದ್ರಗಳಿದ್ದವು. ಆದರೆ ಅಲ್ಲಿ ಎಲ್ಲೂ ಆಹಾರ ಪೂರೈಕೆಯೇ ಇರಲಿಲ್ಲ, ಇಂಡಿಯಾ ನಿಮ್ಮೊಂದಿಗೆ ಇದೆ ಎಂದು ನಾವು ಮಣಿಪುರ ಜನರಿಗೆ ಹೇಳಲು ಬಯಸುತ್ತೇವೆ ಹಾಗೂ ಸರ್ಕಾರ (ಮಣಿಪುರ ಹಿಂಸಾಚಾರ ಸಂತ್ರಸ್ತರು) ಅವರೊಂದಿಗೆ ನಿಂತಿದೆಯೇ ಎಂದು ನಾವು ನೋಡಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕನ್ನಿಮೋಳಿ ಮಾತ್ರವಲ್ಲ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (M.K. stalin) ಕೂಡ ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕಳೆದ ಜೂನ್ನಲ್ಲಿ ಆಡಳಿತದಲ್ಲಿ ಹಿಂದಿ ಬಳಕೆಗೆ ಉತ್ತೇಜನ ಕುರಿತು ಕೇಂದ್ರ ಸರ್ಕಾರಿ ಸ್ವಾಮ್ಯದ ‘ದ ನ್ಯೂ ಇಂಡಿಯಾ ಅಶ್ಯೂರೆನ್ಸ್’ ಹೊರಡಿಸಿರುವ ಸುತ್ತೋಲೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ತಮಿಳುನಾಡು (tamilnadu) ಮತ್ತು ಡಿಎಂಕೆಯು (DMK) ಹಿಂದಿ ಹೇರಿಕೆಯನ್ನು (Hindi Imposition) ತಡೆಗಟ್ಟಲು ಬೇಕಾದ ಎಲ್ಲ ಕ್ರಮವನ್ನೂ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದರು.
ಸಿಆರ್ಪಿಎಫ್ ನೇಮಕಾತಿ ಪರೀಕ್ಷೆಗೆ ಕನ್ನಡ ಇಲ್ಲ: ಸಿದ್ದರಾಮಯ್ಯ, ಎಚ್ಡಿಕೆ ಆಕ್ರೋಶ
ವಿಮಾ ಸಂಸ್ಥೆಯ ಸುತ್ತೋಲೆಯನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಸ್ಟಾಲಿನ್, ಕೇಂದ್ರ ಸರ್ಕಾರವು (central Govt) ತನ್ನ ಅಮೂಲ್ಯವಾದ ಸಂಪನ್ಮೂಲಗಳನ್ನು ಸಾಮಾಜಿಕ ಕಲ್ಯಾಣಕ್ಕಾಗಿ ಬಳಸುವುದನ್ನು ಬಿಟ್ಟು ನಮ್ಮ ಗಂಟಲಿಗೆ ಹಿಂದಿ ತುರುಕಲು ಖರ್ಚು ಮಾಡುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರದ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾನೆ. ಆದರೆ ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು ಮಾತ್ರ ತಮಗೆ ಸಾಧ್ಯವಿರುವ ಎಲ್ಲಾ ಮಾರ್ಗಗಳಲ್ಲೂ ಉಳಿದ ಭಾರತೀಯ ಭಾಷೆಗಳಿಗಿಂತ ಹಿಂದಿಗೆ ಅನವಶ್ಯಕ ಮತ್ತು ಅನ್ಯಾಯವಾಗಿ ಅನುಕೂಲ ನೀಡುತ್ತಿವೆ ಎಂದು ಕಿಡಿಕಾರಿದ್ದರು.