'ಖಲೀಫಾ' ಸಿನಿಮಾ ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದ ಸಸ್ಯಾಹಾರಿ ನಟಿ ಮಾಳವಿಕಾ ಶರ್ಮಾ ಅವರಿಗೆ ಪತ್ರಕರ್ತರೊಬ್ಬರು ಗೋಮಾಂಸ ತಿನ್ನುತ್ತೀರಾ ಎಂದು ಅನಗತ್ಯ ಪ್ರಶ್ನೆ ಕೇಳಿ ಮುಜುಗರ ಉಂಟುಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಈ ಪ್ರಶ್ನೆ ಕೇಳಲಾಗಿದೆ ಎಂದು ನೆಟ್ಟಿಗರು ಪತ್ರಕರ್ತನನ್ನು ಟ್ರೋಲ್ ಮಾಡುತ್ತಿದ್ದಾರೆ.
ಕೇರಳಕ್ಕೂ, ಗೋಮಾಂಸಕ್ಕೂ ಭಾರಿ ನಂಟಿದೆ. ಇಲ್ಲಿನ ಬಹುತೇಕ ಮಂದಿ ಇದನ್ನು ಸೇವಿಸುತ್ತಾರೆ. ಗೋಮಾಂಸ ಬ್ಯಾನ್ ಆಗಿದ್ದರೂ ಕೆಲವು ಕಡೆಗಳಲ್ಲಿ ಅದು ಅವ್ಯಾಹತವಾಗಿ ಖುಲ್ಲಂಖುಲ್ಲಾ ಆಗಿಯೇ ಮಾರಾಟ ಆಗುತ್ತಿದೆ. ಹಾಗೆಂದು ಕಂಡಕಂಡವರಿಗೆಲ್ಲಾ ಗೋಮಾಂಸ ತಿನ್ನುತ್ತೀರಾ ಎನ್ನುವ ಪ್ರಶ್ನೆ ಕೇಳಿದರೆ ಹೇಗೆ? ಅಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದ್ದು, ಸಿನಿಮಾ ಪ್ರಚಾರಕ್ಕೆ ಬಂದಿರುವ ಸಸ್ಯಾಹಾರಿ ನಟಿಗೆ ಗೋಮಾಂಸ ತಿನ್ನುತ್ತೀರಾ ಎಂದು ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಇಂದಿನ ಹಲವು ಪತ್ರಕರ್ತರಿಗೆ ಎಲ್ಲಿ, ಏನು ಕೇಳಬೇಕು ಎನ್ನುವುದು ತಿಳಿದಿಲ್ಲ ಎನ್ನುವುದು ಜಗಜ್ಜಾಹಿರವಾಗಿರುವ ಮಾತೇ. ಹಾಗೆಂದು ವೇದಿಕೆಯ ಮೇಲೆ ಒಬ್ಬರಿಗೆ ಅತೀ ಮುಜುಗರ ಆಗುವಂಥ, ಅನಗತ್ಯ ಪ್ರಶ್ನೆಗಳನ್ನು ಕೇಳಿ ಫೇಮಸ್ ಆಗುವ ಖಯಾಲಿ ಇರುತ್ತದೆ ಎನ್ನುವುದಕ್ಕೆ ಈ ಪ್ರಶ್ನೆ ಸಾಕ್ಷಿಯಾಗಿದೆ.
ಇಂಥದ್ದೊಂದು ಮುಜುಗರ ಅನುಭವಿಸಿದ್ದು, ಬಹುಭಾಷಾ ನಟಿ, ಗಣೇಶ್ ಅವರ ಜೊತೆ 'ಕೃಷ್ಣಂ ಪ್ರಣಯ ಸಖಿ' ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಮಾಳವಿಕಾ ಶರ್ಮಾ (Malavika Sharma). ಅವರು ತಮ್ಮ ಮಲಯಾಳಿ ಸಿನಿಮಾ "ಖಲೀಫಾ: ದಿ ಇಂಟ್ರೋ" ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದರು. ಮಾಧ್ಯಮ ಸಂವಾದದ ಸಮಯದಲ್ಲಿ, ವರದಿಗಾರರೊಬ್ಬರು ನಿಮಗೆ ಗೋಮಾಂಸ ಇಷ್ಟವೇ, ಅದು ಹೇಗೆ ಎನ್ನಿಸಿತು ಎಂದು ಅನಗತ್ಯ ಪ್ರಶ್ನೆ ಕೇಳಿದ್ದಾನೆ. ಸಿನಿಮಾಕ್ಕೂ, ಈ ಪ್ರಶ್ನೆಗೂ ಏನೂ ಸಂಬಂಧವೇ ಇಲ್ಲ. ಪತ್ರಿಕಾಗೋಷ್ಠಿಗೆ ಬರುವಾಗಲೂ ಗೋಮಾಂಸದ ಕನಸನ್ನೇ ಕಾಣುತ್ತಿದ್ದ ಈ ಪತ್ರಕರ್ತ, ಇಂಥದ್ದೊಂದು ಪ್ರಶ್ನೆ ಕೇಳಿದಾಗ, ಅಲ್ಲಿ ಸ್ವಲ್ಪ ಗಲಿಬಿಲಿಯಾಯಿತು.
ನಟಿಗೆ ಇರುಸುಮುರುಸು
ಅದರಲ್ಲಿಯೂ ನಟಿಗೆ ಇದರಿಂದ ಇರುಸುಮುರುಸು ಉಂಟಾಯಿತು. ಆದರೆ, ಸಮಾಧಾನದಿಂದ ನಟಿ, ನಾನು ಸಸ್ಯಾಹಾರಿ. ಮಾಂಸವೆಲ್ಲಾ ತಿನ್ನುವುದಿಲ್ಲ. ಗೋಮಾಂಸ ತಿಂದಿಲ್ಲ ಎಂದರು. ಮಾಳವಿಕಾ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ ಮತ್ತು ಪ್ರಶ್ನೆ ಕೇಳಿದ ವ್ಯಕ್ತಿ ಗಮನಾರ್ಹ ಟ್ರೋಲಿಂಗ್ ಎದುರಿಸುತ್ತಿದ್ದಾರೆ. ಆತನಿಗೆ ಬೇಕಾಗಿದ್ದು ಕೂಡ ಇದೇ ಇರಬಹುದು.
ಈ ಪ್ರಶ್ನೆಯು ಉದ್ದೇಶಪೂರ್ವಕವಾಗಿ ಕೇಳಿ ಪ್ರಚೋದನೆ ಉಂಟು ಮಾಡುವ ಪ್ರಶ್ನೆಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಮನರಂಜನೆಯಾಗಿ ಪರಿವರ್ತಿಸಲಾಗುತ್ತದೆ ಮತ್ತು ಗೋಮಾಂಸ ಸೇವನೆ ಬಗ್ಗೆ ಹಿಂದೂ ಸೆಲೆಬ್ರಿಟಿಗೆ ಕೇಳಿ ವಿಕೃತ ಆನಂದ ಪಡೆಯುವುದು ಆ ಸೋ ಕಾಲ್ಡ್ ಪತ್ರಕರ್ತನ ಉದ್ದೇಶವಾಗಿತ್ತು ಎಂದೇ ಹೇಳಲಾಗುತ್ತಿದೆ.
ಹಿಂದೂ ಭಾವನೆಗೆ ಉದ್ದೇಶಪೂರ್ವಕ ಧಕ್ಕೆ?
ಇನ್ನು ನಟಿ, ಮಾಳವಿಕಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಮಲಯಾಳಂ ಸಿನಿಮಾ, ತೆಲುಗು ಸಿನಿಮಾ ಮತ್ತು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮಾಳವಿಕಾ 2018 ರಲ್ಲಿ ನೆಲ ಟಿಕೆಟ್ ಚಿತ್ರದ ಮೂಲಕ ತೆಲುಗು ಚೊಚ್ಚಲ ಪ್ರವೇಶ ಮಾಡಿದರು. ನಂತರ ಅವರು 2021 ರಲ್ಲಿ ತಮಿಳು ಚಿತ್ರ ರೆಡ್ ನಲ್ಲಿ ಕಾಣಿಸಿಕೊಂಡರು. 2022 ರಲ್ಲಿ, ಅವರು ಕಾಫಿ ವಿತ್ ಕಾದಲ್ ನಲ್ಲಿ ನಟಿಸಿದರು. 2024 ರಲ್ಲಿ, ಅವರು ಭೀಮಾದಲ್ಲಿ ಕಾಣಿಸಿಕೊಂಡರು. ಅದೇ ವರ್ಷ, ಅವರು ಹರೋಮ್ ಹರಾ ಚಿತ್ರದಲ್ಲೂ ನಟಿಸಿದರು.


