'ಆಪರೇಷನ್ ಸಿಂದೂರ' ಕಾರ್ಯಾಚರಣೆಯ ವೇಳೆ ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿಗೆ ತತ್ತರಿಸಿದ ಪಾಕಿಸ್ತಾನ, ದಾಳಿ ನಿಲ್ಲಿಸುವಂತೆ ಅಂಗಲಾಚಿದೆ. ಭಾರತದ ದಾಳಿಯಿಂದಾದ ಹಾನಿಗೆ ತೃಪ್ತರಾಗಿದ್ದರೆ ಕದನವಿರಾಮ ಘೋಷಿಸಿ ಎಂದು ಪಾಕ್ನ ಡಿಜಿಎಂಒ ಹಾಟ್ಲೈನ್ನಲ್ಲಿ ಮನವಿ ಮಾಡಿಕೊಂಡಿದ್ದರು ಎಂಬ ವಿಷಯ ಸಾಕ್ಷ್ಯಚಿತ್ರವೊಂದರಿಂದ ಬಹಿರಂಗವಾಗಿದೆ.
ನವದೆಹಲಿ: ನಮ್ಮತ್ತ ಇಷ್ಟೊಂದು ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿ ನಿಮಗೆ ತೃಪ್ತಿಯಾಗಿದ್ದರೆ ದಯವಿಟ್ಟು ದಾಳಿ ನಿಲ್ಲಿಸಿ’ ಎಂದು ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನದ ಡಿಜಿಎಂಒ ಅಂಗಲಾಚಿದ್ದರು ಎಂಬ ವಿಷಯ, ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾದ ಸಾಕ್ಷ್ಯಚಿತ್ರದಿಂದ ಬಯಲಾಗಿದೆ.
ಬಲಿಷ್ಠ ಅಸ್ತ್ರವಾದ ಬ್ರಹ್ಮೋಸ್
2025ರ ಮೇ 7ರಿಂದ 10ರ ವರೆಗೆ, ಸುಮಾರು 71 ತಾಸು ನಡೆದ ಪಾಕ್ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ‘ಡಿಸ್ಕ್ಲಾಸಿಫೈಡ್: ಆಪರೇಷನ್ ಸಿಂದೂರ್’ನಲ್ಲಿ ಬಿಚ್ಚಿಡಲಾಗಿದೆ. ಸಾಕ್ಷ್ಯಚಿತ್ರದ ಪ್ರಕಾರ, ಮೇ 10ರ ರಾತ್ರಿ 1.30ಕ್ಕೆ ಪಾಕ್ ಕಡೆಯಿಂದ ದೆಹಲಿಯತ್ತ ಭಾರೀ ಪ್ರಮಾಣದಲ್ಲಿ ಕ್ಷಿಪಣಿ, ಡ್ರೋನ್, ರಾಕೆಟ್ ಇತ್ಯಾದಿಗಳನ್ನು ಹಾರಿಸಲಾಗಿತ್ತು ಹಾಗೂ ಇವುಗಳನ್ನು ಹರ್ಯಾಣದ ಸಿರ್ಸಾದಲ್ಲಿ ಹೊಡೆದುರುಳಿಸಲಾಗಿತ್ತು. ಅಂತೆಯೇ, ಈ ದಾಳಿಗೆ ಪ್ರತಿಯಾಗಿ ಭಾರತದ ವಾಯುಪಡೆ, ತನ್ನ ಬತ್ತಳಿಕೆಯಲ್ಲಿರುವ ಬಲಿಷ್ಠ ಅಸ್ತ್ರವಾದ ಬ್ರಹ್ಮೋಸ್ ಅನ್ನು ಹೊರತೆಗೆಯಿತು.
ದಯವಿಟ್ಟು ದಾಳಿ ನಿಲ್ಲಿಸಿ ಹಾಗೂ ಕದನವಿರಾಮಕ್ಕೆ ಒಪ್ಪಿಕೊಳ್ಳಿ
ಪಾಕಿಸ್ತಾನದ ವಾಯುನೆಲೆಗಳು ಸೇರಿದಂತೆ ಪ್ರಮುಖ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಬ್ರಹ್ಮೋಸ್ ಬಳಸಿ ದಾಳಿ ನಡೆಸಲಾಯಿತು. ಇದರ ಬೆನ್ನಲ್ಲೇ, ಯುದ್ಧ ನಿಲ್ಲಿಸುವಂತೆ ಅಮೆರಿಕದ ಮೂಲಕ ಪಾಕ್ ಮನವಿ ಮಾಡಿತು. ಆದರೆ 3ನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ತಿರಸ್ಕರಿಸಿದ ಕಾರಣ ಹಾಟ್ಲೈನ್ ಪಾಕ್ನ ಡಿಜಿಎಂಒ ಕಡೆಯಿಂದ ಮೇಲಿಂದ ಮೇಲೆ ಕರೆಗಳು ಬರತೊಡಗಿದವು. ಮಧ್ಯಾಹ್ನ 3.30ಕ್ಕೆ ಅತ್ತಲಿಂದ ಮಾತನಾಡಿದ ಮೇ. ಜ. ಕಾಶಿಫ್ ಅಬ್ದುಲ್ಲಾ, ‘ಬ್ರಹ್ಮೋಸ್ ಬಳಸಿ ನೀವು ನಮಗೆ ಬಹಳಷ್ಟು ಹಾನಿ ಮಾಡಿದ್ದೀರಿ. ಇದರಿಂದ ತೃಪ್ತಿಯಾಗಿದ್ದರೆ ದಯವಿಟ್ಟು ದಾಳಿ ನಿಲ್ಲಿಸಿ ಹಾಗೂ ಕದನವಿರಾಮಕ್ಕೆ ಒಪ್ಪಿಕೊಳ್ಳಿ’ ಎಂದು ದುಂಬಾಲು ಬಿದ್ದರು. ಕೊನೆಗೆ ಸಂಜೆ 5.30ಕ್ಕೆ ಕದನವಿರಾಮ ಘೋಷಣೆಯಾಯಿತು.


