- Home
- Entertainment
- TV Talk
- ಬಿಗ್ ಬಾಸ್ ಮನೆಯಲ್ಲಿ ಓಂ ಪ್ರಕಾಶ್ ರಾವ್ 2ನೇ ಇನ್ನಿಂಗ್ಸ್; ʻಹುಚ್ಚʼ ನಾಯಕಿಯ ಅಕ್ಕನೇ ಇವರ ಧರ್ಮಪತ್ನಿ
ಬಿಗ್ ಬಾಸ್ ಮನೆಯಲ್ಲಿ ಓಂ ಪ್ರಕಾಶ್ ರಾವ್ 2ನೇ ಇನ್ನಿಂಗ್ಸ್; ʻಹುಚ್ಚʼ ನಾಯಕಿಯ ಅಕ್ಕನೇ ಇವರ ಧರ್ಮಪತ್ನಿ
ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪೈಕಿ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಕೂಡ ಪ್ರಮುಖರಾಗಿದ್ದಾರೆ. ವಿಶೇಷವೆಂದರೆ ಓಂ ಪ್ರಕಾಶ್ ರಾವ್ ಧರ್ಮಪತ್ನಿ ಹುಚ್ಚ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಓಂ ಪ್ರಕಾಶ್ ರಾವ್
ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪೈಕಿ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಕೂಡ ಪ್ರಮುಖರಾಗಿದ್ದಾರೆ. ವಿಶೇಷವೆಂದರೆ, ಓಂ ಪ್ರಕಾಶ್ ರಾವ್ ಅವರಿಗೆ ಇದು ಬಿಗ್ ಬಾಸ್ ಮನೆಯ ಎರಡನೇ ಇನ್ನಿಂಗ್ಸ್. ಓಂ ಪ್ರಕಾಶ್ ರಾವ್ ಅವರನ್ನು ವೇದಿಕೆಗೆ ಬರಮಾಡಿಕೊಂಡ ಕಿಚ್ಚ ಸುದೀಪ್, ಎಂದಿನಂತೆ ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ಗೆ ಬಂದಿದ್ದೀರಾ ಎಂದು ಕಿಚ್ಚ ಕಿಚಾಯಿಸಿದರು. ಇದೇ ವೇಳೆ, ತಮ್ಮಂತಹ ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ ಪ್ರತಿಭಾವಂತ ನಿರ್ದೇಶಕ ಎಂದು ಓಂ ಪ್ರಕಾಶ್ ರಾವ್ ಅವರನ್ನು ಸುದೀಪ್ ಬಣ್ಣಿಸಿದರು.
ʻಹುಚ್ಚʼ ಚಿತ್ರದ ನಾಯಕಿಯ ಅಕ್ಕನೇ ಓಂ ಪ್ರಕಾಶ್ ರಾವ್ ಪತ್ನಿ
ಓಂ ಪ್ರಕಾಶ್ ರಾವ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವಾಗ ಅವರ ಪತ್ನಿಯ ವಿಚಾರವೂ ಗಮನ ಸೆಳೆದಿದೆ. ʻಹುಚ್ಚʼ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿಯ ಅಕ್ಕನೇ ಓಂ ಪ್ರಕಾಶ್ ರಾವ್ ಅವರ ಧರ್ಮಪತ್ನಿ ಎಂಬ ವಿಚಾರ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ವೇದಿಕೆಯಲ್ಲಿ ಓಂ ಪ್ರಕಾಶ್ ರಾವ್ ಅವರ ಪತ್ನಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಹೀಗಾಗಿ, ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಓಂ ಪ್ರಕಾಶ್ ರಾವ್ ಅವರ ಕುಟುಂಬದ ಕುರಿತ ಕುತೂಹಲವೂ ಹೆಚ್ಚಾಗಿದೆ.
ಇದು ಓಂ ಪ್ರಕಾಶ್ ರಾವ್ ಅವರ ಎರಡನೇ ಬಿಗ್ ಬಾಸ್ ಎಂಟ್ರಿ
ಓಂ ಪ್ರಕಾಶ್ ರಾವ್ ಅವರು ಈ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿಯೇ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಿದ್ದರು. ಆದರೆ ಅನಾರೋಗ್ಯದ ಸಮಸ್ಯೆಯಿಂದಾಗಿ ಮನೆಯೊಳಗೆ ಹೆಚ್ಚು ದಿನಗಳ ಕಾಲ ಇರಲು ಸಾಧ್ಯವಾಗಿರಲಿಲ್ಲ. ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು. ಇದೀಗ ಸೀಸನ್ 13ರಲ್ಲಿ ಮತ್ತೆ ದೊಡ್ಮನೆಗೆ ಕಾಲಿಟ್ಟಿರುವ ಓಂ ಪ್ರಕಾಶ್ ರಾವ್, ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಬಾರಿ ಅವರ ಆಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳಿದ ನಿರ್ದೇಶಕ
ಕನ್ನಡ ಚಿತ್ರರಂಗದಲ್ಲಿ ಓಂ ಪ್ರಕಾಶ್ ರಾವ್ ಅವರು ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸುದೀಪ್, ದರ್ಶನ್, ಶಿವರಾಜ್ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ಅವರು ನಿರ್ದೇಶನ ಮಾಡಿದ್ದಾರೆ. ಶಿವರಾಜ್ಕುಮಾರ್ ಅಭಿನಯದ ʻಎ.ಕೆ. 47ʼ ಸಿನಿಮಾ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದ ಪ್ರಮುಖ ಸಿನಿಮಾಗಳಲ್ಲಿ ಒಂದು. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರದ ಈ ಸಿನಿಮಾ ಬಿಡುಗಡೆಯಾದಾಗ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಸುದೀಪ್ ನಾಯಕನಾಗಿ ನಟಿಸಿದ್ದ ʻಹುಚ್ಚʼ ಸಿನಿಮಾ ಓಂ ಪ್ರಕಾಶ್ ರಾವ್ ಅವರ ವೃತ್ತಿಜೀವನದ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಆ್ಯಕ್ಷನ್, ಸೆಂಟಿಮೆಂಟ್ ಹಾಗೂ ಸುದೀಪ್ ಅವರ ಅಭಿನಯದಿಂದಾಗಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ದರ್ಶನ್ ಅಭಿನಯದ ʻಕಳಸಿಪಾಳ್ಯʼ ಕೂಡ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದ ಜನಪ್ರಿಯ ಸಿನಿಮಾಗಳಲ್ಲಿ ಒಂದು. ಸಿನಿಮಾದ ಮಾಸ್ ಡೈಲಾಗ್ಗಳು, ಹಾಡುಗಳು ಹಾಗೂ ದರ್ಶನ್ ಅವರ ಪಾತ್ರ ಇಂದಿಗೂ ಅಭಿಮಾನಿಗಳಲ್ಲಿ ಜನಪ್ರಿಯವಾಗಿದೆ. ದರ್ಶನ್ ಅಭಿನಯದ ʻಅಯ್ಯʼ ಸಿನಿಮಾವನ್ನೂ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ಆ್ಯಕ್ಷನ್ ಪ್ರಧಾನ ಕಥೆಯ ಈ ಚಿತ್ರವೂ ಅವರ ನಿರ್ದೇಶನದ ಪ್ರಮುಖ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
₹3.85 ಕೋಟಿ ವಂಚನೆ ಆರೋಪವೂ ಕೇಳಿಬಂದಿತ್ತು
ಇತ್ತೀಚೆಗೆ ಓಂ ಪ್ರಕಾಶ್ ರಾವ್ ವಿರುದ್ಧ ₹3.85 ಕೋಟಿ ವಂಚನೆ ಆರೋಪವೂ ಕೇಳಿಬಂದಿತ್ತು. ʻಫೀನಿಕ್ಸ್ʼ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ದಾಖಲಾಗಿತ್ತು. ದೂರಿನ ಪ್ರಕಾರ, ಓಂ ಪ್ರಕಾಶ್ ರಾವ್ ಮತ್ತು ಅವರ ತಂಡವು ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವವರಿಂದ ಹಂತ ಹಂತವಾಗಿ ಒಟ್ಟು ₹3 ಕೋಟಿ 85 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸಿನಿಮಾ ನಿರ್ಮಾಣದ ಉದ್ದೇಶಕ್ಕಾಗಿ ಹಣ ಪಡೆದಿದ್ದರೂ, ಸಮಯ ಕಳೆದಂತೆ ಸಿನಿಮಾದ ಯಾವುದೇ ಮಾಹಿತಿ ಸಿಗಲಿಲ್ಲ ಹಾಗೂ ನೀಡಿದ್ದ ಹಣವೂ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಸಿನಿಮಾ ನಿರ್ಮಾಣದ ನೆಪದಲ್ಲಿ ಪಡೆದ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 13ರ ಮೂಲಕ ಓಂ ಪ್ರಕಾಶ್ ರಾವ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ದೊಡ್ಮನೆಯಲ್ಲಿ ಅವರ ಆಟ, ಮಾತು ಹಾಗೂ ವ್ಯಕ್ತಿತ್ವ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.