- Home
- Entertainment
- TV Talk
- ತೆಲುಗು ಬಿಗ್ಬಾಸ್ 10ಕ್ಕೆ ಕನ್ನಡದ ಮೂವರು ಸ್ಪರ್ಧಿಗಳು ಗ್ರ್ಯಾಂಡ್ ಎಂಟ್ರಿ, ಎಲ್ಲಿಯವರು? ಇಲ್ಲಿದೆ ನೋಡಿ
ತೆಲುಗು ಬಿಗ್ಬಾಸ್ 10ಕ್ಕೆ ಕನ್ನಡದ ಮೂವರು ಸ್ಪರ್ಧಿಗಳು ಗ್ರ್ಯಾಂಡ್ ಎಂಟ್ರಿ, ಎಲ್ಲಿಯವರು? ಇಲ್ಲಿದೆ ನೋಡಿ
ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್ಬಾಸ್ ಸೀಸನ್ 10 'ದಶಾವತಾರಂ' ಥೀಮ್ನೊಂದಿಗೆ ಆರಂಭವಾಗಿದೆ. ಈ ಬಾರಿ ಕನ್ನಡದ ಮೂವರು ಪ್ರತಿಭೆಗಳಾದ ನಟಿ ಚೈತ್ರಾ ರೈ, ನಟ ಮುಖೇಶ್ ಗೌಡ ಮತ್ತು ಆದಿತ್ ಈಶ್ವರನ್ (ತ್ರಿಗುಣ್) ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ್ದಾರೆ.

'ದಶಾವತಾರಂ' ಎಂಬ ವಿಶಿಷ್ಟ ಥೀಮ್
ಒಳ್ಳೆಯ ಕಥೆ ಸಿಕ್ಕರೆ ಪ್ರೇಕ್ಷಕರ ಜೊತೆ ಸಂಪರ್ಕ ಸಾಧಿಸುವುದು ಕಷ್ಟವೇನಲ್ಲ. ಅದೇ ರೀತಿ ರಿಯಾಲಿಟಿ ಶೋ ವಿಷಯಕ್ಕೆ ಬಂದರೆ, ಸ್ಪರ್ಧಿಗಳು ಕೊಡುವ 'ಕಂಟೆಂಟ್' ಆಧರಿಸಿ ಆ ಸೀಸನ್ ಹಿಟ್ ಆಗುತ್ತದೆ. ಇದೀಗ ಕಿರುತೆರೆ ವೀಕ್ಷಕರ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದ್ದು, ಬಿಗ್ಬಾಸ್ ಕನ್ನಡ ಸೀಸನ್ 13 ಆರಂಭವಾದ ಸೆಪ್ಟೆಂಬರ್ 6 ರಂದೇ ಬಿಗ್ ಬಾಸ್ ತೆಲುಗು ಸೀಸನ್ 10 ಅದ್ದೂರಿಯಾಗಿ ಆರಂಭವಾಗಿದೆ. ಟಾಲಿವುಡ್ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ರಿಯಾಲಿಟಿ ಶೋ ನ 10ನೇ ಸೀಸನ್ 'ದಶಾವತಾರಂ' ಎಂಬ ವಿಶಿಷ್ಟ ಥೀಮ್ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ.
4 ಭಾಷೆಗಳಲ್ಲಿ ಏಕಕಾಲಕ್ಕೆ
ಈ ಬಾರಿ ತೆಲುಗು , ತಮಿಳು, ಕನ್ನಡ ಹಾಗೂ ಮಲಯಾಳಂ ಏಕ ಕಾಲಕ್ಕೆ ಒಂದೇ ದಿನ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡಿದೆ. ತೆಲುಗು ಬಿಗ್ ಬಾಸ್ ಮನೆಗೆ 16 ಮಂದಿ ಪ್ರವೇಶ ಪಡೆದಿದ್ದು ಕನ್ನಡದಂತೆಯೇ ಅಗ್ನಿ ಪರೀಕ್ಷೆಯಲ್ಲಿ ಸೆಲೆಕ್ಟ್ ಆದ ಕಾಮನ್ ಮ್ಯಾನ್ ಗಳು ಕೂಡ ಇದ್ದಾರೆ. ಇದರಲ್ಲಿ ಕನ್ನಡದ ನಟರು ಕೂಡ ಪ್ರವೇಶ ಪಡೆದಿದ್ದು ಅವರ ಸಂಪೂರ್ಣ ಮಾಹಿತಿ ಇಲ್ಲಿದೆ. ಕನ್ನಡದಿಂದ ತೆಲುಗು ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಭೆಗಳು ಹಾಗೂ ಕನ್ನಡದ ಸಿನೆಮಾಗಳಲ್ಲಿ ನಟಿಸಿರುವ ತೆಲುಗು ಪ್ರತಿಭೆ ಈ ಬಾರಿ ತೆಲುಗು ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಸ್ಟಾರ್ಗಳ ಮಾಹಿತಿ ಇಲ್ಲಿದೆ.
ಕರಾವಳಿ ಪ್ರತಿಭೆ ನಟಿ ಚೈತ್ರಾ ರೈ
ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿರುವ ಮಂಗಳೂರು ಮೂಲದ ನಟಿ ಚೈತ್ರಾ ರೈ ಬಿಗ್ ಬಾಸ್ ಅಖಾಡಕ್ಕಿಳಿದಿದ್ದಾರೆ. 'ಕುಸುಮಾಂಜಲಿ', 'ಬೊಂಬೆಯಾಟವಯ್ಯಾ', 'ಯುಗಾದಿ', 'ಗೆಜ್ಜೆಪೂಜೆ', ಹಾಗೂ 'ನಾಗಮಣಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಇವರು, ಜೀ ಕನ್ನಡದ 'ರಾಧಾ ಕಲ್ಯಾಣ' ಧಾರಾವಾಹಿಯ 'ವಿಶಾಖ' ಎಂಬ ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದರು. ಪ್ರಸ್ತುತ ತೆಲುಗು ಕಿರುತೆರೆಯಲ್ಲಿ ಹೆಚ್ಚು ಬ್ಯುಸಿಯಾಗಿರುವ ಇವರು, ಈ ಬಾರಿ ತೆಲುಗು ಬಿಗ್ಬಾಸ್ ಗೆ 6 ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಎರಡು ಬಾರಿ ಆಫರ್ ರಿಜೆಕ್ಟ್ ಮಾಡಿದ್ದ ಮುಖೇಶ್ ಗೌಡ ಕೊನೆಗೂ ಗ್ರ್ಯಾಂಡ್ ಎಂಟ್ರಿ:
ತೆಲುಗು ಕಿರುತೆರೆ ವೀಕ್ಷಕರಿಗೆ ಮುಖೇಶ್ ಗೌಡ ಚಿರಪರಿಚಿತ ಹೆಸರು. ಸೂಪರ್ ಹಿಟ್ 'ಗುಪ್ಪೆಡಂತ ಮನಸು' ಧಾರಾವಾಹಿಯಲ್ಲಿ 'ರಿಷಿ ಸರ್' ಆಗಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಈ ಕನ್ನಡಿಗ, ಮೈಸೂರು ಮೂಲದ ಹುಡಗುಗ ಬಿಗ್ ಬಾಸ್ ತೆಲುಗು 10ರ ಕೊನೆಯ ಸ್ಪರ್ಧಿಯಾಗಿ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ವಾಸ್ತವವಾಗಿ, ಮುಖೇಶ್ ಗೌಡ ಅವರಿಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಎರಡು ಬಾರಿ ಆಫರ್ ಬಂದಿತ್ತಾದರೂ, ತಾವು ನಟಿಸುತ್ತಿದ್ದ 'ಗುಪ್ಪೆಡಂತ ಮನಸು' ಧಾರಾವಾಹಿಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ಹಾಗೂ ಆ ಪಾತ್ರಕ್ಕೆ ನೀಡಿದ್ದ ಬದ್ಧತೆಯಿಂದಾಗಿ ಬಿಗ್ ಬಾಸ್ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ಕೊನೆಗೂ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ಮಲ್ಟಿಲಿಂಗ್ವಲ್ ನಟ ಆದಿತ್ ಈಶ್ವರನ್ (ತ್ರಿಗುಣ್):
'ತ್ರಿಗುಣ್' ಎಂದೇ ಜನಪ್ರಿಯರಾಗಿರುವ ನಟ ಆದಿತ್ ಈಶ್ವರನ್ ಸಹ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು 'ಕೊಂಡ', 'ಪ್ರೇಮದೇಶಂ', 'ಡೆವಿಲ್' ಮತ್ತು 'ಲೈನ್ ಮ್ಯಾನ್' ನಂತಹ ಪ್ರಮುಖ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಬಹುಭಾಷಾ ಚಿತ್ರರಂಗದ ಅನುಭವ ಹೊಂದಿರುವ ಆದಿತ್ ಈಶ್ವರನ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟದ ವೈಖರಿಯಿಂದ ಯಾವ ರೀತಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

