ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ, ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್, ಅಕ್ರಮ ಹಣದಲ್ಲಿ ತನ್ನ ಗೆಳತಿಗೆ 26 ಲಕ್ಷ ಮೌಲ್ಯದ ಚಿನ್ನಾಭರಣ ಕೊಡಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಸಹೋದರನ ಹೆಸರಲ್ಲಿ ವಿಲಾಸಿ ವಿಲ್ಲಾ ಖರೀದಿಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.

 ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ಆರೋಪಿಯಾಗಿರುವ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಅಕ್ರಮ ಹಣದಲ್ಲಿ ತನ್ನ ಗೆಳತಿಗೆ ಚಿನ್ನಾಭರಣ ಕೊಡಿಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.

ಜ್ಞಾನೇಂದ್ರ ಕುಮಾರ್‌ ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್‌ಗೆ ತನ್ನ ಗೆಳತಿ ಕರೆದೊಯ್ದು ಸುಮಾರು 26 ಲಕ್ಷ ರು. ಮೌಲ್ಯದ ಚಿನ್ನಾಭರಣ ಕೊಡಿಸಿದ್ದರು. ಇದಕ್ಕೆ ಬಸವರಾಜ್ ಎಂಬ ಹೆಸರಿನ ಅಕೌಂಟ್‌ನಿಂದ ಬಿಲ್‌ ಪಾವತಿ ಮಾಡಲಾಗಿತ್ತು. ಬೀದರ್‌ನ ಲಕ್ಷ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಖಾತೆಯಿಂದ ಹಣ ಪಾವತಿ ಮಾಡಲಾಗಿತ್ತು. ಆಭರಣ ಖರೀದಿಸಿದ ಬಿಲ್ ಅನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು, ಜ್ಞಾನೇಂದ್ರ ಗೆಳತಿ ಜತೆ ಚಿನ್ನ ಖರೀದಿಸಿರುವ ಪೊಟೋಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.

ವಿಲಾಸಿ ವಿಲ್ಲಾ ಖರೀದಿ:

ಅಕ್ರಮ ಹಣದಲ್ಲಿ ಜ್ಞಾನೇಂದ್ರ ತನ್ನ ಸಹೋದರನ ಹೆಸರಲ್ಲಿ ಬೆಂಗಳೂರಿನಲ್ಲಿ ವಿಲ್ಲಾ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಜ್ಞಾನೇಂದ್ರ 2024ರ ಫೆಬ್ರವರಿಯಿಂದ 2026 ಮಾರ್ಚ್‌ವರೆಗೂ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದರು. ಈ ವೇಳೆ ಅಕ್ರಮ ದುಡ್ಡಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪ ಐಷಾರಾಮಿ ವಿಲ್ಲಾ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಐಡಿ ತನಿಖೆ ಮುಂದುವರಿಸಿದೆ.