ಸಿನಿಮಾದಲ್ಲಿ ಹೆಚ್ಚು ಖರ್ಚಾಗುವುದು ಸಂಭಾವನೆ ವಿಚಾರದಲ್ಲಿ. ಹೀರೋ ಸೇರಿದಂತೆ ಎಲ್ಲರೂ ಸಂಭಾವನೆಯಲ್ಲಿ ಅರ್ಧ ತೆಗೆದುಕೊಂಡು ಉಳಿದರ್ಧವನ್ನು ಚಿತ್ರಕ್ಕೇ ಹೂಡಿಕೆ ಮಾಡಬೇಕು ಎಂದರು ನಿರ್ದೇಶಕ ಕಿರಣ್‌ ರಾಜ್‌.

1. ಕನ್ನಡ ಚಿತ್ರರಂಗದ ಇವತ್ತಿನ ಪರಿಸ್ಥಿತಿಗೆ ಯಾರು ಯಾರನ್ನೂ ದೂರುವ ಅಗತ್ಯ ಇಲ್ಲ. ಯಾಕೆಂದರೆ ಎಲ್ಲಾ ಭಾಷೆಯಲ್ಲೂ ಇದೇ ಪರಿಸ್ಥಿತಿ ಇದೆ. ಓಟಿಟಿ, ಟೀವಿ ರೈಟ್ಸ್‌, ಡಬ್ಬಿಂಗ್‌, ರೀಮೇಕ್‌... ಹೀಗೆ ಸಿನಿಮಾವೊಂದರ ಬಿಡುಗಡೆಯ ಪೂರ್ವ ಇದ್ದ ಎಲ್ಲಾ ಬಿಸಿನೆಸ್‌ಗಳು ಈಗ ಬಾಗಿಲು ಹಾಕಿಕೊಂಡಿವೆ.

2. ಈಗ ಎಲ್ಲರೂ ನಿರ್ಮಾಪಕರ ಜವಾಬ್ದಾರಿಯಲ್ಲಿ ಪಾಲುದಾರರಾಗಬೇಕು. ನಿರ್ಮಾಪಕರಂತೆ ನಿರ್ದೇಶಕ, ನಟ- ನಟಿಯರು, ನಿರ್ದೇಶಕ, ತಂತ್ರಜ್ಞರು ಹೀಗೆ ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳುವ ಅನಿವಾರ್ಯ ಮತ್ತು ಅವಶ್ಯಕತೆ ಇದೆ.

3. ಸಿನಿಮಾದಲ್ಲಿ ಹೆಚ್ಚು ಖರ್ಚಾಗುವುದು ಸಂಭಾವನೆ ವಿಚಾರದಲ್ಲಿ. ಹೀರೋ ಸೇರಿದಂತೆ ಎಲ್ಲರೂ ಸಂಭಾವನೆಯಲ್ಲಿ ಅರ್ಧ ತೆಗೆದುಕೊಂಡು ಉಳಿದರ್ಧವನ್ನು ಚಿತ್ರಕ್ಕೇ ಹೂಡಿಕೆ ಮಾಡಬೇಕು. ಅಂದರೆ 10 ರು. ಸಂಭಾವನೆ ಎಂದರೆ 5 ರು. ತೆಗೆದುಕೊಳ್ಳಬೇಕು. ಹೀಗೆ ಹೂಡಿಕೆ ಮಾಡುವ ಮೂಲಕ ಚಿತ್ರದ ಕೊನೆಯವರೆಗೂ ನಿರ್ಮಾಪಕನ ಜೊತೆಗೆ ನಿಂತು ಸೋಲು- ಗೆಲುವು, ಲಾಭ- ನಷ್ಟ ಎಲ್ಲದಕ್ಕೂ ನಾವೂ ಜವಾಬ್ದಾರಿ ಹೊರಬಹುದು. ಗೆದ್ದರೆ ಎಲ್ಲರೂ ಗೆಲ್ಲೋಣ ಎನ್ನುವ ಭಾವನೆ ನಮ್ಮಲ್ಲಿ ಮೂಡಬೇಕಿದೆ.

4. ಈಗ ಚಿತ್ರರಂಗಕ್ಕೆ ಎದುರಾಗಿರುವ ಸ್ಥಿತಿ ಒಂದು ರೀತಿ ಒಳ್ಳೆಯದು. ಯಾಕೆಂದರೆ ಸಿನಿಮಾಗಳಿಗೆ ಚಿತ್ರಮಂದಿರಗಳು ಹೊರತಾಗಿ ಉಳಿದೆಲ್ಲವು ಬಾಗಿಲು ಮುಚ್ಚಿದಾಗ ಈ ಹಿಂದಿನಂತೆ ಥಿಯೇಟರ್‌ಗಾಗಿಯೇ ಸಿನಿಮಾ ಮಾಡುವ ಕಾಲ ಮತ್ತೆ ಬಂದಿದೆ. ಬೇರೆ ಬೇರೆ ಮೂಲಗಳಿಂದ ದುಡ್ಡು ಬರುತ್ತದೆ ಎನ್ನುವ ಭಾವನೆಯಲ್ಲಿ ಹೇಗೆ ಬೇಕೋ ಹಾಗೆ ಸಿನಿಮಾ ಮಾಡುವುದಕ್ಕೆ ಈಗ ಅವಕಾಶ ಇಲ್ಲ.

ಗೋಲ್ಡನ್‌ ಡೇಸ್‌ ಬರೋದು ಪಕ್ಕಾ

5. ತಿಂಗಳಿಗೆ ಕನಿಷ್ಠ ಎರಡು ಸಿನಿಮಾಗಳಾದರೂ ಚಿತ್ರಮಂದಿರಗಳಲ್ಲಿ ಸೂಪರ್‌ ಹಿಟ್‌ ಆಗಬೇಕು. ಇದು ಚಿತ್ರರಂಗದಲ್ಲಿರುವ ಎಲ್ಲರ ಗುರಿಯಾದರೆ ಚಿತ್ರೋದ್ಯಮದ ಪಾಲಿಗೆ ಗೋಲ್ಡನ್‌ ಡೇಸ್‌ ಬರೋದು ಪಕ್ಕಾ.

6. ಪ್ರೇಕ್ಷಕರನ್ನು ದೂರಬಾರದು. ನಮ್ಮಲ್ಲಿ ಎಲ್ಲಾ ರೀತಿಯ ಸಿನಿಮಾಗಳನ್ನು ಗೆಲ್ಲಿಸುವ ಪ್ರೇಕ್ಷಕ ಇದ್ದಾರೆ. ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿರುವ ‘ಕೆಜಿಎಫ್‌’, ಕ್ಲಾಸಿಕ್‌ ಎನಿಸುವ ‘777 ಚಾರ್ಲಿ’, ದೈವಿಕ ಎನಿಸುವ ‘ಕಾಂತಾರ’, ಹಾರರ್‌ ಕಾಮಿಡಿಯ ‘ಸು ಫ್ರಮ್‌ ಸೋ’, ಪ್ರೇಮ ಕತೆಯಾಗಿರುವ ‘ಲವ್‌ ಮಾಕ್ಟೇಲ್‌’ ಚಿತ್ರಗಳನ್ನು ನೋಡಿ ಮೆಚ್ಚಿದ್ದಾರೆ. ಹೀಗಾಗಿ ಅವರನ್ನು ನಾವು ಇಂಥದ್ದೇ ಜಾನರ್‌ಗೇ ಸೀಮಿತ ಮಾಡದೆ, ನಾವೂ ಕೂಡ ನಿರ್ದಿಷ್ಟ ಜಾನರ್‌ಗೆ ಅಂಟಿಕೊಳ್ಳದೆ ಸಿನಿಮಾ ಮಾಡಬೇಕಿದೆ.