ಸಿಹಿಯ ಪ್ರಾಣಕ್ಕೆ ಕಂಟಕವಾಗುತ್ತಿದ್ದಾನೆ ಬಾಲಕ. ಸೀತಾರಾಮ ಸೀರಿಯಲ್​ನಲ್ಲಿ ಪದೇ ಪದೇ ತೋರಿಸುತ್ತಿರುವ ಇಂಥ ಸೀನ್​ಗಳಿಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ! 

ಧಾರಾವಾಹಿಗಳು ಇಂದು ಕೇವಲ ಧಾರಾವಾಹಿಗಳಾಗಿ ಉಳಿದಿಲ್ಲ. ಇದು ಬಹಳ ಮನೆಯ ಕಥೆಗಳಾಗಿ, ಬಹಳ ವೀಕ್ಷಕರ ಅದರಲ್ಲಿಯೂ ಮಹಿಳೆಯರ ಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿದೆ. ಊಟ-ತಿಂಡಿ ಬಿಟ್ಟಾದರೂ, ಮನೆ ಕೆಲಸ ಮರೆತಾದರೂ ಟಿವಿ ಮುಂದೆ ಒಂದಾದ ಮೇಲೊಂದು ಸೀರಿಯಲ್​ ನೋಡುವ ಮಹಿಳೆಯರ ದೊಡ್ಡ ವರ್ಗವೇ ಇದೆ. ಮನೆಯಲ್ಲಿರುವ ವಸ್ತುಗಳು ಎಲ್ಲಿಟ್ಟಿದ್ದೇವೆಂದು ಮರೆಯಬಹುದು, ಏನೋ ಕೆಲಸ ಮಾಡಬೇಕು ಎಂದುಕೊಂಡಿದ್ದೆ, ಅದೇನು ಎಂದೇ ನೆನಪಾಗುತ್ತಿಲ್ಲ ಎನ್ನಬಹುದು... ಆದರೆ ನೋಡುವ ಎಲ್ಲಾ ಸೀರಿಯಲ್​ಗಳ ಬೇರೆ ಬೇರೆ ಕಥೆಗಳು, ಅದರಲ್ಲಿ ಬರುವ ಕ್ಯಾರೆಕ್ಟರ್​ಗಳನ್ನು ಮಾತ್ರ ಬಹುತೇಕ ಮಹಿಳೆಯರು ಮರೆಯುವುದೇ ಇಲ್ಲ. ಎಷ್ಟೋ ಮಹಿಳೆಯರು ಅಲ್ಲಿನ ಪಾತ್ರಗಳೇ ತಾವಾಗಿ ಅದನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡುಬಿಡುತ್ತಿದ್ದಾರೆ. ಅಲ್ಲಿರುವ ಕ್ಯಾರೆಕ್ಟರ್​ಗಳು ಅವರ ಅರಿವಿಗೇ ಬಾರದೇ ಮನಸ್ಸನ್ನು ನಾಟುತ್ತಿವೆ. ಇದೇ ಕಾರಣಕ್ಕೆ ಇಂದು ಬಹುತೇಕ ಎಲ್ಲಾ ಧಾರಾವಾಹಿಗಳು ಮಹಿಳಾ ಕೇಂದ್ರಿತವಾಗುತ್ತಿವೆ.

ಇದು ಮಹಿಳೆಯರ ಮಾತಾದರೆ, ತಮ್ಮ ಜೊತೆ ಮಕ್ಕಳನ್ನೂ ಕುಳ್ಳರಿಸಿಕೊಳ್ಳುತ್ತಾರೆ ಅಮ್ಮಂದಿರು. ಇಲ್ಲವೇ ಏಕಾಗ್ರತೆಯಲ್ಲಿ ಸೀರಿಯಲ್​ ನೋಡುವಾಗ ಅವರಿಗೆ ತಮ್ಮ ಮಕ್ಕಳೂ ಅದನ್ನು ನೋಡುತ್ತಿರುತ್ತಾರೆ ಎನ್ನುವ ಪರಿವೇ ಇರುವುದಿಲ್ಲ. ಇದೇ ಕಾರಣಕ್ಕೆ ಇಂದಿನ ಹಲವು ಮಕ್ಕಳಿಗೂ ಸೀರಿಯಲ್​ ಪ್ರೇಮ ಅಮ್ಮಂದಿರಂತೆಯೇ ಹೆಚ್ಚಾಗುತ್ತಿದೆ. ಇಂಥ ಸಂದರ್ಭದಲ್ಲಿ ಸೀರಿಯಲ್​ಗಳಲ್ಲಿ ಮಕ್ಕಳ ಮೇಲಿನ ದ್ವೇಷ, ಮಕ್ಕಳಲ್ಲಿ ಕಿಚ್ಚು ಹೊತ್ತಿರುವ ದೃಶ್ಯಗಳು, ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ದೃಶ್ಯಗಳು ಇದ್ದರೆ ಆ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಲು ಸಾಧ್ಯ ಎನ್ನುವುದನ್ನು ಊಹಿಸುವುದೂ ಕಷ್ಟವೇ. ಇಂದು ಆನ್​ಲೈನ್​ ಆಟಗಳ ಚಟಕ್ಕೆ ಬಿದ್ದು ಪ್ರಾಣವನ್ನೇಕಳೆದುಕೊಂಡ ಮಕ್ಕಳು ಇದ್ದಾರೆ. ಇನ್ನು ಅಮ್ಮಂದಿರು ಬಿಡಲಾಗದ ಸೀರಿಯಲ್​ಗಳಲ್ಲಿಯೂ ಇಂಥ ವಿಷಬೀಜವನ್ನು ಮಕ್ಕಳ ಮನದಲ್ಲಿ ಬಿತ್ತಿದರೆ ಇನ್ನೇನು ಆಗಬಹುದು? 

ಅರಬ್​ ದೇಶ ಲೆಬಿನಾನ್​ನಲ್ಲಿ ಅರಳಿದ ಕಮಲ! ಒಂದೇ ದಿನ 8 ಲಕ್ಷ ವ್ಯೂಸ್​ ಕಂಡ ಡಾ.ಬ್ರೋ ವಿಡಿಯೋದಲ್ಲೇನಿದೆ?

 ಅಂದಹಾಗೆ ಈ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಸೀತಾರಾಮ ಸೀರಿಯಲ್​ನ ಈಗಿರುವ ಸನ್ನಿವೇಶ. ಎಲ್ಲಾ ಕಂಟಕ, ಸಮಸ್ಯೆ, ತೊಂದರೆ, ಅಡೆತಡೆ ಎಲ್ಲವನ್ನೂ ಮೀರಿ ಸೀತಾರಾಮ ಮದುವೆಯಾಗಿದೆ. ಇವರ ಮದುವೆ ಆಗುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಇರುವ ಆತಂಕಗಳು ದೂರ ಆಗಿರುವುದೇನೋ ನಿಜ. ಆದರೆ ಇದೀಗ ಸಿಹಿಗೆ ಕಂಟಕ ಶುರುವಾಗಿದೆ. ಅದೂ ಮನೆಯಲ್ಲಿರುವ ಬಾಲಕನಿಂದ. ಪ್ರತಿ ಹೆಜ್ಜೆಗೂ ಸಿಹಿಯನ್ನು ಆತ ಗೋಳು ಹೊಯ್ದುಕೊಳ್ಳುತ್ತಿದ್ದಾನೆ. ಜ್ಯೋತಿಷಿಗಳು ಬಂದು ಸಿಹಿಯ ಬಾಳಲ್ಲಿ ಹಲವಾರು ಕಂಟಕಗಳು ಇವೆ ಎಂದು ಹೇಳಿ ಹೋಗಿದ್ದಾರೆ. ಅದರಂತೆಯೇ ಬಾಲಕ ಸಿಹಿಯ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾನೆ.

ಸಿಹಿ ಆತನ ಫ್ರೆಂಡ್​ಷಿಪ್​ ಮಾಡಿಕೊಳ್ಳಲು ಹವಣಿಸುತ್ತಿದ್ದಾಳೆ. ಅದರೆ ಬಾಲಕ ಮಾತ್ರ ಸಿಹಿ ಬರುವ ಜಾಗದಲ್ಲಿ ಗೋಲಿ ಇಟ್ಟು ಅವಳನ್ನು ಬೀಳಿಸಿದ್ದಾನೆ. ಈಗ ಇಬ್ಬರೂ ಸ್ನೇಹಿತರಾಗಬೇಕು ಎಂದರೆ ನಾನು ಹೇಳಿದ ಹಾಗೆ ನೀನು ಮಾಡಬೇಕು ಎಂದಿದ್ದಾನೆ. ಅದಕ್ಕೆ ಸಿಹಿ ಒಪ್ಪಿದ್ದಾಳೆ. ಬಾಲಕ ಟೆರೇಸ್​ ಮೇಲೆ ಏಣಿ ಮೂಲಕ ಕರೆದುಕೊಂಡು ಹೋಗಿ ತಾನು ಕೆಳಕ್ಕೆ ಇಳಿದು, ಏಣಿಯನ್ನು ಅಲ್ಲಿಂದ ತೆಗೆದಿದ್ದಾನೆ. ಸಿಹಿ ಕೆಳಗೆ ಬರಲಾಗದೇ ಒದ್ದಾಡುತ್ತಿದ್ದಾಳೆ. ಇದರ ಪ್ರೊಮೋ ಈಗ ಬಿಡುಗಡೆಯಾಗಿದೆ. ಎಲ್ಲವೂ ಭಾರ್ಗವಿ ಪ್ಲ್ಯಾನ್​ನಂತೆಯೇ ನಡೆಯುತ್ತಿದೆ. ದೊಡ್ಡವರು ಏನಾದರೂ ಮಾಡಿ ಹಾಳಾಗಿ ಹೋಗಲಿ, ಆದರೆ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಇಂಥ ದುಷ್ಕೃತ್ಯಗಳು ಅದೆಂಥ ಪರಿಣಾಮ ಬೀರಬಲ್ಲುದು ಎಂಬ ಅರಿವು ನಿರ್ದೇಶಕರಿಗೆ ಇದೆಯಾ ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಟಿಆರ್​ಪಿಗೋಸ್ಕರ ಹೀಗೆ ಮಾಡಬಹುದು, ಆದರೆ ಇಂಥ ದೃಶ್ಯಗಳನ್ನು ಮಕ್ಕಳ ಜೊತೆ ಕುಳಿತು ವೀಕ್ಷಿಸುವ ಅಪ್ಪ-ಅಮ್ಮಂದಿರ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವ ನೆಟ್ಟಿಗರು, ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎನ್ನುತ್ತಿದ್ದಾರೆ. 

ಬಿಗ್​ಬಾಸ್​ ಸ್ಪರ್ಧಿಗಳ ರೊಮಾನ್ಸ್​: ನಮ್ರತಾ ಗೌಡ- ಕಿಶನ್​ ಪ್ರೇಮ ಕಾವ್ಯಕ್ಕೆ ಉಫ್​ ಅಂತಿರೋ ಫ್ಯಾನ್ಸ್​