ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಗಮನಹರಿಸಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
'ದಿಮಾಗಿ ನಕ್ಸಲ್' ಹೇಳಿಕೆಗೆ ಖರ್ಗೆ ಕಿಡಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC Chief Mallikarjun kharge)ಯವರು ಶನಿವಾರ ಪ್ರಧಾನಿ ನರೇಂದ್ರ ಮೋದಿ(Prime minister Modi)ಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಹೂಡಿಕೆಯಂತಹ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ. 'ಪ್ರಧಾನಿ ಮೋದಿ 'ದಿಮಾಗಿ ನಕ್ಸಲ್' ಅನ್ನೋ ಹೊಸ ಪದ ಬಳಸುತ್ತಿದ್ದಾರೆ. ಹಾಗಾದರೆ ನಾವೆಲ್ಲರೂ 'ದಿಮಾಗಿ ನಕ್ಸಲರೇ' ಆಯಿತು. ದೇಶಕ್ಕಾಗಿ ನೀವೇನು ಮಾಡುತ್ತಿದ್ದೀರಿ ಅಂತ ಮಾತಾಡಿ. ಉದ್ಯೋಗ, ಹಣದುಬ್ಬರ, ಹೂಡಿಕೆ, ದೇಶದ ಜನರಿಗೆ ಕೆಲಸ ಕೊಡುವ ಬಗ್ಗೆ ಮಾತಾಡಿ. ಇದೆಲ್ಲವನ್ನೂ ಬಿಟ್ಟು, ವಂದೇ ಮಾತರಂ ಹಾಡಲಿಲ್ಲ ಅಂತ ಮಾತಾಡ್ತೀರಿ' ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಬಿಜೆಪಿಯ ದೇಶಭಕ್ತಿಯನ್ನೇ ಪ್ರಶ್ನಿಸಿದ ಖರ್ಗೆ
ಈ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ತ್ಯಾಗ ಮಾಡಿದೆ. ನಾವೇನು ದೇಶದ್ರೋಹಿಗಳಾ? ನಾವು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ. ನೀವಾದರೆ ಬ್ರಿಟಿಷರಿಗೆ ಶರಣಾಗಿ, ಕ್ಷಮಾಪಣೆ ಪತ್ರ ಬರೆದುಕೊಟ್ಟವರು. ಇವತ್ತು ನೀವು ದೇಶಭಕ್ತರು ಅಂತ ಹೇಳಿಕೊಳ್ತಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ? ಇವತ್ತು ಅವರು, 'ನಾವು ದೇಶಭಕ್ತರು, ವಂದೇ ಮಾತರಂ ಹಾಡದವರು ದೇಶದ್ರೋಹಿಗಳು' ಅಂತ ನಮಗೆ ಹೇಳ್ತಾರೆ. ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಹಾಡಲಿಲ್ಲ? ಅವರಿಗೆ ಬೇಕಿದ್ದರೆ ಪೂರ್ತಿ ಹಾಡನ್ನು ಹಾಡಬೇಕಿತ್ತು. ಸತ್ಯ ಏನೆಂದರೆ, ನಿಮಗೆ ಅದನ್ನು ಓದಕ್ಕೂ ಬರುವುದಿಲ್ಲ. ನಾಳೆ ಸರ್ಕಾರಗಳು ಬದಲಾಗುತ್ತವೆ. ನಾಳೆ ಬೇರೆ ಸರ್ಕಾರ ಬಂದು, 'ಇದೆಲ್ಲಾ ಬೇಡ' ಅಂದರೆ, ನೀವು ಮತ್ತೆ ಬದಲಾಯಿಸುತ್ತೀರಾ?' ಎಂದು ಖರ್ಗೆ ಪ್ರಶ್ನಿಸಿದ್ದಾರೆ.
'ದಿಮಾಗಿ ನಕ್ಸಲ್' ಹೇಳಿಕೆಯ ಹಿನ್ನೆಲೆ
ವಂದೇ ಮಾತರಂ ವಿಚಾರವಾಗಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿರುವ ಹೊತ್ತಲ್ಲೇ ಈ ಹೇಳಿಕೆಗಳು ಬಂದಿವೆ. ಕೆಂಪುಕೋಟೆಯ ಮೇಲಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು, 'ಕಾಡುಗಳಲ್ಲಿ ಶಸ್ತ್ರ ಹಿಡಿದ ನಕ್ಸಲರನ್ನು ಮಟ್ಟ ಹಾಕಲಾಗಿದೆ. ಆದರೆ ದೇಶದ ಬೇರೆ ಬೇರೆ ಭಾಗಗಳಲ್ಲಿ 'ದಿಮಾಗಿ ನಕ್ಸಲರು' ಇದ್ದಾರೆ. ಅವರನ್ನು 'ಗುರುತಿಸಿ, ಪ್ರತ್ಯೇಕಿಸಬೇಕು' ಎಂದು ಹೇಳಿದ್ದರು.


