ಪ್ರಧಾನಿ ನರೇಂದ್ರ ಮೋದಿಯವರು ದೇಶೀಯ ಬಳಕೆಯನ್ನು ಉತ್ತೇಜಿಸಲು ಮತ್ತು ವಿದೇಶಿ ವಿನಿಮಯ ನಷ್ಟವನ್ನು ತಪ್ಪಿಸಲು ಚಿನ್ನದ ಖರೀದಿ ಕಡಿಮೆ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಈ ಕರೆಯ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ದರಗಳು ಗಣನೀಯವಾಗಿ ಕುಸಿದಿದ್ದು, ದೇಶದ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶವನ್ನು ಈ ಲೇಖನ ವಿವರಿಸುತ್ತದೆ.

ಬೆಂಗಳೂರು: ಅಗತ್ಯ ಇದ್ದರಷ್ಟೇ ಚಿನ್ನ ಖರೀದಿಸಿ, ಮನರಂಜನೆಗೆ ವಿದೇಶ ಪ್ರವಾಸ, ಹೊರ ದೇಶಗಳಲ್ಲಿ ಮದುವೆ ಬೇಡ. ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮೊನ್ನೆ ಜನರಿಗೆ ಕರೆ ನೀಡಿದ್ದರು. ಕೆಲ ತಿಂಗಳ ಹಿಂದೆಯೂ ಇದೇ ರೀತಿ ಕರೆ ನೀಡಿದ್ದ ಪ್ರಧಾನಿ, ಮತ್ತೊಮ್ಮೆ ದೇಶದ ಅರ್ಥವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಕರೆ ಕೊಟ್ಟಿದ್ದಾರೆ. ಭಾರತದ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಅಸಾಧಾರಣ ಬೆಳವಣಿಗೆ ಸಾಧಿಸಿರುವುದಕ್ಕೆ ಜನರನ್ನು ಅಭಿನಂದಿಸುತ್ತಲೇ ಪ್ರಧಾನಿ, ಆತ್ಮನಿರ್ಭರ ಭಾರತ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವಂತೆ ದೇಶಿಯ ಉತ್ಪಾದನೆಯನ್ನೇ ಬಳಸಿ ಎಂದಿದ್ದಾರೆ.

ಕುತೂಹಲ ವಿಷಯ ಎಂದರೆ, ಪ್ರಧಾನಿ ಚಿನ್ನದ ಬಗ್ಗೆ ಕರೆ ಕೊಟ್ಟ ಬೆನ್ನಲ್ಲೇ ಮತ್ತೊಮ್ಮೆ ಚಿನ್ನದ ಮಾರುಕಟ್ಟೆಯಲ್ಲಿ ಕೋಲಾಹಲವಾಗಿದೆ. ಆಗಸ್ಟ್ ತಿಂಗಳಲ್ಲಿ ಗರಿಷ್ಠ ಬೆಲೆ ಏರಿಕೆ ಕಂಡಿದ್ದ ಚಿನ್ನದ ದರ 16,397 ರೂಪಾಯಿಯಿಂದ ಮತ್ತೆ 15,202 ರೂಪಾಯಿಗೆ ಕುಸಿದಿದೆ. ಪ್ರಧಾನಿ ಅವರ ಕರೆಗೆ ಜನರು ಓಗೊಡುತ್ತಿರುವ ಹಿನ್ನೆಲೆಯಲ್ಲಿ, ದೇಶದ ಹಿತಕ್ಕಾಗಿ ಮನಸ್ಸು ತುಡಿತ ಇರುವವರು ಇದನ್ನು ಪಾಲನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಇಂಥದ್ದೊಂದು ಕಮಾಲ್​ ಚಿನ್ನದ ಮಾರುಕಟ್ಟೆ ಮೇಲೆ ಆಗುತ್ತಿದೆ. ಅಷ್ಟಕ್ಕೂ ಪ್ರಧಾನಿ ಈ ಕರೆ ಕೊಟ್ಟಿರುವ ಹಿಂದಿರುವ ಉದ್ದೇಶ, ವಿದೇಶಿ ವಿನಿಮಯದಿಂದಾಗುವ ನಷ್ಟ ತಪ್ಪಿಸುವುದಾಗಿದೆ.

ಚಿನ್ನ ಎಲ್ಲೆಲ್ಲೆ ಎಷ್ಟೆಷ್ಟು

ಸೆಪ್ಟೆಂಬರ್ 2ರಂದು ಬೆಂಗಳೂರಲ್ಲಿ ಶುದ್ಧ ಚಿನ್ನದ ಗ್ರಾಂ ಬೆಲೆ 15202 ರೂ ಇದ್ದು, ಬೆಳ್ಳಿ ಬೆಲೆ ಗ್ರಾಂ ಗೆ 245 ರೂ ಇದೆ. ಇನ್ನು ಚಿನ್ನದ ವಿವಿಧ ವಿಷಯಗಳ ಬಗ್ಗೆ ಮಾತನಾಡುವುದಾದರೆ, 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 207 ರೂ ಇಳಿಕೆ ಆಗಿದ್ದು, ಗ್ರಾಂ ಬೆಲೆ ಈಗ 15202 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 2070 ರೂ ಇಳಿಕೆಯಾಗಿದ್ದು 1,52,020 ರೂಪಾಯಿಗೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 190 ರೂ ಇಳಿಕೆಯಾಗಿದೆ. 1 ಗ್ರಾಂ ಬೆಲೆ ಈಗ 13935 ರೂ ಆಗಿದ್ದು 10 ಗ್ರಾಂ ಬೆಲೆ 1900 ರೂ ಇಳಿಕೆಯಾಗಿ, ಈಗ ಬೆಲೆ 1,39,350 ರೂಪಾಯಿ ದಾಖಲಾಗಿದೆ. ಇದರ ಜೊತೆಗೆ ಬೆಳ್ಳಿಯ ಬೆಲೆಯಲ್ಲಿಯೂ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಇಂದು 5 ಸಾವಿರ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಈಗ ಗ್ರಾಂಗೆ 245 ರೂ ಅಗಿದ್ದು, ಕೆಜಿಗೆ 2,45,000 ರೂ ಇದೆ.

ಪ್ರಧಾನಿ ಕೊಟ್ಟ ಸಂದೇಶವೇನು?

ಮೊದಲೇ ಹೇಳಿದಂತೆ ಪ್ರಧಾನಿ ಅವರು ಚಿನ್ನದ ಬಗ್ಗೆ ಮಾತನಾಡಿರುವ ಹಿಂದೆಯೂ ಉದ್ದೇಶವಿದೆ. ನಮ್ಮ ದುಡ್ಡು ನಾವು ಚಿನ್ನ ಏಕೆ ಖರೀದಿಸಬಾರದು? ವಿದೇಶಗಳಲ್ಲಿ ಮೋಜು ಮಾಡಬೇಡಿ ಎನ್ನಲು ಅವರ್ಯಾರು ಎಂಬಿತ್ಯಾದಿಯಾಗಿ ವ್ಯಂಗ್ಯವಾಡುತ್ತಾ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಪ್ರಧಾನಿ ಹೇಳಿರುವುದು ದೇಶದ ಹಿತಕ್ಕಾಗಿ. ವಿದೇಶಿ ವಿನಿಮಯದಿಂದಾಗುವ ನಷ್ಟ ತಪ್ಪಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ.

ವಿಶ್ವಾದ್ಯಂತ ಪ್ರಕ್ಷುಬ್ಧ ವಾತಾವರಣವಿರುವ ಈ ಕಠಿಣ ಸಂದರ್ಭದಲ್ಲೂ ಭಾರತ ಈ ಬೃಹತ್ ಸಾಧನೆ ಮಾಡಿದೆ ಎಂದು ಒತ್ತಿ ಹೇಳಿದ ಪ್ರಧಾನಿ,”ಇಡೀ ವಿಶ್ವವೇ ಯುದ್ಧದ ಕಾರ್ಮೋಡದಲ್ಲಿ ಮುಳುಗಿದೆ. ಸುತ್ತಲೂ ಯುದ್ಧದ ಸುದ್ದಿಗಳೇ ಕೇಳಿಬರುತ್ತಿವೆ ಮತ್ತು ಜಗತ್ತು ಬಿಕ್ಕಟ್ಟುಗಳಿಂದ ಸುತ್ತುವರಿದಿದೆ. ಸಪ್ಲೈ ಚೈನ್ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. 2020ರ ಕೋವಿಡ್ ಸಾಂಕ್ರಾಮಿಕದ ದಿನಗಳಿಂದ ಇಂದಿನವರೆಗೂ ಜಗತ್ತಿನ ಎಲ್ಲಿಯೂ ಸ್ಥಿರತೆ ಕಾಣಿಸುತ್ತಿಲ್ಲ. ಆದಾಗ್ಯೂ, ಭಾರತವು ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ” ಎಂದು ಪ್ರಧಾನಿ ಹೇಳಿದರು.