ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದಂಡ ಮಾತ್ರವಲ್ಲ ರಿವಾರ್ಡ್ ಪಾಯಿಂಟ್ಸ್ ಕೂಡ ಕಡಿತಗೊಳ್ಳಲಿದೆ. ಲಿಮಿಟ್ ದಾಟಿದಾಗ ಲೈಸೆನ್ಸ್ ರದ್ದಾಗಲಿದೆ. ಇದೀಗ ನಿತಿನ್ ಗಡ್ಕರಿ ಹೊಸ ಗ್ರೇಡ್ ಪಾಯಿಂಟ್ಸ್ ನೀತಿ ಜಾರಿಗೊಳಿಸಲು ಮುಂದಾಗಿದೆ.
ನವದೆಹಲಿ (ಸೆ.03) ಭಾರತದಲ್ಲಿ ವಾಹನ ಚಾಲಕರಿಗೆ ಹೊಸ ನೀತಿ ಜಾರಿಯಾಗುತ್ತಿದೆ. ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕರಿತು ಮಾತನಾಡಿದ್ದಾರೆ. ಚಾಲಕರಿಗೆ ಗ್ರೇಡೆಡ್ ಪಾಯಿಂಟ್ಸ್ ನೀಡಲಾಗುತ್ತದೆ. ನಿಯಮ ಉಲ್ಲಂಘಿಸಿದಂತೆ,ಸುರಕ್ಷಿತವಾಗಿ ಚಾಲನೆ ಮಾಡುವ ಚಾಲಕರಿಗೆ ಪಾಯಿಂಟ್ಸ್ ಸಿಗಲಿದೆ. ಇನ್ನು ನಿಯಮ ಉಲ್ಲಂಘಿಸುವ ಚಾಲಕರಿಗೆ ಅಂಕ ಕಡಿತಗೊಳ್ಳಲಿದೆ. ಲಿಮಿಟ್ ದಾಟಿದರೆ ಲೈಸೆನ್ಸ್ ರದ್ದಾಗಲಿದೆ. ಈ ಮೂಲಕ ಸುರಕ್ಷತಾ ಚಾಲನೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಿಯಾಮ್ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ನೀತಿ, ದೇಶದಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಹೇಳಿದ್ದಾರೆ. ಅಪಘಾತದಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಅತೀ ಹೆಚ್ಚು ಪ್ರಕರಣ ದಾಖಲಾಗುತ್ತಿದೆ, ಸಾವು ನೋವು ಪ್ರಮಾಣ ಹೆಚ್ಚು. ಅಪಘಾತ ಪ್ರಮಾಣ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಹೊಸ ನೀತಿಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸುರಕ್ಷಿತ ಚಾಲನೆಗೆ ಒತ್ತು ಕೊಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸುರಕ್ಷಿತ ಚಾಲನೆ ಮಾಡಿದವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ನಿಯಮ ಉಲ್ಲಂಘಿಸಿದವರ ಪಾಯಿಂಟ್ಸ್ ಕಡಿತಗೊಳ್ಳುತ್ತದೆ. ನಿಗದಿತ ಮಿತಿ ದಾಟಿದಾಗ ಲೈಸೆನ್ಸ್ ರದ್ದಾಗುತ್ತದೆ.
ದಂಡದ ಜೊತೆ ಪಾಯಿಂಟ್ಸ್ ಕಡಿತ
ಟ್ರಾಫಿಕ್ ಉಲ್ಲಂಘನೆ ಮಾಡಿದರೆ ಸದ್ಯ ಇರುವ ದಂಡದ ಹಾಗೂ ಶಿಕ್ಷೆ ನಿಯಮವೂ ಇದೆ. ಪ್ರತಿ ಟ್ರಾಫಿಕ್ ಉಲ್ಲಂಘನೆಗೆ ಆಯಾ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಡಿಮೆರಿಟ್ಸ್ ಪಾಯಿಂಟ್ಸ್. ಲಿಮಿಟ್ ತಲುಪಿದ ಬೆನ್ನಲ್ಲೇ ಲೈಸೆನ್ಸ್ ರದ್ದಾಗಲಿದೆ. ರಸ್ತೆಯಲ್ಲಿ ಚಾಲನೆ ಮಾಡುವಾಗ ಪಾಲಿಸಬೇಕಾಗ ನಿಯಮ, ಶಿಸ್ತುಗಳ ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡಲು ಹಾಗೂ ಸುರಕ್ಷತೆ ಚಾಲನೆಗೆ ಅನಿವಾರ್ಯ ಎಂದು ಹೇಳಿದ್ದಾರೆ.
ವಿಮಾ ಪ್ರಯೋಜನ
ಉತ್ತಮ ಚಾಲನೆ ಮಾಡುವ, ಸುರಕ್ಷತೆಯಿಂದ ಚಾಲನೆ ಮಾಡುವ ಚಾಲಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಚಾಲಕರಿಗೆ ರಿವಾರ್ಡ್ ಪಾಯಿಂಟ್ಸ್ ನೀಡಲಾಗುತ್ತದೆ. ಇದರಿಂದ ಕಾರಿನ ವಿಮೆ ರಿನಿವಲ್ ಮಾಡುವಾಗ ರಿಯಾಯಿತಿಗಳನ್ನು ಪಡೆಯುತ್ತಾರೆ. ಇತರ ವಿಮಾ ಸೌಲಭ್ಯಗಳನ್ನು ಚಾಲಕರು ಪಡೆಯುತ್ತಾರೆ.
ಬಸ್ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗುತ್ತಿದೆ. 2024ರಲ್ಲಿ ಬಸ್ ಅಪಘಾತದಿಂದ 3855 ಮಂದಿ ಬಲಿಯಾಗಿದ್ದಾರೆ. ಬಸ್ ಸುರಕ್ಷತಗೆ ಬಸ್ ಬಾಡಿಕೋಡ್ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ರಸ್ತೆ ಚಾಲನೆ, ರಸ್ತೆ ಸುರಕ್ಷತೆಯಲ್ಲಿ ಕೆಲ ಕಡ್ಡಾಯ ನಿಮಯಗಳ ಪಾಲನೆ ಅತ್ಯಗತ್ಯ ಎಂದಿದ್ದಾರೆ. ವಿಶೇಷ ವಾಗಿ ಸ್ಪೀಡ್ ಲಿಮಿಟ್, ಲೇನ್ ಶಿಸ್ತು ಅತ್ಯಗತ್ಯ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಹಂತ ಹಂತವಾಗಿ ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಲಾಗುತ್ತದೆ. ಈ ಮೂಲಕ ಸುರಕ್ಷಿತ ಚಾಲನೆಗೆ ಒತ್ತು ನೀಡಲಾಗುತ್ತದೆ. ಲೇನ್ ಶಿಸ್ತು ಹಾಗೂ ಚಾಲನೆಯಲ್ಲಿರಬೇಕಾದ ಶಿಸ್ತು ಮೈಗೂಡಿಸಿಕೊಂಡರೆ ನೀತಿ, ನಿಯಮಗಳ ಅಗತ್ಯವಿಲ್ಲ. ಆದರೆ ಭಾರತದಲ್ಲಿ ಪ್ರತಿ ವರ್ಷದಿಂದ ವರ್ಷಕ್ಕೆ ಅಪಘಾತ, ಸಾವು ನೋವಿನ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಹೀಗಾಗಿ ಅನಿವಾರ್ಯ ಕ್ರಮಗಳು ಜಾರಿಯಾಗಲಿದೆ ಎಂದಿದ್ದಾರೆ.
ಘನ ವಾಹನಗಳ ತರಬೇತಿಯಲ್ಲೇ ಹಲವು ಸುಧಾರಣೆ ತರಲಾಗುತ್ತದೆ. ಘನ ವಾಹನಗಳ ತರಬೇತಿಯಲ್ಲಿ ಚಾಲಕರಿಗೆ ಚಾಲನಾ ಶಿಕ್ಷಣದ ಅರಿವು ಮೂಡಿಸಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ದಿಚಕ್ರ ವಾಹನ ಅಪಘಾತದಿಂದ ಮೃತಪಟ್ಟವರ ಸಂಖ್ಯೆ 81 ಸಾವಿರ ದಾಟಿದೆ. ಸೀಟ್ ಬೆಲ್ಟ್ ಧರಿಸದೇ ಮೃತಪಟ್ಟ ಸಂಖ್ಯೆ 14 ಸಾವಿರಕ್ಕೇರಿಕೆಯಾಗಿದೆ. 34 ಸಾವಿರ ಹಿಟ್ ಆ್ಯಂಡ್ ರನ್ ಕೇಸ್ ದಾಖಲಾಗಿದೆ. ಇವೆಲ್ಲವೂ ಅಜಾಕರೂಕತೆಯಿಂದ ನಡೆದ ಘಟನೆಗಳು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.


