'ಬಿಗ್ಬಾಸ್ ಅಗ್ನಿಪರೀಕ್ಷೆ'ಯ ಸ್ಟಾರ್ ಸ್ಪರ್ಧಿ ಕುಮಾರಿ, ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ, ಅನಿರೀಕ್ಷಿತವಾಗಿ ಅವರು ಬಿಗ್ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಮತಗಳ ಕೊರತೆಯಿಂದಲ್ಲ, ಬದಲಾಗಿ ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿರುವ ಸತ್ಯ ಬಹಿರಂಗವಾಗಿದೆ.
ಬಿಗ್ಬಾಸ್ ಅಗ್ನಿಪರೀಕ್ಷೆ (Bigg Boss Agni Pareekshe)ಯಲ್ಲಿ ಬಿಗ್ಬಾಸ್ಗೆ ಹೋಗುವ ಆಸೆಯಿಂದ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ 60 ಮಂದಿ ಫೈನಲ್ ಆಗಿ ಆಯ್ಕೆಯಾಗಿದ್ದರು. ಮೂವರನ್ನು ಮಾತ್ರ ಬಿಗ್ಬಾಸ್ ಮನೆಯೊಳಕ್ಕೆ ಕಳುಹಿಸುವುದಾಗಿ ಹೇಳಲಾಗಿದೆ. ಅವರ ಪೈಕಿ ಕುಮಾರಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಎಂಟ್ರಿ ಕೊಟ್ಟಿದ್ದರು ಲಾವಣ್ಯ ಕುಮಾರಿ. ರಕ್ಷಿತಾ ಶೆಟ್ಟಿ ಅವರನ್ನು ನೆನಪಿಸುವಂತೆ ಸಕತ್ ಜೋಕ್ ಮಾಡುತ್ತಿದ್ದರು ಕುಮಾರಿ. ಮುಗ್ಧವಾಗಿ ಮಾತನಾಡಿ ನಾಲ್ಕೂ ಜಡ್ಜಸ್ ಮನೆ ಗೆದ್ದಿದ್ದರು. ‘ಸ್ಟಾರ್ ಕಂಟೆಂಡರ್’ ಆಗಿ ಸೆಲೆಕ್ಟ್ ಕೂಡ ಆಗಿದ್ದರು.
ಸಾಕಷ್ಟು ಟ್ರೋಲ್
ಈಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆದವರೂ ಹಲವರು. ಅವರಿಗಿಂತಲೂ ಹೆಚ್ಚಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು ಕುಮಾರಿ. ನಂಜನಗೂಡು ಮೂಲದ ಕುಮಾರಿ ಅಡಿಷನ್ನಲ್ಲಿ ತನ್ನ ಮಾತಿನ ಕೌಶಲ, ಮುಗ್ಧತೆಯಿಂದ ನಾಲ್ವರು ಜ್ಯೂರಿಗಳ ಮನಗೆದ್ದಿದ್ದರೂ ಈಗ ಔಟ್ ಆಗಿದ್ದಾರೆ. ಇದಾಗಲೇ ತಮಗೆ ಓಟ್ ನೀಡುವಂತೆ ವಿಡಿಯೋಮಾಡಿದ್ದರು ಕುಮಾರಿ. ಆದರೆ ಫೈನಲ್ ಲಿಸ್ಟ್ನಲ್ಲಿ ಇವರ ಹೆಸರು ಇಲ್ಲದೇ ಇರುವುದರಿಂದ ಟ್ರೋಲ್ ಕೂಡ ಆಗಿದ್ದರು.ಒಂದೆಡೆ ಅಕ್ಕ ವೋಟ್ ಕೇಳ್ತಿದ್ದಾಳೆ, ಫೈನಲ್ ಲಿಸ್ಟ್ನಲ್ಲಿ ಹೆಸರೇ ಇಲ್ಲ ಎಂದು ಲೇವಡಿಮಾಡಿದವರೂ ಹಲವರು. ಆದರೆ ನಿಜ ಕಾರಣ ಬೇರೆನೇ ಇದೆ. ಅಷ್ಟಕ್ಕೂ ಸೆಲೆಕ್ಟ್ ಆಗಬೇಕಿದ್ದ ಕುಮಾರಿ, ಎಲ್ಲರ ಮನಸ್ಸನ್ನು ಗೆದ್ದ ಈಕೆ ಔಟ್ ಆಗಿದ್ದು, ವೈದ್ಯರ ಸಲಹೆಯ ಮೇರೆಗೆ ಎನ್ನುವ ಸತ್ಯ ಈಗ ರಿವೀಲ್ ಆಗಿದೆ.
ಈ ಕುರಿತು ಪ್ರೊಮೋ ಒಂದನ್ನು ಕಲರ್ಸ್ ವಾಹಿನಿ ಶೇರ್ ಮಾಡಿದೆ. ಅದರಲ್ಲಿ ಆ್ಯಂಕರ್ ನಿರಂಜನ್ ಅವರು, ಕುಮಾರಿ ಅವರು ಬಿಗ್ಬಾಸ್ ಆಟ ಮುಂದುವರೆಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಇದೇ ಕಾರಣಕ್ಕೆ, ವೈದ್ಯರ ಸಲಹೆ ಮೇರೆಗೆ ಬಿಗ್ಬಾಸ್ನಿಂದ ಹೊರಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನು ಕೇಳಿ ತೀರ್ಪುಗಾರರು ಬೇಸರ ಪಟ್ಟುಕೊಂಡಿದ್ದಾರೆ.
ಕುಮಾರಿ ಕಣ್ಣೀರು
ಬಳಿಕ ಕುಮಾರಿ, ಅಳುತ್ತಲೇ, ನಾನು ಹುಟ್ಟಿದಾಗಿನಿಂದ ಒಂದು ದಿನನೂ ಬೆಂಗಳೂರು ನೋಡೇ ಇರಲಿಲ್ಲ. ಹಾಗಾಗಿ ನಾನು ಊರಿಂದ ಬರುವಾಗ ಎಲ್ಲನೂ ಎಂಜಾಯ್ ಮಾಡಿಕೊಂಡು ಬಂದೆ. ನಾನು ವಾಪಸ್ ಹೋದ್ರೆ ಯಾವಾಗ ಬರುತ್ತೇನೆ ಗೊತ್ತಿಲ್ಲ. ಇದು ಲಾಸ್ಟ್ ಆಗುತ್ತದೆ ಅನ್ನೋದು ನನಗೆ ಬೇಜಾರ್ ಆಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.


